ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳು ಕೆಂಡ ಕಾರಿದ್ದವು. ಇದಕ್ಕೆ ಮೂಲಕ ಕಾರಣ, ಜಾತಿ ಸಮೀಕ್ಷೆ. ಜಯ ಪ್ರಕಾಶ್ ಹೆಗ್ಡೆ ನೇತೃತ್ವದಲ್ಲಿ ಸಲ್ಲಿಕೆಯಾಗಿರುವ ವರದಿ ಅವೈಜ್ಞಾನಿಕ ಅಂತಾ ರಾಜ್ಯದ ಎರಡು ಪ್ರಬಲ ಸಮುದಾಯಗಳು ತಮ್ಮ ವಿರೋಧವನ್ನು ಬಹಿರಂಗವಾಗೇ ವ್ಯಕ್ತಪಡಿಸಿದ್ದವು. ಅದರಲ್ಲೂ ಖುದ್ದು ಅಖಾಡಕ್ಕಿಳಿದಿದ್ದ ಮಠಾಧೀಶರೇ ಈ ವರದಿಯಲ್ಲಿ ಅಂಕಿ ಅಂಶಗಳು ವಾಸ್ತವವಾಗಿಲ್ಲ ಅಂತಾ ಧ್ವನಿ ಎತ್ತಿದ್ದರು. ಉಳಿದಂತೆ ಸಿದ್ದು ಸಂಪುಟದಲ್ಲಿ ಈ ಎರಡು ಸಮುದಾಯಗಳನ್ನು ಪ್ರತಿನಿಧಿಸುವ ನಾಯಕರೂ ಪ್ರತ್ಯೇಕ ಸಭೆಗಳನ್ನು ನಡೆಸಿ, ಒತ್ತಡ ಹೇರುವ ಕೆಲಸವನ್ನು ಮಾಡಿದ್ದರು. ಆದರೆ, ವರದಿ ತಿರಸ್ಕರಿಸಲು ಸಿಎಂ ಸಿದ್ದರಾಮಯ್ಯ ಮಾತ್ರ ತಯಾರಿರಲಿಲ್ಲ. ಆದರೀಗ ಅಂತಿಮವಾಗಿ ಜಾತಿ ಗಣತಿ ಚೆಂಡು ದೆಹಲಿ ಅಂಗಳ ತಲುಪಿ ಹೊಸ ತಿರುವನ್ನು ಪಡೆದುಕೊಂಡಿದೆ.
ಹಳೆಯ ವರದಿಗೆ ಹೊಸ ಅಂಕಿ-ಅಂಶಗಳ ಸೇರ್ಪಡೆ
60 ರಿಂದ 80 ದಿನಗಳಲ್ಲಿ ಸರ್ಕಾರಕ್ಕೆ ಹೊಸ ವರದಿ
ನಿನ್ನೆ ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಜಾತಿ ಗಣತಿ ವಿಚಾರ ಪ್ರಮುಖವಾಗಿ ಚರ್ಚೆಯಾಗಿದೆ. ಈ ವೇಳೆ, ಸಿದ್ದರಾಮಯ್ಯ ಈಗಿರೋ ವರದಿಯನ್ನೇ ಒಪ್ಪಿಕೊಳ್ಳೋ ಮಾತುಗಳನ್ನಾಡಿದ್ರೆ, ಡಿಸಿಎಂ ಡಿಕೆಶಿ ಮಾತ್ರ ಇದಕ್ಕೆ ಸುತಾರಾಂ ಒಪ್ಪಿಲ್ಲ. ಹೀಗಾಗಿ ಅಂತಿಮವಾಗಿ ಹೈಕಮಾಂಡ್ ಹೊಸ ಸೂತ್ರವನ್ನು ರೂಪಿಸಿದೆ. ಈಗಾಗಲೇ ಸರ್ಕಾರದ ಕೈ ಸೇರಿರುವ ಜಯಪ್ರಕಾಶ್ ಹೆಗ್ಡೆ ನೇತೃತ್ವದ ಆಯೋಗ ನೀಡಿರುವ ವರದಿಯನ್ನು ತಾತ್ವಿಕವಾಗಿ ಒಪ್ಪಿಕೊಂಡು, ವಿರೋಧ ವ್ಯಕ್ತವಾಗಿರೋ ಅಂಕಿ ಅಂಶಗಳನ್ನು ಮಾತ್ರ ಇಂದಿನ ಕಾಲಮಾನಕ್ಕೆ ಅನ್ವಯವಾಗುವಂತೆ ಮರು ಸಮೀಕ್ಷೆ ಮಾಡಿ ಸೇರ್ಪಡೆ ಮಾಡಲು ನಿರ್ಧರಿಸಲಾಗಿದೆ. ಈ ಮೂಲಕ ಎರಡು ಸಮುದಾಯಗಳ ವಿರೋಧಕ್ಕೆ ಮದ್ದು ಅರಿಯಲಾಗಿದೆ. ಅಷ್ಟೇ ಅಲ್ಲಾ ಹೊಸ ಅಂಕಿ ಅಂಶಗಳನ್ನು ಸಲ್ಲಿಸಲು ಆಯೋಗಕ್ಕೆ 60 ರಿಂದ 80 ದಿನಗಳ ಗಡುವನ್ನು ನಿಗದಿ ಮಾಡಲಾಗಿದೆ.
