ಜೈಪುರ: ಮಹಿಳೆಯರ ಮೇಲೆ ಪುರುಷರು ಎಷ್ಟು ದೌರ್ಜನ್ಯ ನಡೆಸುತ್ತಾರೋ, ಅದೇ ರೀತಿ ಪುರುಷರಿಗೆ ಕಿರುಕುಳ ನೀಡುವ ಪತ್ನಿಯರೂ ಸಾಕಷ್ಟಿದ್ದಾರೆ ಎಂಬುದನ್ನು ತೋರಿಸಲು ಈ ಹಿಂದೆ “ಪತ್ನಿ ಪೀಡಿತರ ಸಂಘ” ಸ್ಥಾಪನೆಯಾಗಿದ್ದು ಎಲ್ಲರಿಗೂ ನೆನಪಿರಬಹುದು. ಅದೇ ರೀತಿ, ರಾಜಸ್ಥಾನದಲ್ಲೊಬ್ಬ ವ್ಯಕ್ತಿಯು ತನಗೆ ಪತ್ನಿಯಿಂದಾದ ಕಿರುಕುಳ ಹಾಗೂ ಪತ್ನಿ ತನ್ನ ಮೇಲೆ ಹೊರಿಸಿದ ಸುಳ್ಳು ಆರೋಪಗಳ ವಿರುದ್ಧ ವಿನೂತನ ರೀತಿಯಲ್ಲಿ ಪ್ರತಿಭಟಿಸುತ್ತಿದ್ದಾನೆ.
ಪತ್ನಿಯು ತನ್ನ ಮೇಲೆ ಹೊರಿಸಿರುವ ಸುಳ್ಳು ವರದಕ್ಷಿಣೆ ಕಿರುಕುಳ ಆರೋಪ ಮತ್ತು ಕಾನೂನಿನಿಂದ ತನಗಾದ ಅನ್ಯಾಯದ ವಿರುದ್ಧ ಪ್ರತಿಭಟಿಸುತ್ತಿರುವ ವ್ಯಕ್ತಿಯ ಹೆಸರು ಕೃಷ್ಣ ಕುಮಾರ್ ಧಾಕಡ್. ಈತ ರಾಜಸ್ಥಾನದ ಅಂಟಾ ನಗರದ ನಿವಾಸಿ. ಈಗ ಈತ ತನ್ನ ಹೆಂಡತಿಯ ತವರು ಮನೆಯ ಮುಂದೆಯೇ ಟೀ ಅಂಗಡಿಯೊಂದನ್ನು ತೆರೆದಿದ್ದಾನೆ. ಅಂದ ಹಾಗೆ ಅವನ ಅಂಗಡಿಯ ಹೆಸರು “498ಎ ಟಿ ಕ್ಯಾಫ್” ಎಂದು! ಪತ್ನಿ ತನ್ನ ಮೇಲೆ ಯಾವ ಸೆಕ್ಷನ್ ನಡಿ ವರದಕ್ಷಿಣೆ ಕಿರುಕುಳ ದೂರು ನೀಡಿದ್ದಳೋ, ಅದೇ ಸೆಕ್ಷನ್ ಹೆಸರನ್ನು ತನ್ನ ಟೀ ಅಂಗಡಿಗೆ ಇಟ್ಟಿದ್ದಾನೆ. ಅಲ್ಲಿಗೇ ಈತನ ಪ್ರತಿಭಟನೆ ಮುಗಿದಿಲ್ಲ. ಈತ ತನ್ನ ಕೈಗಳಿಗೆ ಕೋಳ ಧರಿಸಿಕೊಂಡೇ ಗ್ರಾಹಕರಿಗೆ ಟೀ ಮಾರಾಟ ಮಾಡುತ್ತಾನೆ. ಇದು ಕಳೆದ ಮೂರು ವರ್ಷಗಳಿಂದ ಪತ್ನಿಯಿಂದ ತಾನು ಅನುಭವಿಸಿರುವ ನೋವು ಮತ್ತು ಅವಮಾನದ ಸಂಕೇತ ಎಂದು ಕೃಷ್ಣ ಕುಮಾರ್ ಹೇಳುತ್ತಾನೆ.
