ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶನಿವಾರ ರಾತ್ರಿಯಿಂದೀಚೆಗೆ ಸುರಿಯುತ್ತಿರುವ ಭಾರೀ ಮಳೆ ಮತ್ತು ಗಾಳಿಯಿಂದಾಗಿ(Delhi Rain) ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದ್ದು, ಮಳೆಗಾಲಕ್ಕೂ ಮುನ್ನವೇ ನಾಗರಿಕರು ಹೈರಾಣಾಗಿದ್ದಾರೆ. ಧಾರಾಕಾರ ಮಳೆಯಿಂದಾಗಿ ದೆಹಲಿ-ಎನ್ಸಿಆರ್ನ ಹಲವು ಭಾಗಗಳು ಜಲಾವೃತವಾಗಿದ್ದು, ರಸ್ತೆ ಸಂಚಾರಕ್ಕೆ ತೊಂದರೆಯಾಗಿದೆ. ಭಾರತೀಯ ಹವಾಮಾನ ಇಲಾಖೆ (IMD) ಶನಿವಾರ ರಾತ್ರಿ 10:30ಕ್ಕೇ ರೆಡ್ ಅಲರ್ಟ್(Red Alert) ಜಾರಿ ಮಾಡಿತ್ತು, ಗಂಟೆಗೆ 60-100 ಕಿ.ಮೀ ವೇಗದ ಗಾಳಿಯೊಂದಿಗೆ ಭಾರೀ ಆಲಿಕಲ್ಲು ಮಳೆ, ಗುಡುಗು, ಮಿಂಚು ಸಾಧ್ಯತೆಯ ಬಗ್ಗೆ ಎಚ್ಚರಿಕೆ ನೀಡಿತ್ತು.
ಅದರಂತೆ, ಶನಿವಾರ ರಾತ್ರಿಯೇ ಮಳೆ ಆರಂಭವಾಗಿದ್ದು, ದೆಹಲಿಯ ಮೋತಿ ಬಾಗ್, ಮಿಂಟೋ ರೋಡ್, ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್ 1 ಸಮೀಪದ ಪ್ರದೇಶಗಳು, ಧೌಲಾ ಕುವಾನ್, ಮತ್ತು ಐಟಿಒ ಸೇರಿದಂತೆ ಹಲವು ಪ್ರದೇಶಗಳು ಜಲಾವೃತಗೊಂಡಿವೆ. ಕೆಲವು ಪ್ರದೇಶಗಳಲ್ಲಿ ನೀರಿನ ಮಟ್ಟವು ಸಣ್ಣ ವಾಹನಗಳನ್ನು ಮುಳುಗಿಸುವಷ್ಟು ಏರಿತ್ತು. ದೆಹಲಿ ಕಂಟೋನ್ಮೆಂಟ್ ನಲ್ಲಿ ಒಂದು ಬಸ್ ಮತ್ತು ಕಾರು ನೀರಿನಲ್ಲಿ ಮುಳುಗಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಮಿಂಟೋ ರೋಡ್ನಲ್ಲಿ ಕಾರೊಂದು ನೀರಿನಲ್ಲಿ ಸಿಲುಕಿಕೊಂಡಿದ್ದು, ಇದರಿಂದಾಗಿ ಧೌಲಾ ಕುವಾನ್ನಂತಹ ಪ್ರಮುಖ ರಸ್ತೆಗಳಲ್ಲಿ ಸಂಚಾರ ತೀವ್ರವಾಗಿ ಅಸ್ತವ್ಯಸ್ತವಾಯಿತು.
200 ವಿಮಾನಗಳ ಕಾರ್ಯಾಚರಣೆಗೆ ಅಡ್ಡಿ
ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (IGI) ಭಾರೀ ಮಳೆ ಮತ್ತು ಗಾಳಿಯಿಂದಾಗಿ ವಿಮಾನ ಕಾರ್ಯಾಚರಣೆಗೆ ತೀವ್ರ ಅಡಚಣೆ ಉಂಟಾಯಿತು. ಒಟ್ಟು 49 ವಿಮಾನಗಳನ್ನು ಇತರ ವಿಮಾನ ನಿಲ್ದಾಣಗಳಿಗೆ ತಿರುಗಿಸಲಾಯಿತು, ಕೆಲವು ವಿಮಾನಗಳನ್ನು ರದ್ದುಗೊಳಿಸಲಾಯಿತು. ಪ್ರತಿಕೂಲ ಹವಾಮಾನದಿಂದಾಗಿ ವಿಮಾನ ಕಾರ್ಯಾಚರಣೆಯಲ್ಲಿ ತಾತ್ಕಾಲಿಕ ಅಡಚಣೆ ಉಂಟಾಗಿದೆ ಎಂದು ಇಂಡಿಗೋ ಏರ್ಲೈನ್ಸ್ನ ಹೇಳಿಕೆ ಬಿಡುಗಡೆ ಮಾಡಿದೆ. ಸ್ಪೈಸ್ಜೆಟ್ ಮತ್ತು ಏರ್ ಇಂಡಿಯಾ ಕೂಡ ತಮ್ಮ ಪ್ರಯಾಣಿಕರಿಗೆ ಇದೇ ಮಾದರಿಯ ಮಾಹಿತಿಯನ್ನು ನೀಡಿದವು. ಒಟ್ಟಾರೆಯಾಗಿ 200ರಷ್ಟು ವಿಮಾನಗಳ ಕಾರ್ಯಾಚರಣೆಗೆ ಗಾಳಿ-ಮಳೆಯಿಂದ ಅಡ್ಡಿ ಉಂಟಾದವು.

