ಮಂಡ್ಯ : ನಮ್ಮ ಗ್ಯಾರಂಟಿಗಳು ಒಂದು ಜಾತಿ, ಧರ್ಮಗಳಿಗೆ ಸೀಮಿತವಾಗಿಲ್ಲ. ಎಲ್ಲಾ ಜಾತಿ, ಧರ್ಮಗಳಿಗೂ ಕೊಟ್ಟಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ನಗರದ ಕುರುಬರ ಹಾಸ್ಟೆಲ್ ಶಂಕುಸ್ಥಾಪನಾ ಸಮಾರಂಭದಲ್ಲಿ ಮಾತನಾಡಿದ ಅವರು, ಇದೊಂದು ಐತಿಹಾಸಿಕ ಸಭೆ. 64-65ರಲ್ಲಿ ಈ ಹಾಸ್ಟೆಲ್ ನಿರ್ಮಾಣವಾಗಿತ್ತು. ಅನೇಕ ಸಲ ಈ ಹಾಸ್ಟೆಲ್ಗೆ ಭೆಟಿ ಮಾಡಿದ್ದೇನೆ. ಹೊಸ ಹಾಸ್ಟೆಲ್ ಮಾಡಿದಾಗ ಅದಕ್ಕೆ ಅನುದಾನ ಕೊಡ್ತೀನಿ ಅಂತಾ ಹೇಳಿದ್ದೆ. ಹಾಗಾಗಿ ಇವತ್ತು ಇಲ್ಲಿ ನಾನು ಬಂದಿದ್ದೇನೆ. ಇದರ ಉದ್ದೇಶ ಹಿಂದುಳಿದ ವರ್ಗದವರಿಗೆ ಹಾಸ್ಟೆಲ್ ಕಟ್ಟಿಸಬೇಕು ಹಾಗೂ ಎಲ್ಲಾ ವಿದ್ಯಾರ್ಥಿಗಳಿಗೂ ಕೂಡ ಉನ್ನತ ರೀತಿಯ ಶಿಕ್ಷಣ ಸಿಗಬೇಕು. ಪ್ರತಿಯೊಂದು ಜಿಲ್ಲೆಯಲ್ಲೂ ಹಾಸ್ಟೆಲ್ ಇದ್ದರೆ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲವಾಗುತ್ತದೆ ಎನ್ನುವುದು ನನ್ನ ಭಾವನೆ. ಮಾಜಿ ಸಚಿವ ಕೆ.ಎನ್.ನಾಗೇಗೌಡ ಕೂಡ ಇದೇ ಹಾಸ್ಟೆಲ್ನಲ್ಲಿ ಓದಿದ್ದು ಅಂತಾರೆ ಅದು ಕೂಡ ನಿಜ ಇರಬಹುದು ಎಂದು ಹೇಳಿದ್ದಾರೆ.
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಶುಗರ್ ಫ್ಯಾಕ್ಟರಿ ಆರಂಭ ಮಾಡಿ ಜೊತೆಗೆ ಕನ್ನಂಬಾಡಿಯನ್ನು ಕೂಡ ಕಟ್ಟಿಸಿದರು. ಅವರ ಕಾಲದಲ್ಲಿ ರಾಜ್ಯದಲ್ಲಿ ಎಲ್ಲವೂ ಕೂಡ ರಾಜ್ಯ ಅಭಿವೃದ್ಧಿ ಆಗಿತ್ತು. ಅಂತಹವರನ್ನು ಇಂದಿನ ದಿನಗಳಲ್ಲಿ ನೆನೆಯುವುದು ನಮ್ಮ ಕರ್ತವ್ಯ. ಶುಗರ್ ಫ್ಯಾಕ್ಟರಿಗೆ ಹಿಂದೆಯೂ ನಾನು ಅನುದಾನ ಕೊಟ್ಟಿದ್ದೆ. ಈಗಲೂ ಕೊಟ್ಟಿದ್ದೇನೆ. ಜೊತೆಗೆ ವಿದ್ಯುತ್ ಬಿಲ್ ಅಸಲು, ಬಡ್ಡಿಯನ್ನು ಕೂಡ ಮನ್ನಾ ಮಾಡಿದ್ದೇನೆ ಎಂದು ತಿಳಿಸಿದರು.