ಅಂಗಡಿಯು ಸುತ್ತಲೂ ಹಲವು ಪೋಸ್ಟರ್ಗಳನ್ನೂ ಈತ ಅಂಟಿಸಿದ್ದಾನೆ. “ಎಲ್ಲಿಯವರೆಗೆ ನ್ಯಾಯ ಸಿಗುವುದಿಲ್ಲವೋ, ಅಲ್ಲಿಯವರೆಗೂ ಟೀ ಕುದಿಯುತ್ತಲೇ ಇರುತ್ತದೆ” (ಜಬ್ ತಕ್ ನಹೀ ಮಿಲ್ತಾ ನ್ಯಾಯ್, ತಬ್ ತಕ್ ಉಬಾಲ್ತಿ ರಹೇಗಿ ಚಾಯ್) ಹಾಗೂ “ಬನ್ನಿ, ಚಹಾದೊಂದಿಗೆ ಮಾಡೋಣ ಚರ್ಚೆ, 125ರಲ್ಲಿ ಎಷ್ಟು ನೀಡಬೇಕಾಗಬಹುದು ಖರ್ಚು”(ಆವೋ ಚಾಯ್ ಪರ್ ಕರೇಂ ಚರ್ಚಾ, 125 ಮೇ ಕಿತ್ನಾ ದೇನಾ ಪಡೇಗಾ ಖರ್ಚಾ) ಎಂದು ಪೋಸ್ಟರ್ ಗಳಲ್ಲಿ ಬರೆಯಲಾಗಿದೆ. ಈ ಮೂಲಕ ತನ್ನ ವಿರುದ್ಧ ದಾಖಲಾದ 498ಎ ಮತ್ತು 125 ಸೆಕ್ಷನ್ ಬಗ್ಗೆಯೂ ಪ್ರಸ್ತಾಪಿಸಲಾಗಿದೆ.
ಕೃಷ್ಣ ಕುಮಾರ್ ಧಾಕರ್ ಅವರು 2018ರಲ್ಲಿ ಮೀನಾಕ್ಷಿ ಮಾಲವ್ ಎಂಬವರನ್ನು ವಿವಾಹವಾಗಿದ್ದರು. ಇಬ್ಬರೂ ಸೇರಿ ಜೇನುಕೃಷಿ ಉದ್ದಿಮೆ ಆರಂಭಿಸಿ, ಸ್ಥಳೀಯ ಮಹಿಳೆಯರ ಸಬಲೀಕರಣದಲ್ಲಿ ತೊಡಗಿ, ಖ್ಯಾತಿ ಗಳಿಸಿದ್ದರು. 2021ರಲ್ಲಿ ಮಹಿಳಾ ಸಬಲೀಕರಣದ ಸಂಕೇತವೆಂಬಂತೆ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರೇ ಇವರ ಜೇನು ಕೃಷಿ ಎಂಟರ್ ಪ್ರೆಸ್ ಅನ್ನು ಉದ್ಘಾಟಿಸಿದ್ದರು.
ಆದರೆ, 2022ರಲ್ಲಿ ಮೀನಾಕ್ಷಿ ಅವರು ಏಕಾಏಕಿ ಮನೆ ಬಿಟ್ಟು ಹೋಗಿ, ತವರು ಮನೆಯಲ್ಲಿ ಕುಳಿತರು. ಕೆಲವು ತಿಂಗಳ ಬಳಿಕ, ಪತಿ ಕೃಷ್ಣಕುಮಾರ್ ವಿರುದ್ಧ ಐಪಿಸಿ ಸೆಕ್ಷನ್ 498ಎ(ವರದಕ್ಷಿಣೆ ಕಿರುಕುಳ) ಮತ್ತು ಸೆಕ್ಷನ್ 125(ಜೀವನಾಂಶ) ಅಡಿ ಕೇಸು ದಾಖಲಿಸಿದರು.
