ಕಲಬುರಗಿ: ರಾಜೀವ್ ಗಾಂಧಿ ವಸತಿ ನಿಗಮದಲ್ಲಿ ದುಡ್ಡು ಕೊಟ್ಟವರಿಗೆ ಮಾತ್ರ ಮನೆ ಮಂಜೂರಾಗುತ್ತಿವೆ ಎಂದು ಶಾಸಕ ಬಿ.ಆರ್. ಪಾಟೀಲ್ ಆರೋಪ ಮಾಡಿದ್ದರು. ಸದ್ಯ ಅವರ ಕ್ಷೇತ್ರದಲ್ಲಿ ಅದು ಸಾಬೀತಾಗಿದೆ.
ಶಾಸಕ ಬಿ.ಆರ್. ಪಾಟೀಲ್ ಆರೋಪದಂತೆ ದುಡ್ಡು ಕೊಟ್ಟವರಿಗಷ್ಟೇ ಮನೆ ಮಂಜೂರು ಆಗಿರುವ ಆರೋಪ ಕೇಳಿ ಬಂದಿದೆ. ದುಡ್ಡು ಕೊಟ್ಟರೆ ಮನೆ ಎಂಬ ಅಸಲಿ ಸತ್ಯವನ್ನು ಆಳಂದ ಕ್ಷೇತ್ರದ ಝಳಕಿ ( ಕೆ) ಗ್ರಾಮದ ಜನರು ಸಾಬೀತು ಮಾಡಿದ್ದಾರೆ. ಸೂರು ಇಲ್ಲದವರಿಗೆ ಮನೆ ನೀಡದೆ, ದುಡ್ಡು ಕೊಟ್ಟವರಿಗೆ ಮಾತ್ರ ಮನೆ ಹಂಚಿಕೆ ಮಾಡಿರುವ ಆರೋಪ ಈಗ ಕೇಳಿ ಬಂದಿದೆ.
ಫಲಾನುಭವಿಗಳಿಗೆ ಒಂದು ಮನೆ ಹಂಚಿಕೆ ಮಾಡಲು 15ರಿಂದ 20 ಸಾವಿರ ದುಡ್ಡು ನೀಡಬೇಕು ಎಂದು ಝಳಕಿ ಗ್ರಾಮಸ್ಥರ ಆರೋಪ ಮಾಡಿದ್ದಾರೆ. ದುಡ್ಡು ಕೊಟ್ಟಿರುವ ಗ್ರಾಮದ ಫಲಾನುಭವಿಗಳು ಈ ರೀತಿ ಆರೋಪ ಮಾಡಿದ್ದಾರೆ. ಕವಲಗಾ ಗ್ರಾಮ ಪಂಚಾಯತಿ ಅಧ್ಯಕ್ಷ, ಪಿಡಿಓ ಮತ್ತು ಸದಸ್ಯರ ಮೇಲೆ ಅಕ್ರಮ ಆರೋಪ ಕೇಳಿ ಬಂದಿದೆ. ಫಲಾನುಭವಿಗಳಿಗೆ ಮನೆ ಕೊಡುವುದಕ್ಕೂ ಮುನ್ನ ಅಧಿಕಾರಿಗಳು ದುಡ್ಡು ಕಲೆಕ್ಷನ್ ಮಾಡಿದ್ದಾರೆಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಶಾಶ್ವತ ಸೂರು ಇದ್ದವರಿಗೂ ಹಣ ಪಡೆದು ಮನೆ ಮಂಜೂರು ಮಾಡಿರುವ ಆರೋಪ ಕೇಳಿ ಬಂದಿದೆ. ದುಡ್ಡು ಕೊಡಲು ಆಗದವರು ಸೂರಿಲ್ಲದೆ ಬದುಕುವಂತಾಗಿದೆ. ಕವಲಗಾ ಗ್ರಾಮ ಪಂಚಾಯತಿಗೆ ಈ ಬಾರಿ 200 ಮನೆಗಳು ಮಂಜೂರಾಗಿದ್ದು, ಫಲಾನುಭವಿಗಳಿಗೆ ಮನೆ ಹಂಚಿಕೆ ಮಾಡಲು ಹಣ ಪಡೆದು ಭಾರೀ ಅಕ್ರಮ ಎಸಗಿದ್ದಾರೆಂಬ ಆರೋಪ ಕೇಳಿ ಬಂದಿದೆ. ಈ ಕುರಿತು ತನಿಖೆಗೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.