ಬೆಂಗಳೂರು: ಮಾಜಿ ಸಂಸದ ಅನಂತಕುಮಾರ್ ಹೆಗಡೆ ಸೇರಿದಂತೆ ಮೂವರ ವಿರುದ್ಧ ಎಫ್ ಐಆರ್ ದಾಖಲಾಗಿದೆ.
ಕಾರು ಓವರ್ ಟೇಕ್ (Car Overtake) ಮಾಡಿದ ವಿಷಯಕ್ಕೆ ಸಂಬಂಧಿಸಿದಂತೆ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಹೀಗಾಗಿ ಮಾಜಿ ಸಂಸದ ಅನಂತಕುಮಾರ್ ಹೆಗಡೆ (Anantkumar Hegde) ವಿರುದ್ಧ ದಾಬಸ್ಪೇಟೆಯಲ್ಲಿ (Dabaspete) ಪ್ರಕರಣ ದಾಖಲಾಗಿದೆ.
ನೆಲಮಂಗಲದ ಹಳೇ ನಿಜಗಲ್ ಬಳಿ ಕಾರು ಅಡ್ಡಗಟ್ಟಿ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಸಲ್ಮಾನ್, ಸೈಫ್, ಇಲಿಯಾಜ್, ಗುಲಷಿರ್ ಉನ್ನೀಸಾ ಎಂಬವರು ದೂರು ದಾಖಲಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಕಾರಿನಲ್ಲಿದ್ದವರ ವಿಚಾರಣೆ ನಡೆದಿದೆ.
ಅನಂತ್ ಕುಮಾರ್ ಹೆಗಡೆ ಅವರಿಗೆ ಬೆದರಿಕೆ ಇರುವ ಕಾರಣ ಗನ್ ತೆಗೆದಿರುವುದಾಗಿ ಗನ್ಮ್ಯಾನ್ ಶ್ರೀಧರ್ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ದಾಬಸ್ ಪೇಟೆ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿದೆ. ಆದರೆ, ವಿಚಾರಣೆ ನಡೆಸಿ ಮರಳಿ ಕಳುಹಿಸಿದ್ದಕ್ಕೆ ದೂರು ನೀಡಿದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತುಮಕೂರು ಗ್ರಾಮಾಂತರ ಶಾಸಕ ಸುರೇಶ್ ಗೌಡ ಮಾತನಾಡಿ, 5 ಬಾರಿ ಸಂಸದರಾಗಿ ಆಯ್ಕೆಯಾದವರು ಅನಂತ್ ಕುಮಾರ್. ಹುಬ್ಬಳ್ಳಿಯಿಂದ ಬೆಂಗಳೂರಿಗೆ ಬರುತ್ತಿದ್ದ ವೇಳೆ ಈ ಗಲಾಟೆಯಾಗಿದೆ. ಅನಂತ್ ಕುಮಾರ್ ಹೆಗಡೆ ಇದ್ದ ಕಾರಿಗೆ ಪಕ್ಕದಲ್ಲಿ ಬಂದ ಕಾರಿನವರು ಚಮಕ್ ಕೊಟ್ಟಿದ್ದಾರೆ. ಆಗ ಸರಿಯಾದ ರೀತಿಯಲ್ಲಿ ಹೋಗಿ ಅಂತ ಹೇಳಿದ್ದಾರೆ. ಗೊಂದಲವಾಗಿ ಗಲಾಟೆ ಶುರುವಾಗಿದೆ. ಅನಂತ್ ಕುಮಾರ್ ಹೆಗಡೆ ತಪ್ಪಿದ್ರೆ ಅವರು ಕ್ಷಮೆ ಕೇಳುತ್ತಾರೆ. ಅವರದ್ದು ಇದ್ದರೆ ಅವರೇ ಕೇಳಲಿ. ಈ ಕುರಿತು ಕುಳಿತು ಮಾತನಾಡೋಣ ಎಂದು ಕಳುಹಿಸಿರುವುದಾಗಿ ಹೇಳಿದ್ದಾರೆ.
ಈ ವಿಷಯವಾಗಿ ಬೆಂಗಳೂರು ಗ್ರಾಮಾಂತರ ಎಸ್ಪಿ ಸಿಕೆ ಬಾಬಾ ಮಾತನಾಡಿ, ಎ.1 ಅನಂತ್ಕುಮಾರ್ ಹೆಗಡೆ, ಎ2 ಗನ್ ಮ್ಯಾನ್, ಎ3- ಚಾಲಕ ಆರೋಪಿಗಳಾಗಿದ್ದಾರೆ. ಮೂವರ ವಿರುದ್ಧ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದ್ದು, ಪ್ರಕರಣ ದಾಖಲಾಗಿದೆ. ತನಿಖೆ ಮಾಡಿ ಅಗತ್ಯವಿದ್ದರೆ ಬಂಧಿಸಲಾಗುವುದು. ಗಾಯಾಳುಗಳ ಹೇಳಿಕೆ ಪಡೆದು ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.