ವಿದ್ಯುತ್ ಕಂಬ ಏಕಾಏಕಿ ಧರೆಗೆ ಉರುಳಿ ಬಿದ್ದಿದ್ದು, ಇಬ್ಬರು ಸೊಂಟ ಮುರಿದುಕೊಂಡಿರುವ ಘಟನೆ ಯಾದಗಿರಿ ನಗರದ ವೀರಶೈವ ಬಸವೇಶ್ವರ ಕಲ್ಯಾಣ ಮಂಟಪದ ಹಿಂದೆ ನಡೆದಿದೆ. ಶಿಥಿಲಗೊಂಡ ಕಂಬ ತೆರವು ಮಾಡದಿರುವುದರ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ. ಇದಕ್ಕೆ ಜೆಸ್ಕಾಂ ಇಲಾಖೆಯ ನಿರ್ಲಕ್ಷ್ಯ ಕಾರಣ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನೆಯಲ್ಲಿ 44 ವರ್ಷದ ಶೇಖಮ್ಮ ಹಾಗೂ ಅವರ ಪತಿ ಸಂತೋಷ್ ಗಾಯಗೊಂಡಿದ್ದಾರೆ. ಅಲ್ಲದೇ, ಕಾಳಮ್ಮ ಎಂಬ ವೃದ್ಧೆ ಕೂಡ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಯಾದಗಿರಿ ಯಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಯಾದಗಿರಿ ನಗರ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.