ಮಂಡ್ಯ ಜನ ಸ್ವಲ್ಪ ಒರಟು, ಆದರೆ, ಒಳ್ಳೆಯ ಮನಸ್ಸಿನವರು. ಉಪಕಾರ ಮನೋಭಾವ ನಮ್ಮ ಮಂಡ್ಯ ಜನಕ್ಕಿದೆ. ಮಂಡ್ಯಕ್ಕೆ ಕೃಷಿ ವಿವಿ ಮಂಜೂರು ಮಾಡಿ, ಅನುದಾನ ಕೂಡ ಮೀಸಲಿದೆ, ಆದರೂ ಇವತ್ತು ಯಾರು ಯಾರೋ ನಾನು ಮೆಡಿಕಲ್ ಕಾಲೇಜು ಕೊಟ್ಟೆ ಅಂತಾರೆ. ಧರ್ಮಸಿಂಗ್ ಸಿಎಂ ಆಗಿ, ನಾನು ಉಪಮುಖ್ಯಮಂತ್ರಿಯಾಗಿದ್ದಾಗ ಕೊಟ್ಟಿದ್ದು. ಕೃಷಿ ಮಂತ್ರಿಯಾಗಿ ಚಲುವರಾಯಸ್ವಾಮಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಅವರಿಗೂ ಇನ್ನು ಬೆಂಬಲ ಕೊಡೋಣ. ಮಂಡ್ಯದಲ್ಲಿ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ಕೊಟ್ಟಿದ್ದೇನೆ. ಇದೆಲ್ಲ ನಮ್ಮ ಸರ್ಕಾರದ ಅವಧಿಯಲ್ಲೇ ಆಗಿರೋದು. ಈ ಬಾರಿ ನಾಲಾಭಿವೃದ್ಧಿಗೆ ನೀರಾವರಿಗೂ ಹೆಚ್ಚು ಅನುದಾನ ಕೊಟ್ಟಿದ್ದೇವೆ. ಮಂಡ್ಯ ಜನ ಸ್ವಲ್ಪ ಒರಟಾಗಿದ್ದರು. ನಾಡಿನ ಜನರಿಗೆ ಕೃಷಿ ಉತ್ಪನ್ನ ಕೊಡುತ್ತಿದ್ದಾರೆ. ಮಂಡ್ಯ ಅಭಿವೃದ್ಧಿ ಆದರೆ, ಕೃಷಿಯಲ್ಲೂ ಹೆಚ್ಚು ಅಭಿವೃದ್ಧಿ ಸಾಧ್ಯ. ಮಂಡ್ಯ ಜನ, ಕೃಷಿ ಚಟುವಟಿಕೆಯಲ್ಲಿ ತೊಡಗಿರುವವರು ಅನ್ನದಾತರು. ಒಂದು ಕಾಲದಲ್ಲಿ ಆಹಾರ ಉತ್ಪಾದನೆಯ ಅಭಾವ ಇತ್ತು.ಇವತ್ತು ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿದ್ದೇವೆ. ಕಳೆದ ವರ್ಷ ರಾಜ್ಯದಲ್ಲಿ 148 ಲಕ್ಷ ಮೆಟ್ರಿಕ್ ಟನ್ ಆಹಾರ ಉತ್ಪನ್ನ ಮಾಡಿದ್ದೇವೆ. 149 ಗುರಿಯಲ್ಲಿ 148 ಲಕ್ಷ ಮೆಟ್ರಿಕ್ ಟನ್ ಆಹಾರ ಉತ್ಪಾದನೆಯಾಗಿದೆ. ಈ ಸಲವೂ ಉತ್ತಮ ಮಳೆ ಆಗೇ ಆಗುತ್ತೆ. ಬಿಜೆಪಿಯವರು ಹೇಳ್ತಿದ್ರು ಸಿದ್ದರಾಮಯ್ಯನ ಕಾಲ್ಗುಣ ಸರಿ ಇಲ್ಲ ಅಂತ. ಅವರು ಯಾವತ್ತೂ ಬಡವರು, ರೈತರ ಪರ ಇಲ್ಲ. ಸಾಮಾಜಿಕ ನ್ಯಾಯದ ಪರ ಅವರಿಲ್ಲ ಎಂದು ಕಿಡಿಕಾರಿದರು.
