ಬೆಳ್ಳಂಬೆಳಗ್ಗೆ ರಾಜ್ಯ ಕಾಂಗ್ರೆಸ್ ನಾಯಕರಿಗೆ ಇಡಿ ಬಿಗ್ ಶಾಕ್ ನೀಡಿದೆ. ರಾಜ್ಯದ 8 ಕಡೆ 60ಕ್ಕೂ ಹೆಚ್ಚು ಅಧಿಕಾರಿಗಳಿಂದ ಏಕಕಾಲಕ್ಕೆ ಮೆಗಾ ರೇಡ್ ಮಾಡಲಾಗಿದೆ.
ವಾಲ್ಮೀಕಿ ಹಗರಣದ ತನಿಖೆ ಕೈಗೊಂಡಿರುವ ಇಡಿ ಈಗ ರಾಜ್ಯದ ಕಾಂಗ್ರೆಸ್ ಶಾಸಕರು, ಸಂಸದರ ಮನೆ, ಕಚೇರಿಗಳ ಮೇಲೆ ದಾಳಿ ಮಾಡಿದೆ. ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಮನೆ, ಕಚೇರಿಗಳಲ್ಲಿ ಶೋಧ ಮುಂದುವರಿದಿದೆ. ಉಳಿದಂತೆ ಬಳ್ಳಾರಿ ಸಂಸದ ಇ ತುಕಾರಂ, ಸಂಡೂರು ಶಾಸಕಿ ಅನ್ನಪೂರ್ಣ, ಕೂಡ್ಲಿಗಿ ಶಾಸಕ ಡಾ ಎನ್ ಟಿ ಶ್ರೀನಿವಾಸ್, ಕಂಪ್ಲಿ ಶಾಸಕ ಗಣೇಶ್ ನಿವಾಸಗಳಲ್ಲಿ ನಿರಂತರ ಶೋಧ ಮುಂದುವರಿದಿದೆ.
ಇತ್ತ ಬೆಂಗಳೂರಿನ ಶಾಸಕರ ಭವನದಲ್ಲಿರೋ ಬಳ್ಳಾರಿ ಗ್ರಾಮಾಂತರ ಶಾಸಕ ಎನ್ ನಾಗೇಂದ್ರ ರೂಂನಲ್ಲೂ ಇಡಿ ಪರಿಶೀಲನೆ ನಡೆಸಿದೆ. ಮುಂಜಾನೆ 6 ಗಂಟೆಗೆ ಆಗಮಿಸಿದ ಇಡಿ ಅಧಿಕಾರಿಗಳನ್ನು ಕಂಡು ಕಾಂಗ್ರೆಸ್ ಮುಖಂಡರು ಶಾಕ್ ಆಗಿದ್ದಾರೆ.
ಬಳ್ಳಾರಿ ಲೋಕಸಭಾ ಚುನಾವಣೆ ವೇಳೆ ವಾಲ್ಮೀಕಿ ನಿಗಮದ ಹಣವನ್ನು ಅಕ್ರಮವಾಗಿ ಬಳಸಿಕೊಳ್ಳಲಾಗಿದೆ ಅನ್ನೋ ಆರೋಪ ಕೇಳಿ ಬಂದಿತ್ತು. ಈ ಪ್ರಕರಣದಲ್ಲೇ ಬಂಧನಕ್ಕೊಳಗಾಗಿದ್ದ ಶಾಸಕ ನಾಗೇಂದ್ರ ಸದ್ಯ ಜಾಮೀನಿನ ಮೇಲೆ ಹೊರಗಿದ್ದಾರೆ. ಅಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ನ ಇ ತುಕಾರಂ ಭರ್ಜರಿ ಜಯ ದಾಖಲಿಸಿದ್ರು. ಇದೀಗ ಆ ಚುನಾವಣೆಯಲ್ಲಿ ನಡೆದ ಅಕ್ರಮದ ಬೆನ್ನುಬಿದ್ದಿರುವ ಇಡಿ, ರಾಜ್ಯ ಕಾಂಗ್ರೆಸ್ ನ ಅತಿರಥರ ಜನ್ಮ ಜಾಲಾಡ್ತಿದೆ. ಈಗಾಗಲೇ ಹಲವು ದಾಖಲೆಗಳು ಪತ್ತೆಯಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಮುಖಂಡರಿಂದ ಸ್ಪಷ್ಟನೆ ದಾಖಲಿಸಿಕೊಳ್ಳಲಾಗ್ತಿದೆ.