ಬೆಂಗಳೂರು: ಇತ್ತೀಚೆಗೆಷ್ಟೇ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ರೆಬೆಲ್ ಸದ್ದು ಮಾಡಿತ್ತು. ಈ ನಡುವೆ ಮಾಜಿ ಸಿಎಂ ಯಡಿಯೂರಪ್ಪ ಅವರಿಗೂ ತಾಕೀತು ಮಾಡಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ರಾಜಾಹುಲಿ ಸಕ್ರಿಯವಾಗಿದ್ದು, ರಾಜಕೀಯ ಅಖಾಡಕ್ಕೆ ಮತ್ತೆ ಎಂಟ್ರಿ ಕೊಟ್ಟಿದ್ದಾರೆ.
ಕೇಂದ್ರ ಚುನಾವಣಾ ಮಂಡಳಿ ಹಾಗೂ ಸಂಸದೀಯ ಸಮಿತಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಅವರು ವಾರದಲ್ಲಿ ಎರಡು ದಿನ ಬಿಜೆಪಿ ಕಚೇರಿಗೆ ಆಗಮಿಸುತ್ತೇನೆ. ಪ್ರತಿಯೊಂದು ಜಿಲ್ಲೆಗೂ ಭೇಟಿ ನೀಡಿ ಪಕ್ಷ ಕಟ್ಟುತ್ತೇನೆ ಎಂದಿದ್ದಾರೆ.
ಅಮಿತ್ ಶಾ ರಾಜ್ಯಕ್ಕೆ ಆಗಮಿಸಿದ್ದಾಗ ಅವರನ್ನು ಖಾಸಗಿ ಹೊಟೇಲ್ನಲ್ಲಿ ಯಡಿಯೂರಪ್ಪ ಭೇಟಿ ಮಾಡಿದ್ದರು. ಭೇಟಿಯ ವೇಳೆ ಸಾಲು ಸಾಲು ಸಲಹೆ- ಸೂಚನೆಗಳನ್ನು ಅಮಿತ್ ಶಾ ನೀಡಿದ್ದಾರೆ ಎನ್ನಲಾಗಿದೆ. ದೇಶದಲ್ಲಿ ಈ ಹಿಂದೆ ಇಂದಿರಾ ಗಾಂಧಿ ಅವರ ಆಳ್ವಿಕೆಯಲ್ಲಿ ತುರ್ತು ಪರಿಸ್ಥಿತಿ ಹೇರಿಕೆ ಮಾಡಲಾಗಿತ್ತು. ರಾಜ್ಯದಲ್ಲಿ ಇಂದು ಅದೇ ರೀತಿಯ ವಾತಾವರಣ ಇದೆ. ಈಗ ಕಾಂಗ್ರೆಸ್ ಒಳಜಗಳು ನಮಗೆ ಫಲಪ್ರದವಾಗಬೇಕು. ಜೊತೆಗೆ ನಿಮ್ಮಿಂದ ಹೊರ ಹೋಗಿರುವವರನ್ನು ಮತ್ತೆ ಪಕ್ಷಕ್ಕೆ ಎಳೆದು ತರುವ ಕೆಲಸ ಕಾರ್ಯಗಳು ಆಗಬೇಕು. ಅದಕ್ಕೆ ನೀವೇ ಸರಿಯಾದ ಆಯ್ಕೆ. ನೀವು ಆ್ಯಕ್ಟಿವ್ ಆಗಬೇಕು. ನಮ್ಮಲ್ಲಿದ್ದು ಇಂದು ಬೇರೆ ಪಕ್ಷಕ್ಕೆ ಹೋದವರು, ಉಚ್ಛಾಟನೆಗೊಂಡವರನ್ನು ಕರೆದು ಮಾತುಕತೆ ಮಾಡಬೇಕು. ಅವರನ್ನೆಲ್ಲಾ ಈಗಿನಿಂದಲೇ ಒಗ್ಗೂಡಿಸುವ ಕೆಲಸ ಮಾಡಬೇಕು. ಮುಂದಿನ ಮೂರು ವರ್ಷದ ಅವಧಿಯಲ್ಲಿ ಸುಭದ್ರವಾದ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರುವಂತಹ ತಾವರಣ ಸೃಷ್ಠಿಸಬೇಕು ಎಂದು ಸಲಹೆ ನೀಡಿದ್ದಾರೆ ಎನ್ನಲಾಗಿದೆ.