ಬಿಜೆಪಿಯವರು ನಮ್ಮ ಗ್ಯಾರಂಟಿಗಳನ್ನ ಟೀಕೆ ಮಾಡುತ್ತಿದ್ದರು. ಕಳೆದ ವರ್ಷ 58 ಸಾವಿರ ಕೋಟಿ ಖರ್ಚು ಮಾಡುತ್ತಿದ್ದೇವು. ಈ ವರ್ಷ 50 ಸಾವಿರ ಕೋಟಿ ಮೀಸಲಿಟ್ಟೆದ್ದೇವೆ. ಕ್ಯಾಪಿಟಲ್ ಎಕ್ಸಪೆಂಡೀಚರ್ ಗೆ 30 ಸಾವಿರ ಕೋಟಿ ರೂ. ಖರ್ಚು ಸೇರಿದಂತೆ ಒಟ್ಟು ಎಲ್ಲವನ್ನೂ ಸೇರಿ 80 ಸಾವಿರ ಕೋಟಿ ರೂ. ಈ ವರ್ಷ ವರ್ಷ ಖರ್ಚು ಮಾಡುತ್ತಿದ್ದೇವೆ. ಕರ್ನಾಟಕ ಸರ್ಕಾರ ಪಾಪರ್ ಆಗಿದೆ ಅಂತಿದ್ದರು. ಈ ವರ್ಷ ರಾಜ್ಯದಲ್ಲಿ ಒಂದೂವರೆ ಲಕ್ಷ ಕೋಟಿಯಲ್ಲಿ ವಿವಿಧ ಅಭಿವೃದ್ಧಿಯಾಗಿದೆ. ರಾಜಕೀಯವಾಗಿ ನಾನು ಇವತ್ತು ಏನು ಮಾತಾಡಲು ಹೋಗಲ್ಲ. ಅವಕಾಶ ಇರುವವರು ಹಾಸ್ಟೆಲ್ ಗೆ ಹಣಕಾಸು ಕೊಡಿ ಇಲ್ಲವಾದರೆ, ನಾನೇ ಸರ್ಕಾರದಿಂದ ಅನುದಾನ ಕೊಡುತ್ತೇನೆ. ಮೈಸೂರಿನಲ್ಲೂ ಮಹಿಳೆಯರ ಹಾಸ್ಟೆಲ್ ಮಾಡಿದ್ದೇವೆ. ಇದು ಬರೀ ಕುರುಬರ ಹಾಸ್ಟೆಲ್ ಅಲ್ಲ. ಎಲ್ಲಾ ವರ್ಗದ ಬಡವರ ಮಕ್ಕಳ ಹಾಸ್ಟೆಲ್ ಆಗಿದೆ. ಆರ್ಥಿಕವಾಗಿ, ಸಾಮಾಜಿಕವಾಗಿ ಮಹಿಳೆಯರಿಗೆ ಶಕ್ತಿ ತುಂಬುವ ಸರ್ಕಾರ ನಮ್ಮ ಸರ್ಕಾರ. ಕನಿಷ್ಠ ನೂರು ವಿದ್ಯಾರ್ಥಿಗಳಿಗೆ ಅನುಕೂಲ ಆಗುವಂತಹ ಹಾಸ್ಟೆಲ್ ನಿರ್ಮಾಣ ಆಗಲಿ. ದಾನಿಗಳು ಕೊಡುವವರು ಕೊಡಲಿ ಇಲ್ಲವಾದರೆ, ನಾನೇ ಕೊಡ್ತೀನಿ. ಮಂಡ್ಯ ಜನ ಬಹಳ ವರ್ಷಗಳಿಂದ ನನಗೆ ಬೆಂಬಲ ಕೊಡ್ತಾ ಬಂದಿದ್ದಾರೆ. ಏಳರಲ್ಲಿ ಆರು ಗೆದ್ದಿರೋದಕ್ಕೆ ಇವರುಗಳೇ ಕಾರಣ ಎಂದರು. ನಮ್ಮ ಶಾಸಕರು, ಜಿಲ್ಲಾ ಮಂತ್ರಿ ಎಲ್ಲರನ್ನ ಒಟ್ಟಿಗೆ ತಕೊಂಡು ಹೋಗುತ್ತಿದ್ದಾರೆ. ಅವರೆಲ್ಲರೂ ಇರುವುದರಿಂದ ನಮ್ಮ ಕಾಂಗ್ರೆಸ್ ಪಕ್ಷ ಉಳಿಯಲು ಕಾರಣ. ಅವಕಾಶದಿಂದ ವಂಚಿತರಾದವರಿಗೆ ಶಕ್ತಿ ಬಂದ್ರೆ ಸಮ ಸಮಾಜ ನಿರ್ಮಾಣ ಸಾಧ್ಯ. ಎಲ್ಲ ಜಾತಿ, ಧರ್ಮದ ಜನರು ಆರ್ಥಿಕವಾಗಿ, ಸಾಮಾಜಿಕವಾಗಿ ಮುಂದುವರೆಯಬೇಕು. ವರ್ಗ ರಹಿತ, ಜಾತಿ ರಹಿತ ಸಮಾಜ ನಿರ್ಮಾಣ ಸಂವಿಧಾನದ ಆಶಯವಾಗಿದೆ. ಆ ಪ್ರಯತ್ನದಲ್ಲಿ ಸ್ವಲ್ಪ ದೂರ ಸಾಗಿದ್ದೇವೆ. ಇನ್ನೂ ಸಾಗಬೇಕಿದೆ. ಮಂಡ್ಯ ಜಿಲ್ಲೆ ಬೇರೆ ಜಿಲ್ಲೆಗಳಂತೆ ಬೆಳೆಯಬೇಕು ಎಂದು ಸಿಎಂ ಹೇಳಿದ್ದಾರೆ.