ರಾಯಚೂರು: ಇತ್ತೀಚೆಗೆ ರಾಜ್ಯದಲ್ಲಿ ಫೈನಾನ್ಸ್ ಸಿಬ್ಬಂದಿಗಳ ಕಿರುಕುಳ ಹೆಚ್ಚಾಗುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ. ಹೀಗಾಗಿ ಕೆಲವರು ಆತ್ಮಹತ್ಯೆಯ ಹಾದಿ ಹಿಡಿದರೆ, ಹಲವರು ಊರು ತೊರೆಯುತ್ತಿದ್ದಾರೆ. ಫೈನಾನ್ಸ್ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದವರ ಪತ್ನಿಯರು ಸರ್ಕಾರಕ್ಕೆ ತಾಳಿ ಕಳುಹಿಸುವ ಅಭಿಯಾನ ಕೂಡ ನಡೆಸಿದ್ದಾರೆ. ಇದರಿಂದ ಎಚ್ಚೆತ್ತುಕೊಂಡಿರುವ ಸರ್ಕಾರ ಕಿರುಕುಳಕ್ಕೆ ಕಡಿವಾಣ ಹಾಕಲು ಮುಂದಾಗಿದೆ. ಕಿರುಕುಳ ನೀಡುತ್ತಿದ್ದ ನಾಲ್ವರನ್ನು ಈಗ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಅಲ್ಲದೇ, ನಕಲಿ ಸಾಲ ರಿಕವರಿ ಟೀಂ ವಸೂಲಿ ದಂಧೆ ಕೂಡ ಬೆಳಕಿಗೆ ಬಂದಿದೆ. ಹೀಗೆ ಫೈನಾನ್ಸ್ ಸಾಲ ರಿಕವರಿ ಟೀಂ ಹೆಸರಿನಲ್ಲಿ ಕಿರುಕುಳ ನೀಡುತ್ತಿದ್ದ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಾಯಚೂರು (Raichuru) ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ಫಯಾಜ್, ಶೇಖ್ ಎಂಡಿ ಆಯುಬ್, ಸೈಯದ್ ಶಹಬಾಜ್ ಅಹ್ಮದ್, ಅರೋನ್ ರಸೀದ್ ಎಂದು ಗುರುತಿಸಲಾಗಿದೆ. ಈ ಟೀಂ ಮೊಬೈಲ್ ಆ್ಯಪ್ ನಲ್ಲಿ ಫೈನಾನ್ಸ್ ಗಳ ಸಾಲ ಬಾಕಿ ಇರುವವರನ್ನು ಗುರುತಿಸಿ, ಟಾರ್ಗೆಟ್ ಮಾಡುತ್ತಿದ್ದರು. ರಸ್ತೆ ಮಧ್ಯದಲ್ಲೇ ಬೈಕ್, ವಾಹನಗಳನ್ನ ಅಡ್ಡಗಟ್ಟಿ ಸಾಲ ತೀರಿಸುವಂತೆ ಬೆದರಿಕೆ ಹಾಕುತ್ತಿದ್ದರು ಎನ್ನಲಾಗಿದೆ.
ಯಾದಗಿರಿ ಜಿಲ್ಲೆ ಗುಂಡ್ಲೂರಿನ ಸೈಯದ್ ಬಾಷಾ ಎಂಬುವವರ ಬುಲೇರೋ ವಾಹನವನ್ನ ನಗರದ ಹೊರವಲಯದ ಬೈಪಾಸ್ ರಸ್ತೆಯಲ್ಲಿ ಹಿಡಿದು 12 ಸಾವಿರ ರೂ. ಬೇಡಿಕೆ ಇಟ್ಟು ವಾಹನ ಜಪ್ತಿ ಮಾಡಿದ್ದರು. ಸಾಲ ಮಾಡಿದ್ದ ಫೈನಾನ್ಸ್ ಕಂಪನಿಯಲ್ಲಿ ಸೈಯದ್ ಬಾಷಾ ಕಂತು ಕಟ್ಟಿದ್ದರೂ ವಾಹನ ಬಿಟ್ಟಿರಲಿಲ್ಲ. ಫೈನಾನ್ಸ್ ನಲ್ಲಿ ಮಾತ್ರ ಕಟ್ಟಿದರೆ ಸಾಲುವುದಿಲ್ಲ. ನಮಗೂ ಹಣ ನೀಡಬೇಕು ಎಂದು ಒತ್ತಾಯಿಸಿ, ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಹೀಗಾಗಿ ಸೈಯದ್ ಬಾಷಾ ಸಹೋದರ ಅಜೀಜ್ ರಾಯಚೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.