ಜಾತಿ ಗಣತಿಗೆ ವಿರೋಧ ವ್ಯಕ್ತವಾಗಿದ್ದು ಯಾಕೆ
ಹಾಗೆ ನೋಡಿದ್ರೆ ರಾಜ್ಯದಲ್ಲಿ ಜಾತಿಗಣತಿಗೆ ಆದೇಶಿಸಿ ಬರೋಬ್ಬರಿ ಒಂದು ದಶಕ ಕಳೆದಿದೆ. ಈ 10 ವರ್ಷಗಳಲ್ಲಿ ಹಲವು ಸಮುದಾಯಗಳ ಸಂಖ್ಯಾ ಬಲ ಏರುಪೇರಾಗಿದೆ. ಆದ್ರೆ, ಇದನ್ನು ಪರಿಗಣಿಸದೆ 10 ವರ್ಷಗಳ ಹಿಂದೆ ನಡೆದ ಸಮೀಕ್ಷೆಯ ಅಂಕಿ ಅಂಶಗಳನ್ನು ಆಧರಿಸಿ ವರದಿ ಸ್ವೀಕರಿಸೋದು ತಪ್ಪು ಅಂತಾ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯ ಅಪಸ್ವರ ಎತ್ತಿತ್ತು. ಅಷ್ಟೇ ಅಲ್ಲಾ, ತಮ್ಮ ಸಮುದಾಯದ ಸಂಖ್ಯೆಯನ್ನು ಬೇಕಂತಲೇ ಕಮ್ಮಿ ತೋರಿಸಲಾಗಿದೆ. ಇದರೊಟ್ಟಿಗೆ ಉಪ ಜಾತಿಗಳನ್ನು ಪ್ರತ್ಯೇಕಿಸಲಾಗಿದೆ ಅನ್ನೋ ಆರೋಪವೂ ಇದೆ. ಹೀಗಾಗಿಯೇ ಹೊಸದಾಗಿ ಜಾತಿ ಗಣತಿ ನಡೆಸಬೇಕು ಅನ್ನೋ ಧ್ವನಿ ಮೊಳಗಿತ್ತು.
ಜಾತಿ ಗಣತಿಗೆ ಖರ್ಚಾಗಿದೆಯಾ 165 ಕೋಟಿ?
ಇನ್ನು ರಾಜ್ಯದಲ್ಲಿ ನಡೆದ ಈ ಹಿಂದಿನ ಜಾತಿ ಗಣತಿಗೆ ಈಗಾಗಲೇ 165 ಕೋಟಿ ಖರ್ಚು ಮಾಡಲಾಗಿದೆ. ಸಾಮಾಜಿಕ ಹಾಗೂ ಶೈಕ್ಷಣಿಕ ಹಿಂದುಳಿದವರನ್ನು ಗುರುತಿಸಿ ಮೀಸಲಾತಿ ಸೌಲಭ್ಯ, ಆರ್ಥಿಕ ಸೌಲಭ್ಯ ಮತ್ತು ಕಲ್ಯಾಣಕ್ಕಾಗಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಈ ಸಮೀಕ್ಷೆ ನಡೆಸಿತ್ತು. 2015ರಲ್ಲಿ ಹಿಂದುಳಿದ ಆಯೋಗದ ಅಧ್ಯಕ್ಷರಾಗಿದ್ದ ಕಾಂತರಾಜು ಸಾರಥ್ಯದಲ್ಲಿ ವರದಿ ನೀಡುವಂತೆ ಸಿದ್ದರಾಮಯ್ಯ ಈ ಹಿಂದೆ ಆದೇಶಿಸಿದ್ರು. ಜನಸಂಖ್ಯೆ, ಶೈಕ್ಷಣಿಕ, ಆರ್ಥಿಕ, ಉದ್ಯೋಗ, ಆದಾಯ ಸೇರಿ ಒಟ್ಟು 51 ಅಂಶಗಳ ಮಾಹಿತಿ ಪಡೆಯಲು 54 ಪ್ರಶ್ನೆಗಳನ್ನು ರೂಪಿಸಿತ್ತು. ರಾಜ್ಯದ 13,535,72 ಕುಟುಂಬಬಳು, 5,98,14,942 ನಾಗರಿಕರಿಗೆ ಸಂಬಂಧಿಸಿದ ದತ್ತಾಂಶ ಸಂಗ್ರಹಿಸಲಾಗಿತ್ತು. ಆದ್ರೆ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವಷ್ಟರಲ್ಲೇ ಕಾಂತರಾಜು ಅಧಿಕಾರಾವಧಿ ಅಂತ್ಯವಾಗಿತ್ತು. ನಂತ್ರ ಬಂದ ಕಾರ್ಯದರ್ಶಿ ವರದಿಗೆ ಸಹಿ ಹಾಕಲು ನಿರಾಕರಿಸಿದ್ರು. ಹೀಗಾಗಿ ಅಂತಿಮವಾಗಿ 2020ರ ನವೆಂಬರ್ ನಲ್ಲಿ ಆಯೋಗಕ್ಕೆ ಜಯಪ್ರಕಾಶ್ ಹೆಗ್ಡೆಯವರನ್ನು ಹೊಸ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು. ಇದೀಗ ಎದುರಾಗಿರೋ ವಿರೋಧವನ್ನು ಶಮನ ಮಾಡಲು ಪ್ರಸಕ್ತ ಕಾಲಮಾನದ ಅಂಕಿ ಅಂಶ ಸೇರ್ಪಡೆ ತಂತ್ರ ಹೂಡಲಾಗಿದೆ. ಆದ್ರೆ ಈ ವರದಿಗೆ ಮುಂದಿನ ದಿನಗಳಲ್ಲಿ ಮತ್ಯಾವ ಸಮುದಾಯ ಅಪಸ್ವರ ತೆಗೆಯುತ್ತೋ ಅನ್ನೋದು ಈಗಿರುವ ಪ್ರಶ್ನೆ.