ಮಂಡ್ಯ : ಜಿಲ್ಲೆಯ ನಾಗಮಂಗಲದಲ್ಲಿ ಮತ್ತೆ ಫ್ಲೆಕ್ಸ್ ರಾಜಕೀಯ ಶುರುವಾಗಿದೆ.
ನಿಖಿಲ್ ಕುಮಾರಸ್ವಾಮಿ ರಾಜ್ಯ ಪ್ರವಾಸ ಕೈಗೊಂಡಿದ್ದು, ಅವರನ್ನು ಸ್ವಾಗತಿಸುವುದಕ್ಕಾಗಿ ಜೆಡಿಎಸ್ ಕಾರ್ಯಕರ್ತರು ಫ್ಲೆಕ್ಸ್ ಹಾಗೂ ಕಟೌಟ್ ಹಾಕಿದ್ದರು. ಆದರೆ, ಪುರಸಭೆ ರಾತ್ರೋರಾತ್ರಿ ತೆರವಿಗೆ ಮುಂದಾಗಿದೆ ಎಂದು ಆರೋಪಿಸಲಾಗಿದೆ. ಪುರಸಭೆಯ ಸಿಬ್ಬಂದಿಗಳು ರಾತ್ರೋರಾತ್ರಿ ಕಾರ್ಯಾಚರಣೆ ನಡೆಸಿದ್ದರಿಂದಾಗಿ ಜೆಡಿಎಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಫ್ಲೆಕ್ಸ್ ಹಾಗೂ ಕಟೌಟ್ ತೆರವು ಮಾಡದಂತೆ ಸಿಬ್ಬಂದಿಗಳ ಜೊತೆ ಕಾರ್ಯಕರ್ತರು ವಾಗ್ವಾದ ನಡೆಸಿದ್ದಾರೆ.
ಈ ವೇಳೆ ಪುರಸಭೆ ಸಿಬ್ಬಂದಿ ವಿರುದ್ಧ ಜೆಡಿಎಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲ್ಲಾ ಸಚಿವರ ಆದೇಶದ ಮೇರೆಗೆ ಈ ರೀತಿ ಪುರಸಭೆ ಮೇಲೆ ಒತ್ತಡ ಹಾಕಿ ತೆರವು ಮಾಡುತ್ತಿದ್ದಾರೆಂದು ಆರೋಪಿಸಿದ್ದಾರೆ. ಕಾಂಗ್ರೆಸ್ ನಾಯಕರು ನಮ್ಮ ನಾಯಕರ ಫ್ಲೆಕ್ಸ್ ಹಾಗೂ ಕಟೌಟ್ ಗಳನ್ನು ತೆಗೆಸುತ್ತಿದ್ದಾರೆ. ದ್ವೇಷ ರಾಜಕಾರಣ ಮಾಡುತ್ತಿದ್ದಾರೆ.
ಇದು ಹೀಗೆ ಮುಂದುವರೆದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಜೆಡಿಎಸ್ ಕಾರ್ಯಕರ್ತರು ಎಚ್ಚರಿಕೆ ನೀಡಿದ್ದಾರೆ. ಜೆಡಿಎಸ್ ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ ಜೂ 30ರಂದು ನಾಗಮಂಗಲಕ್ಕೆ ಆಗಮಿಸುತ್ತಿದ್ದು, ಫ್ಲೆಕ್ಸ್ ಹಾಗೂ ಕಟೌಟ್ ಗಳನ್ನು ಅಳವಡಿಸಲಾಗಿತ್ತು.