ಬೆಂಗಳೂರು: ಆಸ್ತಿ ತೆರಿಗೆ, ಮುದ್ರಾಂಕ ಶುಲ್ಕ, ನೀರು, ವಿದ್ಯುತ್ ಬೆಲೆಯೇರಿಕೆಯಿಂದ ಕಂಗೆಟ್ಟಿದ್ದ ಬೆಂಗಳೂರಿನ ನಾಗರಿಕರಿಗೆ ಬಿಬಿಎಂಪಿಯು ಸಿಹಿ ಸುದ್ದಿ ನೀಡಿದೆ. ಏಪ್ರಿಲ್ 30ರೊಳಗೆ ಯಾರೆಲ್ಲ ಆಸ್ತಿ ತೆರಿಗೆಯನ್ನು ಒಂದೇ ಕಂತಿನಲ್ಲಿ ಕಟ್ಟುತ್ತಾರೋ, ಅವರಿಗೆ ಶೇ.5ರಷ್ಟು ರಿಯಾಯಿತಿ ನೀಡುವುದಾಗಿ ಘೋಷಣೆ ಮಾಡಿದೆ. ಇದರಿಂದಾಗಿ ಕ್ಷಿಪ್ರವಾಗಿ ಆದಾಯ ಸಂಗ್ರಹದ ಜತೆಗೆ, ತೆರಿಗೆ ಪಾವತಿದಾರರು ಹಣ ಉಳಿಸುವಂತೆ ಮಾಡುವುದು ಬಿಬಿಎಂಪಿಯ ಗುರಿಯಾಗಿದೆ.
ಹಾಗಾಗಿ, ಬೆಂಗಳೂರಿನ ನಾಗರಿಕರು ಶೇ.5ರಷ್ಟು ರಿಯಾಯಿತಿ ಪಡೆಯಲು ಏಪ್ರಿಲ್ 30ರೊಳಗೆ ಆಸ್ತಿ ತೆರಿಗೆ ಯನ್ನು ಸಂಪೂರ್ಣವಾಗಿ ಕಟ್ಟಬೇಕಿದೆ. ಗಡುವಿನೊಳಗೆ ಕಟ್ಟಿದರೆ ಮಾತ್ರ ರಿಯಾಯಿತಿ ದೊರೆಯಲಿದೆ. ಇನ್ನು ಈ ರೀತಿಯ ಘೋಷಣೆ ಇದೇ ಮೊದಲೇನಲ್ಲ. ಈ ಹಿಂದೆಯೂ ಈ ಆಫರ್ ಬಿಬಿಎಂಪಿಗೆ ವರ್ಕೌಟ್ ಆಗಿತ್ತು. ಅಂದರೆ 2024-25ನೇ ಹಣಕಾಸು ವರ್ಷದಲ್ಲಿ ಬಿಬಿಎಂಪಿಗೆ, ಈ ರೀತಿಯ ಘೋಷಣೆಯಿಂದ ಯಶಸ್ವಿಯಾಗಿ ತೆರಿಗೆ ಸಂಗ್ರಹವಾಗಿತ್ತು.
ಕಳೆದ ಸಾಲಿನಲ್ಲಿ ಬಿಪಿಎಂಪಿಯು ಸುಮಾರು 4,930 ಕೋಟಿ ರೂಪಾಯಿ ಆಸ್ತಿ ತೆರಿಗೆ ಸಂಗ್ರಹಿಸಿತ್ತು. ಅದಕ್ಕೂ ಮುಂಚಿನ ವರ್ಷ ಸಂಗ್ರಹವಾದ. 3,918 ಕೋಟಿ ರೂಪಾಯಿಯೊಂದಿಗೆ ಹೋಲಿಸಿದರೆ ಶೇ. 25 ರಷ್ಟು ಹೆಚ್ಚಾಗಿದೆ. ಆದರೂ ಬಿಬಿಎಂಪಿ ತನ್ನ ಉದ್ದೇಶಿತ ಗುರಿಯಾದ ರೂ. 5,200 ಕೋಟಿಗೆ ಇನ್ನೂ ಸ್ವಲ್ಪ ತಲುಪದೇ ಉಳಿದಿದೆ. ಇದರೊಂದಿಗೆ ಸಂಸ್ಥೆಯು ತನ್ನ ಆದಾಯ ಗುರಿಯ ಶೇ. 94 ರಷ್ಟು ಸಾಧಿಸಿದೆ. ಈ ಬಾರಿ ಆರು ಸಾವಿರ ಕೋಟಿ ರೂಪಾಯಿ ತೆರಿಗೆ ಸಂಗ್ರಹ ಗುರಿ ಹೊಂದಿದ್ದು, ಮತ್ತೆ ಡಿಸ್ಕೌಂಟ್ ಘೋಷಣೆ ಮಾಡಿದೆ.
ಕಳೆದ ಆರ್ಥಿಕ ವರ್ಷದಲ್ಲಿ ಕೆಲವೊಂದು ವಲಯಗಳು, ತಮ್ಮ ಗುರಿಯನ್ನು ಮೀರಿ ಆಸ್ತಿ ತೆರಿಗೆ ಸಂಗ್ರಹದಲ್ಲಿ ಅದ್ಭುತ ಸಾಧನೆ ತೋರಿಸಿವೆ. ಉದಾಹರಣೆಗೆ ಯಲಹಂಕ ವಲಯದಲ್ಲಿ ಆಸ್ತಿ ತೆರಿಗೆ ಸಂಗ್ರಹ 445 ಕೋಟಿ ರೂಪಾಯಿಯ ಗುರಿಗೆ ಬದಲಾಗಿ 464 ಕೋಟಿ ರೂಪಾಯಿ ಸಂಗ್ರಹಿಸಲಾಗಿದೆ. ಇದು ಸುಮಾರು ಶೇ. 4.3 ರಷ್ಟು ಹೆಚ್ಚಾಗಿದೆ. ಈ ಸಾಧನೆಯು ಯಲಹಂಕವನ್ನು ಅತ್ಯುತ್ತಮ ನಿರ್ವಹಿತ ವಲಯಗಳ ಪೈಕಿ ಒಂದು ಎಂದು ಮಾಡಿದೆ. ಮಹದೇವಪುರ ಕೂಡ ಆಸ್ತಿ ತೆರಿಗೆ ಸಂಗ್ರಹದಲ್ಲಿ ಮುಂದಿದೆ.