ಕೇವಲ ಎರಡೇ ಎರಡು ದಿನ ಬಾಕಿ ಇದೆ. ಮತ್ತೊಂದು ಅಕ್ಷಯ ತೃತೀಯ ಈಗಾಗಲೇ ಹೆಬ್ಬಾಗಿಲಿಗೆ ಬಂದು ನಿಂತಿದೆ. ಚಿನ್ನದ ಬೆಲೆ ಐತಿಹಾಸಿಕ ಗರಿಷ್ಠ ಮಟ್ಟ ತಲುಪಿದ್ರೂ, ಖರೀದಿ ಭರಾಟೆಯೇನು ಕಮ್ಮಿಯಿಲ್ಲ. ಹಾಗಿದ್ದರೆ ಅಕ್ಷಯ ತೃತೀಯದ ಶುಭಗಳಿಗೆಯಲ್ಲಿ ನೀವೂ ಬಂಗಾರ ಖರೀದಿಸುವ ಪ್ಲ್ಯಾನ್ ಮಾಡಿದ್ದರೆ ಈ ಸ್ಟೋರಿ ನೋಡಿ. ತೃತೀಯದ ಯಾವ ಮುಹೂರ್ತದಲ್ಲಿ ಖರೀದಿ ನಡೆಸಿದರೆ ಸಂಪತ್ತು ದ್ವಿಗುಣವಾಗುತ್ತೆ ಗೊತ್ತಾ?
ಅದ್ಯಾವ ಮುಹೂರ್ತದಲ್ಲಿ ನಡೆಯಬೇಕು ಚಿನ್ನದ ಖರೀದಿ…?
ಸನಾತನ ಕಾಲದಿಂದಲೂ ಅಕ್ಷಯ ತೃತೀಯಕ್ಕೆ ತನ್ನದೇ ಆದ ವಿಶಿಷ್ಠ ಮಹತ್ವವಿದೆ. ಈ ಅಪರೂಪದ ಮುಹೂರ್ತದಲ್ಲಿ ಚಿನ್ನ ಖರೀದಿಸಿದರೆ ಭವಿಷ್ಯದಲ್ಲಿ ಸಂಪತ್ತು ದ್ವಿಗುಣವಾಗುತ್ತೆ ಎಂಬ ನಂಬಿಕೆಯಿದೆ. ಹೀಗಾಗಿಯೇ ಭಾರತೀಯರು ಈ ಪವಿತ್ರ ದಿನದಂದು ತಮ್ಮ ಉಳಿತಾಯದ ಹಣವನ್ನು ಚಿನ್ನದ ಮೇಲೆ ವಿನಿಯೋಗಿಸುವ ಪದ್ಧತಿ ಇದೆ. ಹಾಗಿದ್ದರೆ ಕೇವಲ ಚಿನ್ನ, ಬೆಳ್ಳಿಯಷ್ಟೇ ಅಲ್ಲಾ, ಭೂಮಿ ಖರೀದಿ, ವಾಹನ ಖರೀದಿಯೂ ಅಕ್ಷಯ ತೃತೀಯದಂದು ಅತ್ಯುತ್ತಮ ಫಲ ನೀಡಲಿದೆ. ಹಾಗಾಗಿ ಅಂದಿನ ದಿನ ನಿವೇಶನ, ಕೃಷಿ ಭೂಮಿ ಇಲ್ಲವೇ ವಾಹನ ಖರೀದಿಸಿದ್ರೂ ಲಕ್ಷ್ಮೀ ನಿಮ್ಮ ಮನೆ ಪ್ರವೇಶಿಸಲಿದ್ದಾಳೆ.
ಚಿನ್ನದ ಖರೀದಿಗೆ ಇಲ್ಲಿದೆ ಪ್ರಾಶಸ್ತ್ಯ ಸಮಯ
ಹಾಗೆ ನೋಡಿದರೆ ಈ ಬುಧವಾರ ಅಕ್ಷಯ ತೃತೀಯ. ಈ ಬಾರಿ ಒಟ್ಟು 8 ಗಂಟೆ 30 ನಿಮಿಷಗಳ ಅವಧಿವರೆಗೂ ಅತ್ಯಂತ ಶುಭ ಗಳಿಗೆ ಕೂಡಿ ಬಂದಿದೆ. ಇನ್ನೂ ವಿಶೇಷ ಅಂದರೆ ಈ ಬಾರಿ ತೃತೀಯದ ಮುಹೂರ್ತ ಏಪ್ರಿಲ್ 29ರ ಮಂಗಳವಾರ ಸಂಜೆ 5 ಗಂಟೆ 31ನಿಮಿಷಕ್ಕೇ ಶುರುವಾಗಲಿದೆ.
ಅಷ್ಟೇ ಅಲ್ಲಾ ಏಪ್ರಿಲ್ 30ರ ಮಧ್ಯಾಹ್ನ 2 ಗಂಟೆ 12 ನಿಮಿಷಕ್ಕೆಲ್ಲಾ ಅಂತ್ಯವಾಗಲಿದೆ. ಅಷ್ಟೇ ಅಲ್ಲಾ ಈ ಅವಧಿಯಲ್ಲಿ ಚಿನ್ನ ಖರೀದಿಗೆ ಅತ್ಯಂತ ಸಮಂಜಸ ಘಳಿಗೆ ಅಂದರೆ ಅದು ಏಪ್ರಿಲ್ 30ರ ಬುಧವಾರದ ಮುಂಜಾನೆ 5 ಗಂಟೆ 41 ನಿಮಿಷದಿಂದ ಮಧ್ಯಾಹ್ನ 2.12 ನಿಮಿಷದವರೆಗೂ ಆಗಿದೆ.
ಹಾಗಿದ್ದರೆ ತಡ ಯಾಕೆ, ಚಿನ್ನ, ಬೆಳ್ಳಿ, ಆಸ್ತಿ ಖರೀದಿಗೆ ಮುಹೂರ್ತ ನಿಗದಿಯಾಗಿದೆ. ಇನ್ನೇನಿದ್ದರೂ ಖರೀದಿ ಮಾತ್ರ ಬಾಕಿ. ತಡಮಾಡದೆ ಈ ಶುಭ ಸಂದರ್ಭದಲ್ಲಿ ನಿಮ್ಮ ಸ್ವತ್ತನ್ನು ನಿಮ್ಮದಾಗಿಸಿಕೊಂಡು ಉತ್ತಮ ಫಲ ಕಂಡುಕೊಳ್ಳಿ.