ಯಾಕೆ ಇಷ್ಟೊಂದು ಮಳೆ?
ಭಾರತೀಯ ಹವಾಮಾನ ಇಲಾಖೆಯ ಪ್ರಕಾರ, ಹರ್ಯಾಣ ಮತ್ತು ಸಮೀಪದ ಪ್ರದೇಶಗಳ ಮೇಲಿರುವ ಚಂಡಮಾರುತದ ಚಲನೆ ಮತ್ತು ಪಂಜಾಬ್ನಿಂದ ಬಾಂಗ್ಲಾದೇಶದವರೆಗಿನ ವಾಯುಭಾರ ಕುಸಿತವೇ ಈ ತೀವ್ರ ಹವಾಮಾನಕ್ಕೆ ಕಾರಣವಾಗಿದೆ. ಶನಿವಾರ ರಾತ್ರಿ 9:30 ಗಂಟೆಗೆ ಆರೆಂಜ್ ಅಲರ್ಟ್ ಜಾರಿಯಾಗಿತ್ತು, ಆದರೆ ಒಂದು ಗಂಟೆಯ ನಂತರ ರೆಡ್ ಅಲರ್ಟ್ಗೆ ಏರಿಕೆಯಾಯಿತು. ದೆಹಲಿಯಲ್ಲಿ ಗರಿಷ್ಠ ತಾಪಮಾನ 40.7 ಡಿಗ್ರಿ ಸೆಲ್ಸಿಯಸ್ ತಲುಪಿತ್ತು, ಆದರೆ ಈ ಮಳೆಯಿಂದಾಗಿ ತಾಪಮಾನದಲ್ಲಿ ತಾತ್ಕಾಲಿಕ ಇಳಿಕೆ ಕಂಡುಬಂದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಜನರು ದೆಹಲಿಯನ್ನು ಶಿಮ್ಲಾಗೆ ಹೋಲಿಸಲು ಆರಂಭಿಸಿದ್ದಾರೆ.

ಧರೆಗುರುಳಿದ ಮರಗಳು, ವಿದ್ಯುತ್ ಕಂಬಗಳು
ಭಾರೀ ಮಳೆಯಿಂದಾಗಿ ದೆಹಲಿಯ ಹಲವು ಪ್ರದೇಶಗಳಲ್ಲಿ ಮರಗಳು ಮತ್ತು ವಿದ್ಯುತ್ ಕಂಬಗಳು ಧರೆಗುರುಳಿವೆ. ಹಲವೆಡೆ ವಿದ್ಯುತ್ ವ್ಯತ್ಯಯವೂ ಉಂಟಾಗಿದೆ. ಹರಿಯಾಣದ ಜಝ್ಝರ್ ಮತ್ತು ಕರ್ನಾಲ್ನಂತಹ ಪ್ರದೇಶಗಳಲ್ಲಿಯೂ ಗಾಳಿಯೊಂದಿಗೆ ಭಾರೀ ಮಳೆ ವರದಿಯಾಗಿದೆ. ಅಧಿಕಾರಿಗಳು ಸಾರ್ವಜನಿಕರಿಗೆ ಮರಗಳ ಕೆಳಗೆ ನಿಲ್ಲದಿರುವಂತೆ, ತೆರೆದ ಸ್ಥಳಗಳಿಗೆ ಹೋಗದಂತೆ ಮತ್ತು ಶಿಥಿಲ ಕಟ್ಟಡಗಳಿಂದ ದೂರವಿರುವಂತೆ ಸೂಚಿಸಿದ್ದಾರೆ. ಈ ಭಾರೀ ಮಳೆಯು ದೆಹಲಿಯ ಜನರಿಗೆ ಒಂದು ಕಡೆ ಬೇಸಗೆಯ ಬಿಸಿಲಿನಿಂದ ತಾತ್ಕಾಲಿಕ ರಿಲೀಫ್ ನೀಡಿದ್ದರೂ, ಜಲಾವೃತ ಮತ್ತು ವಿಮಾನ ಕಾರ್ಯಾಚರಣೆಯ ಅಡಚಣೆಯಿಂದ ದೈನಂದಿನ ಜೀವನಕ್ಕೆ ತೀವ್ರ ತೊಂದರೆಯಾಗಿದೆ. ದೆಹಲಿ ಸರ್ಕಾರ ಮತ್ತು ಸ್ಥಳೀಯ ಅಧಿಕಾರಿಗಳು ಜಲಾವೃತ ಸಮಸ್ಯೆಯನ್ನು ತಗ್ಗಿಸಲು ಕಾರ್ಯಾಚರಣೆ ಆರಂಭಿಸಿದ್ದಾರೆ. ಹವಾಮಾನ ಇಲಾಖೆಯು ಮುಂದಿನ ಕೆಲವು ದಿನಗಳವರೆಗೆ ದೆಹಲಿ ಮತ್ತು ಎನ್ಸಿಆರ್ನಲ್ಲಿ ಇದೇ ರೀತಿಯ ಹವಾಮಾನ ಮುಂದುವರಿಯಬಹುದೆಂದು ಎಚ್ಚರಿಕೆ ನೀಡಿದೆ.