ದೆಹಲಿಯ ಹೆಚ್.ಡಿ. ಕುಮಾರಸ್ವಾಮಿ ನಿವಾಸ ನಿನ್ನೆ ಹೈವೋಲ್ಟೇಜ್ ಬೆಳವಣಿಗೆಗಳಿಗೆ ಸಾಕ್ಷಿಯಾಗಿದೆ.
ಕೇಂದ್ರ ಸಚಿವ ಕುಮಾರಸ್ವಾಮಿ ನಿವಾಸಕ್ಕೆ ಸಾಲು ಸಾಲು ಬಿಜೆಪಿ ನಾಯಕರು ಭೇಟಿ ನೀಡಿದ್ದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ರಾಜ್ಯ ಬಿಜೆಪಿ ಅಧ್ಯಕ್ಷರ ನೇಮಕ ವಿಚಾರವಾಗಿ ಚರ್ಚೆಗಳು ಗರಿಗೆದರಿರುವಾಗಲೇ ಕುಮಾರಸ್ವಾಮಿ ನಿವಾಸ ರಾಜಕೀಯ ಚಟುವಟಿಕೆಯ ತಾಣವಾಗಿ ಮಾರ್ಪಟ್ಟಿತ್ತು. ವಿಪಕ್ಷ ನಾಯಕ ಆರ್. ಅಶೋಕ್, ಪಕ್ಷದ ವರಿಷ್ಠರ ಭೇಟಿಗೆ ಅಂತಾ ದೆಹಲಿಗೆ ತೆರಳಿದ್ದಾರೆ. ಆದರೆ, ನಿನ್ನೆ ಏಕಾಏಕಿ ಹೆಚ್ ಡಿಕೆ ಮನೆಗೆ ಭೇಟಿ ನೀಡಿದ್ದಲ್ಲದೆ 1 ಗಂಟೆಗೂ ಹೆಚ್ಚು ಕಾಲ ಚರ್ಚಿಸಿದ್ದಾರೆ. ಈ ವೇಳೆ ಚಿಕ್ಕಬಳ್ಳಾಪುರ ಸಂಸದ ಸುಧಾಕರ್ ಕೂಡಾ ಜೊತೆಗಿದ್ದದ್ದು ವಿಶೇಷ.
ಏಕಾಏಕಿ, ಒಕ್ಕಲಿಗ ನಾಯಕರ ಈ ಸಭೆ. ಅಧ್ಯಕ್ಷರ ಕುರ್ಚಿ ಕದನದ ನಡುವೆ ನಡೆದಿರುವುದು ತೀವ್ರ ಕುತೂಹಲ ಕೆರಳಿಸಿದೆ. ಇದೇ ವೇಳೆ, ಕೇಂದ್ರ ಸಚಿವ ವಿ ಸೋಮಣ್ಣ ಕೂಡ ಕುಮಾರಸ್ವಾಮಿ ನಿವಾಸಕ್ಕೆ ದೌಡಾಯಿಸಿದ್ದು, ಅರ್ಧ ಗಂಟೆಗೂ ಹೆಚ್ಚು ಕಾಲ ಚರ್ಚಿಸಿರೋದು ಏನೋ ಹೊಸ ದಾಳ ಉರುಳಿಸುವ ಕಸರತ್ತಿನ ಸುಳಿವನ್ನು ನೀಡುತ್ತಿರುವುದು ಸುಳ್ಳಲ್ಲ.