ಈ ಸುಳ್ಳು ಕೇಸಿನಿಂದಾಗಿ ನನ್ನ ಜೀವನವೇ ನಾಶವಾಯಿತು. ಕಳೆದ 3 ವರ್ಷಗಳಿಂದ ನಾನು ನ್ಯಾಯಕ್ಕಾಗಿ ಕೋರ್ಟ್ ನಿಂದ ಕೋರ್ಟ್ಗೆ ಅಲೆದಾಡುತ್ತಿದ್ದೇನೆ. ನನ್ನ ವೃದ್ಧೆ ತಾಯಿ ನನ್ನನ್ನು ಅವಲಂಬಿಸಿದ್ದಾರೆ. ನಾನೀಗ ಸಣ್ಣ ಗುಡಿಸಲಲ್ಲಿ ವಾಸಿಸುವಂತಾಗಿದೆ, ನನ್ನಲ್ಲೀಗ ಏನೂ ಉಳಿದಿಲ್ಲ. ಹಲವು ಬಾರಿ ಆತ್ಮಹತ್ಯೆಯ ಆಲೋಚನೆಯೂ ಬಂದಿತ್ತು. ಆದರೆ ಅಮ್ಮನಿಗೆ ನನ್ನನ್ನು ಬಿಟ್ಟರೆ ಬೇರಾರೂ ಇಲ್ಲ. ಆ ಒಂದು ಕಾರಣಕ್ಕಾಗಿ ಈಗಲೂ ಬದುಕಿದ್ದೇನೆ ಎಂದು ಹೇಳುತ್ತಾ ಕೃಷ್ಣಕುಮಾರ್ ಕಣ್ಣೀರಿಟ್ಟಿದ್ದಾರೆ.
ಜೊತೆಗೆ, ಕಾನೂನಿನ ದುರ್ಬಳಕೆ ಮಾಡಿ ನನ್ನನ್ನು ಎಲ್ಲಿ ಟ್ರ್ಯಾಪ್ ಮಾಡಲಾಯಿತೋ(ಪತ್ನಿಯ ತವರು ಮನೆಯಿರುವ ಪ್ರದೇಶ) ಅಲ್ಲೇ ಈಗ ಟೀ ಅಂಗಡಿ ತೆರೆದು ನನ್ನ ಕಾನೂನಾತ್ಮಕ ಹೋರಾಟ ಮುಂದುವರಿಸಲು ನಿರ್ಧರಿಸಿದ್ದೇನೆ ಎಂದಿದ್ದಾರೆ ಕೃಷ್ಣಕುಮಾರ್.
ಇನ್ನೊಂದೆಡೆ, ಅವರ ಪತ್ನಿ ಮೀನಾಕ್ಷಿ ಮಾತನಾಡಿ, “ಅವರು ಭೂಮಿ ಖರೀದಿಸಲೆಂದು ನನ್ನ ಅಪ್ಪನ ಬಳಿಕ ಹಣ ಕೇಳಿದರು. ಅದಕ್ಕೆ ನಾವು ಒಪ್ಪಲಿಲ್ಲ. ಅದಕ್ಕಾಗಿ ನನ್ನ ಮೇಲೆ ಹಲ್ಲೆ ನಡೆಸಲು ಆರಂಭಿಸಿದರು. ಕೊನೆಗೆ ನಾನು ನನ್ನ ತವರು ಮನೆಗೆ ವಾಪಸಾದೆ. ನಾನು ವಿಚ್ಛೇದನ ನೀಡಲು ಸಿದ್ಧಳಿದ್ದೇನೆ. ಆದರೆ, ಅದಕ್ಕೂ ಮೊದಲು ನನ್ನ ಹೆಸರಲ್ಲಿ ಏನೇನು ಸಾಲ ಪಡೆಯಲಾಗಿದೆಯೋ ಆ ಎಲ್ಲ ಸಾಲವನ್ನೂ ಅವರು ಮರುಪಾವತಿಸಬೇಕು” ಎಂದಿದ್ದಾರೆ.