ದುಲೀಪ್ ಟ್ರೋಫಿಯನ್ನು ಈ ಬಾರಿ ಭಾರತ ಎ ತಂಡ ಗೆದ್ದು ಬೀಗಿದೆ.
ಕನ್ನಡಿಗ ಮಯಾಂಕ್ ಅಗರ್ವಾಲ್ ನೇತೃತ್ವದ ಭಾರತ ಎ ತಂಡ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರಿ, ಕಪ್ ಎತ್ತಿದೆ. ಟೂರ್ನಿಯ ಕೊನೆಯ ಸುತ್ತಿನ ಪಂದ್ಯದಲ್ಲಿ ಭಾರತ ಸಿ ತಂಡವನ್ನು 132 ರನ್ ಗಳಿಂದ ಮಣಿಸಿದ ಭಾರತ ಎ ತಂಡ ಟ್ರೋಫಿಗೆ ಮುತ್ತಿಕ್ಕಿದೆ.
ಈ ಟೂರ್ನಿಯಲ್ಲಿ ಪಾಯಿಂಟ್ ಪಟ್ಟಿಯಲ್ಲಿ ಅಧಿಕ ಅಂಕಗಳನ್ನು ಪಡೆಯುವ ತಂಡವನ್ನು ಚಾಂಪಿಯನ್ ಎಂದು ಘೋಷಿಸಲಾಗುತ್ತದೆ. ಅದರಂತೆ ಟೂರ್ನಿಯಲ್ಲಿ ಆಡಿದ ಮೂರು ಪಂದ್ಯಗಳಲ್ಲಿ 2 ಗೆಲುವು ಹಾಗೂ 1 ಡ್ರಾದೊಂದಿಗೆ ಭಾರತ ಎ ತಂಡ 12 ಅಂಕಗಳನ್ನು ಸಂಪಾದಿಸಿದೆ. ಹೀಗಾಗಿ ಭಾರತ ಎ ತಂಡ ಅಗ್ರಸ್ಥಾನದೊಂದಿಗೆ ಚಾಂಪಿಯನ್ ಆಗಿದೆ.
ಈ ಟೂರ್ನಿಯಲ್ಲಿ ನಾಲ್ಕು ತಂಡಗಳು ಭಾಗವಹಿಸುತ್ತೇವೆ. ಕೊನೆಯಲ್ಲಿ ಅತ್ಯಧಿಕ ಪಾಯಿಂಟ್ ಗಳಿಸುವ ತಂಡವನ್ನು ಚಾಂಪಿಯನ್ ಎಂದು ಘೋಷಿಸಲಾಗುತ್ತದೆ. ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲು ಭಾರತ ಎ ತಂಡಕ್ಕೆ ಈ ಗೆಲುವು ಅವಶ್ಯವಾಗಿತ್ತು. ಪಂದ್ಯದ ಕೊನೆಯ ದಿನ ಅದ್ಭುತ ಪ್ರದರ್ಶನ ನೀಡಿದ ತಂಡದ ಬೌಲರ್ಗಳು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಪಂದ್ಯದ ಕೊನೆಯ ದಿನ ಭಾರತ ಎ ತಂಡಕ್ಕೆ ಕೊನೆಯ 9 ಓವರ್ ಗಳಲ್ಲಿ 4 ವಿಕೆಟ್ ಗಳ ಅಗತ್ಯವಿತ್ತು. ಇನ್ನೊಂದೆಡೆ ಭಾರತ ಸಿ ಪರ ಸಾಯಿ ಸುದರ್ಶನ್ ಶತಕದ ಇನ್ನಿಂಗ್ಸ್ ಆಡುತ್ತಿದ್ದರು. ಕನ್ನಡಿಗ ಪ್ರಸಿದ್ಧ್ ಕೃಷ್ಣ, ಶತಕ ಸಿಡಿಸಿದ್ದ ಸುದರ್ಶನ್ ಸೇರಿದಂತೆ 3 ವಿಕೆಟ್ ಪಡೆದು ತಂಡವನ್ನು ಗೆಲುವಿನತ್ತ ಕೊಂಡೊಯ್ದರು.
ಕೊನೆಗೂ ಘಟಾನುಘಟಿಗಳಿಂದ ಕೂಡಿದ ಭಾರತ ಸಿ ತಂಡ ಸೋಲಿನ ಕಹಿ ಅನುಭವಿಸಿತು. ಮೂರು ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯವನ್ನು ಗೆದ್ದಿದ್ದ ಭಾರತ ಸಿ ತಂಡ 9 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆಯಿತು. ಭಾರತ ಬಿ ಮತ್ತು ಇಂಡಿಯಾ ಡಿ ತಂಡಗಳು ಕ್ರಮವಾಗಿ ಏಳು ಮತ್ತು ಆರು ಅಂಕಗಳೊಂದಿಗೆ ಮೂರು ಮತ್ತು ನಾಲ್ಕನೇ ಸ್ಥಾನ ಪಡೆದವು.