ಹಾಸನ: ಜಿಲ್ಲೆಯ ಮಲೆನಾಡು ಭಾಗದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಬೆಣಗಿನ ಹಳ್ಳ ಉಕ್ಕಿ ಹರಿಯುತ್ತಿದೆ.
ಬೆಣಗಿನ ಹಳ್ಳ ಉಕ್ಕಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ದೋನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. 2018ರಲ್ಲಿ ಸುರಿದಿದ್ದ ಭಾರೀ ಮಳೆಗೂ ಕಿರು ಸೇತುವೆ ಕೊಚ್ಚಿಹೋಗಿತ್ತು. ಏಳು ವರ್ಷ ಆದರೂ ಹೊಸ ಸೇತುವೆ ನಿರ್ಮಾಣ ಮಾಡದೆ ನಿರ್ಲಕ್ಷ್ಯ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಇದೀಗ ಭಾರೀ ಮಳೆಗೆ ಬೆಣಗಿನಹಳ್ಳ ಉಕ್ಕಿ ಹರಿಯುತ್ತಿದೆ. ಹಳ್ಳದ ಮತ್ತೊಂದು ಬದಿಯಲ್ಲಿರುವ ಜಮೀನುಗಳಿಗೆ ತೆರಳಲಾಗದೆ ರೈತರು ಪರದಾಟ ನಡೆಸಿದ್ದಾರೆ.
ಇದರಿಂದಾಗಿ ಗ್ರಾಪಂ ಕಚೇರಿ, ಆಸ್ಪತ್ರೆ, ಮಾರುಕಟ್ಟೆಗೆ ಹತ್ತಾರು ಕಿಲೋಮೀಟರ್ ಸುತ್ತಾಡಬೇಕಾದ ಅನಿವಾರ್ಯತೆ ಬಂದಿದೆ. ಮಳೆಗಾಲದ ಮೂರು ನಾಲ್ಕು ತಿಂಗಳು ರೈತರು ತಮ್ಮ ಜಮೀನುಗಳಿಗೆ ಸಂಪರ್ಕ ಕಡಿದುಕೊಂಡಿರುವ ಹಿನ್ನೆಲೆಯಲ್ಲಿ ಜಮೀನಿಗೆ ಹೋಗಿ ಬರಲು ಹತ್ತಾರು ಕಿಲೋಮೀಟರ್ ಸುತ್ತಾಡ ಬೇಕಾಗುತ್ತಿದೆ. ಹೀಗಾಗಿ ಸೇತುವೆ ನಿರ್ಮಿಸಿ ಕೊಡಬೇಕೆಂದು ಸಾರ್ವಜನಿಕರು ಮನವಿ ಮಾಡುತ್ತಿದ್ದಾರೆ.