ಈ ನಿಟ್ಟಿನಲ್ಲಿ ತಾವು ಕಾರ್ಯೋನ್ಮುಖರಾಗಬೇಕು ಎಂದು ಸಲಹೆ ನೀಡಿದ್ದಾರೆ. ಹೀಗಾಗಿ ಯಡಿಯೂರಪ್ಪ ಆಕ್ಟಿವ್ ಆಗಿದ್ದಾರೆ. ಕಾಂಗ್ರೆಸ್ನಲ್ಲಿ ಅಸಮಾಧಾನಿತರಿಗೆ ತೆರೆಮರೆಯಲ್ಲಿ ಗಾಳ ಹಾಕಲು ಯಡಿಯೂರಪ್ಪ ಮುಂದಾಗಿದ್ದಾರೆ. ಬಿ.ಆರ್.ಪಾಟೀಲ್ ಸದ್ಯ ಕಾಂಗ್ರೆಸ್ನಲ್ಲಿ ಅಸಮಾಧಾನಿತರು. ಅವರು ಈ ಹಿಂದೆ ಯಡಿಯೂರಪ್ಪರ ಜೊತೆಗೆ ಕೆಜೆಪಿಯಲ್ಲಿದ್ದವರು. 2013 ರ ಚುನಾವಣೆಯಲ್ಲಿ ಆಳಂದ ಕ್ಷೇತ್ರದ ಕೆಜೆಪಿ ಶಾಸಕರಾಗಿ ಆಯ್ಕೆಯಾಗಿ ಬಂದವರು. ಮತ್ತೆ ಅವರನ್ನು ಸಂಪರ್ಕ ಮಾಡುವ ಇರಾದೆಯನ್ನು ಯಡಿಯೂರಪ್ಪ ಹೊಂದಿದ್ದಾರೆ. ಶಾಸಕ ರಾಜು ಕಾಗೆ ಕೂಡ ಬಿಜೆಪಿಯಲ್ಲಿದ್ದವರು. ಬದಲಾದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ಗೆ ಹೋಗಿರುವವರು. ಅವರನ್ನೂ ಪಕ್ಷಕ್ಕೆ ಕರೆ ತರಲು ಯಡಿಯೂರಪ್ಪ ಚಿಂತಿಸುತ್ತಿದ್ದಾರೆ. ಕೆ.ಎಸ್.ಈಶ್ವರಪ್ಪ ಅವರನ್ನು ಸಂಪರ್ಕ ಮಾಡಲು ನಿಧಾನವಾದ ವೇದಿಕೆ ಪಕ್ಷದೊಳಗೆ ಆಗುತ್ತಿದೆ. ಇದರ ಜೊತೆಗೆ ಸಚಿವ ಜಮೀರ್ ವಿರುದ್ಧ ರಾಜೀನಾಮೆಗೆ ಆಗ್ರಹಿಸಿರುವ ಶಾಸಕ ಬೇಳೂರು ಗೋಪಾಲಕೃಷ್ಣ ಯಡಿಯೂರಪ್ಪರೊಂದಿಗೆ ರಾಜಕಾರಣಕ್ಕೆ ಪಾದಾರ್ಪಣೆ ಮಾಡಿದವರು. ಅವರು ಯಡಿಯೂರಪ್ಪರ ಸ್ವಯಂ ಜಿಲ್ಲೆಯವರಾಗಿದ್ದಾರೆ. ಅವರನ್ನು ಸಂಪರ್ಕ ಮಾಡುವ ಇರಾದೆ ಕೂಡ ಯಡಿಯೂರಪ್ಪರಿಗಿದೆ. ಹೀಗೆ ಅಖಾಡಕ್ಕೆ ಇಳಿದಿರುವ ಯಡಿಯೂರಪ್ಪ ನಿಧಾನವಾಗಿ ಕಾಂಗ್ರೆಸ್ ಗೆ ಪೆಟ್ಟು ಕೊಡಲು ತಯಾರಿ ನಡೆಸುತ್ತಿದ್ದಾರೆ ಎನ್ನಲಾಗಿದೆ.