ಬೀದರ್: ಹೊಲಗಳಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಅಪಾರ ಪ್ರಮಾಣದ ನಷ್ಟ ಉಂಟಾಗಿರುವ ಘಟನೆ ನಡೆದಿದೆ.
ಜಿಲ್ಲೆಯ ಭಾಲ್ಕಿ ಪಟ್ಟಣದ ಹೊರವಲಯದ ಭಾತಂಬ್ರಾ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಲಕ್ಷಾಂತರ ರೂ. ಬೆಳೆಗಳು ಸುಟ್ಟು ಭಸ್ಮವಾಗಿವೆ. ಕಬ್ಬು, ಪಪ್ಪಾಯಿ, ಮಾವು, ಜೋಳದ ತೆನೆ ಸುಟ್ಟು ಹೋಗಿವೆ. ಪ್ರಶಾಂತ್ ಪಾಟೀಲ್ ಎಂಬುವವರ 6 ಎಕರೆ ಹೊಲದಲ್ಲಿ ಬೆಳೆದಿದ್ದ ಕಬ್ಬು, ಪಪ್ಪಾಯಿ ಹಾನಿಯಾಗಿದೆ.
ಭರತ್ ನಾಟೀಕರ್ ಎಂಬುವವರ ಹೊಲದಲ್ಲಿ ಕೂಡಿಟ್ಟಿದ್ದ 14 ಎಕರೆಯಲ್ಲಿನ ಜೋಳದ ತೆನೆ ಸುಟ್ಟು ಭಸ್ಮವಾಗಿವೆ. ಸುಮಾರು 120 ಮಾವಿನ ಗಿಡಗಳಿಗೂ ಬೆಂಕಿ ತಗುಲಿ ಅಪಾರ ಪ್ರಮಾಣದ ಹಾನಿಯಾಗಿದೆ. ಅಕ್ಕಪಕ್ಕದ ಹೊಲಗಳಿಗೂ ಹಾನಿಯಾಗಿದೆ. ಟ್ರಾನ್ಸ್ ಫಾರ್ಮರ್ ನಲ್ಲಿ ವಿದ್ಯುತ್ ಪ್ರವಹಸಿ ಬೆಂಕಿ ತಗುಲಿರುವ ಶಂಕೆ ಇದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಪರಿಸ್ಥಿತಿ ಹತೋಟಿಗೆ ತಂದಿದ್ದಾರೆ. ಹಾನಿಗೊಳಗಾದ ರೈತರು ಕಣ್ಣೀರು ಸುರಿಸುತ್ತಿದ್ದಾರೆ.