ಮುಗ್ಗರಿಸಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎನ್ನುವ ಜಾಯಮಾನ ಪಾಕಿಸ್ತಾನದ್ದು, ಆರ್ಥಿಕವಾಗಿ ಪಾಪರ್ ಆಗಿರುವ ಪಾಕಿಸ್ತಾನದ ಅಸಲಿ ಬಣ್ಣ ಜಗತ್ತಿನ ಮುಂದೆ ಬೆತ್ತಲಾಗಿ ದಶಕಗಳೇ ಕಳೆದು ಹೋಗಿವೆ. ಆದರೂ ತನ್ನ ದುರಹಂಕಾರ ಮಾತ್ರ ಪಾಕಿಗಳು ಬಿಡುವ ಲಕ್ಷಣಗಳು ಕಾಣುತ್ತಿಲ್ಲ. ಇದಕ್ಕೆ ಸಾಕ್ಷಿ ಎನ್ನುವಂತೆ ಪಹಲ್ಗಾಮ್ ದಾಳಿಗೂ ನಮಗೂ ಸಂಬಂಧವಿಲ್ಲ. ಭಾರತ ಕಾಲ್ಕೆರೆದು ಜಗಳಕ್ಕೆ ನಿಂತರೆ ಬಗ್ಗು ಬಡಿತೀವಿ ಅಂತೆಲ್ಲಾ ಅಬ್ಬರಿಸಿ ಬೊಬ್ಬಿರಿದ ಪಾಕಿಗಳ ಬಣ್ಣ ಬಟಾಬಯಲಾಗಿದೆ. ಇದಕ್ಕೆ ಉತ್ತಮ ನಿದರ್ಶನವೆಂದರೆ, ಪಾಕ್ ಸೇನೆಯಲ್ಲಿ ಬಂಡಾಯದ ಬಾವುಟ ಹಾರಿದೆ.
ಪಾಕಿಸ್ಥಾನ ಸೇನಾ ಮುಖ್ಯಸ್ಥರೇ ನಾಪತ್ತೆ!
ಪಹಲ್ಗಾಮ್ ಹತ್ಯಾಕಾಂಡದ ಬೆನ್ನಲ್ಲೇ ಪಾಕ್ ಪತರಗುಟ್ಟಿ ಹೋಗಿರುವುದು ನಿಜ. ಅದರಲ್ಲೂ ಯಾವಾಗ ಪ್ರಧಾನಿ ಮೋದಿ ಸಂಚುಕೋರರ ಹುಟ್ಟಡಗಿಸ್ತೀವಿ ಅಂದರೋ ಅಲ್ಲಿಗೆ ಪಾಕ್ ಮಕಾಡೆ ಮಲಗಿತ್ತು. ರಾತ್ರೋ ರಾತ್ರಿ ಸೇನಾ ಮುಖ್ಯಸ್ಥ ಆಸಿಂ ಮುನೀರ್ ನಾಪತ್ತೆಯಾಗಿದ್ದಾರೆ. ತಮ್ಮದೇನು ತಪ್ಪಿಲ್ಲ ಅಂದರೆ, ನಿಂತು ಎದುರಸಬೇಕಿದ್ದ ಮುನೀರ್ ಹೀಗೆ ನಾಪತ್ತೆಯಾಗಿರುವುದು ಅವರದ್ದೇ ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ. ಇದರ ನಡುವೆಯೇ, ಪಾಕ್ ಸೇನೆಯಲ್ಲಿ ಬಂಡಾಯ ಶುರುವಾಗಿದೆ. ಸೇನೆಯ ದೊಡ್ಡ ಹುದ್ದೆಯಲ್ಲಿದ್ದವರಿಂದ ಹಿಡಿದು ಸಿಪಾಯಿವರೆಗೂ ಹಲವರು ರಾಜೀನಾಮೆ ನೀಡಲು ಮುಂದಾಗಿದ್ದಾರೆ.
ಯುದ್ಧ ನಡೆದರೆ ಪಾಕಿಸ್ತಾನಕ್ಕೆ ಯೋಧರ ಬರ
ಭಾರತ ಸಮರ ಸಾರಲು ಕ್ಷಣಗಣನೆ ಶುರುವಾಗಿದೆ ಎನ್ನುವ ಲೆಕ್ಕ ಪಾಕಿಗಳಿಗೂ ಸಿಕ್ಕಾಗಿದೆ. ಯುದ್ಧ ಆರಂಭವಾದರೆ ಅದೇನು ಕತೆ ಎನ್ನುವ ಆತಂಕ ಸೇನೆಯ ಹಲವು ಹಂತಗಳ ಸಿಬ್ಬಂದಿಯನ್ನು ಬಿಟ್ಟೂ ಬಿಡದೆ ಕಾಡುತ್ತಿದೆ. ಇದರ ನಡುವೆ ಖುದ್ದು ಸೇನಾ ಮುಖ್ಯಸ್ಥರೇ ನಾಪತ್ತೆಯಾಗಿರುವುದು ನಮಗಿನ್ನು ಉಳಿಗಾಲವಿಲ್ಲ ಎನ್ನುವುದನ್ನು ಮನದಟ್ಟು ಮಾಡಿದೆ.
ಹೀಗಾಗಿಯೇ 5 ಸಾವಿರಕ್ಕೂ ಹೆಚ್ಚು ಸೇನಾ ಸಿಬ್ಬಂದಿ ರಾಜೀನಾಮೆ ಇಲ್ಲಾ ಸ್ವಯಂ ನಿವೃತ್ತಿಗೆ ಅರ್ಜಿ ಹಾಕಿದ್ದಾರೆ. ಇದು ಕೇವಲ ಕಳೆದೊಂದು ವಾರದಲ್ಲಿ ಆಗಿರೋ ಬೆಳವಣಿಗೆ. ಹೀಗಾಗಿ ಒಂದೊಮ್ಮೆ ಯುದ್ಧ ನಡೆದರೆ ಪಾಕ್ ಗೆ ಯೋಧರ ಕೊರತೆ ಕಾಡುತ್ತಾ ಎನ್ನುವ ಅನುಮಾನ ಹುಟ್ಟಿಸಿದೆ. ಇದರ ನಡುವೆ, ಸೇನಾ ಮುಖ್ಯಸ್ಥ ಆಸಿಂ ಮುನೀರ್ ಇಸ್ಲಾಮಾಬಾದ್ ನಲ್ಲಿರುವ ಸೇನಾ ಬಂಕರ್ ನಲ್ಲಿ ಅಡಗಿದ್ದಾರಾ ಅನ್ನೋ ಚರ್ಚೆಯೂ ನಡೆದಿದೆ. ಒಟ್ನಲ್ಲಿ ಪಾಕ್ ಗೆ ಸಮಸ್ಯೆಗಳ ಸರಮಾಲೆ ಇನ್ನಿಲ್ಲದಂತೆ ಬೆನ್ನಿಗೆ ಬಿದ್ದಿರೋದಂತೂ ಸುಳ್ಳಲ್ಲ.