ಛತ್ತೀಸಗಢದ ಗರಿಯಾಬಂದ್(Gariaband) ಜಿಲ್ಲೆಯಲ್ಲಿ ನಕ್ಸಲರು ಹಾಗೂ ಭದ್ರತಾ ಪಡೆಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಹತರಾದ ನಕ್ಸಲರ ಸಂಖ್ಯೆ 20ಕ್ಕೆ ಏರಿಕೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಓರ್ವ ನಕ್ಸಲ್ ಮುಖಂಡನ ತಲೆಗೆ 1 ಕೋಟಿ ರೂ. ಇನಾಮು ಘೋಷಣೆಯಾಗಿತ್ತು. ಆತನನ್ನು ಕೂಡ ಹೊಡೆದುರುಳಿಸಲಾಗಿದೆ. ಈ ಕುರಿತು ಮಾಹಿತಿ ನೀಡಿರುವ ಗರಿಯಾಬಂದ್ ಎಸ್ಪಿ ನಿಖಿಲ್ ರಖೇಚಾ, ಹತ್ಯೆಗೀಡಾದ ನಕ್ಸಲರಲ್ಲಿ ಮಾವೋವಾದಿಗಳ ಸೆಂಟ್ರಲ್ ಸಮಿತಿ ಮುಖಂಡ ಕೂಡ ಸೇರಿದ್ದಾನೆ. ಆತನನ್ನು ಜೈರಾಮ್ ಅಲಿಯಾಸ್ ಚಲಪತಿ ಎಂದು ಗುರುತಿಸಲಾಗಿದೆ. ಈತನ ತಲೆಗೆ 1 ಕೋಟಿ ರೂ. ಇನಾಮು ಘೋಷಣೆಯಾಗಿತ್ತು ಎದು ಹೇಳಿದ್ದಾರೆ.
ಜಿಲ್ಲಾ ಮೀಸಲು ಗಾರ್ಡ್(ಡಿಆರ್ ಜಿ), ಕೇಂದ್ರ ಮೀಸಲು ಪೊಲೀಸ್ ಪಡೆ(ಸಿಆರ್ ಪಿಎಫ್), ಛತ್ತೀಸಗಢದ ಕೋಬ್ರಾ ಪಡೆ ಹಾಗೂ ಒಡಿಶಾದ ವಿಶೇಷ ಕಾರ್ಯಾಚರಣೆ ಪಡೆ(ಎಸ್ ಒಜಿ) ಜಂಟಿಯಾಗಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದವು. ಜ. 19ರ ರಾತ್ರಿ ಗುಪ್ತಚರದ ಮಾಹಿತಿ ಆಧರಿಸಿ ಛತ್ತೀಸಗಢದ ಕುಲಾರಿಘಾಟ್ ಮೀಸಲು ಅರಣ್ಯದಲ್ಲಿ ಕಾರ್ಯಾಚರಣೆ ಆರಂಭಿಸಲಾಗಿತ್ತು. ಕಾರ್ಯಾಚರಣೆ ಈಗಲೂ ಮುಂದುವರೆದಿದ್ದು, ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.