ನವದೆಹಲಿ: ಪಹಲ್ಗಾಮ್ ಉಗ್ರರ ದಾಳಿಯ(Pahalgam attack) ಕುರಿತು ನ್ಯಾಯಾಂಗ ತನಿಖೆಗೆ ನಿರ್ದೇಶಿಸುವಂತೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್ ಗುರುವಾರ ನಿರಾಕರಿಸಿದೆ. ಅಲ್ಲದೆ ಇಂತಹ ಕ್ರಮವು ದೇಶದ ಸೇನಾ ಪಡೆಗಳ ನೈತಿಕ ಸ್ಥೈರ್ಯವನ್ನು ಕುಗ್ಗಿಸುತ್ತದೆ ಎಂದು ಹೇಳಿದೆ.
ಅರ್ಜಿಯನ್ನು ವಜಾಗೊಳಿಸುವ ವೇಳೆ ಅರ್ಜಿದಾರರನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್, ಇಂತಹ ಮನವಿಯನ್ನು ಸಲ್ಲಿಸುವ ಮೊದಲು ಈ ವಿಷಯದ ಸೂಕ್ಷ್ಮತೆಯನ್ನು ಪರಿಶೀಲಿಸಬೇಕಾಗಿತ್ತು ಎಂದು ಹೇಳಿದೆ.
“ಇಂತಹ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸುವ ಮೊದಲು ಜವಾಬ್ದಾರಿಯುತವಾಗಿ ವರ್ತಿಸಿರಿ. ನಿಮ್ಮ ದೇಶದ ಬಗ್ಗೆ ನಿಮಗೆ ಕೆಲವೊಂದು ಕರ್ತವ್ಯಗಳಿರುತ್ತವೆ. ಭಯೋತ್ಪಾದನೆಯ ವಿರುದ್ಧ ದಹೋರಾಡದಲ್ಲಿ ಪ್ರತಿಯೊಬ್ಬ ಭಾರತೀಯನೂ ಕೈಜೋಡಿಸಿರುವ ನಿರ್ಣಾಯಕ ಸಮಯ ಇದು. ಇಂತಹ ಸಂದರ್ಭದಲ್ಲಿ ಭದ್ರತಾ ಪಡೆಗಳ ನೈತಿಕ ಸ್ಥೈರ್ಯವನ್ನು ಕುಗ್ಗಿಸಬೇಡಿ. ಈ ವಿಷಯದ ಸೂಕ್ಷ್ಮತೆಯನ್ನು ಅರಿತುಕೊಳ್ಳಿ” ಎಂದು ನ್ಯಾಯಮೂರ್ತಿ ಸೂರ್ಯ ಕಾಂತ್ ಹೇಳಿದರು.
ಪಹಲ್ಗಾಮ್ನ ಬೈಸರನ್ ಕಣಿವೆಯಲ್ಲಿ 26 ಜನರ ಸಾವಿಗೆ ಕಾರಣವಾದ ಭಯೋತ್ಪಾದಕ ದಾಳಿಯ ಬಗ್ಗೆ ತನಿಖೆ ನಡೆಸಲು ನ್ಯಾಯಾಂಗ ಆಯೋಗವನ್ನು ರಚಿಸಬೇಕೆಂದು ಅರ್ಜಿಯಲ್ಲಿ ಕೋರಲಾಗಿತ್ತು ನ್ಯಾಯಾಧೀಶರ ಕೆಲಸ ವಿವಾದಗಳನ್ನು ಇತ್ಯರ್ಥಪಡಿಸುವುದೇ ಹೊರತು ವಿಚಾರಣೆ ನಡೆಸುವುದು ಅಲ್ಲ ಎಂದು ನ್ಯಾಯಾಲಯ ಹೇಳಿದೆ.
“ನಾವು ಯಾವಾಗಿನಿಂದ ತನಿಖೆಯಲ್ಲಿ ಪರಿಣತಿ ಪಡೆದಿದ್ದು? ನೀವು ಈ ಪ್ರಕರಣದ ತನಿಖೆಯನ್ನು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ನಡೆಸಬೇಕೆಂದು ಕೇಳಿಕೊಳ್ಳುತ್ತಿದ್ದೀರಿ. ನಾವು ತೀರ್ಪುಗಳನ್ನು ನೀಡಬಹುದು ಅಷ್ಟೇ. ಆದೇಶ ಹೊರಡಿಸುವಂತೆ ನಮ್ಮಲ್ಲಿ ಕೇಳಬೇಡಿ” ಎಂದು ಅರ್ಜಿದಾರರನ್ನು ಸುಪ್ರೀಂ ಕೋರ್ಟ್ ನ್ಯಾಯಪೀಠ ತರಾಟೆಗೆ ತೆಗೆದುಕೊಂಡಿತು.
ಇದೇ ವೇಳೆ ಜಮ್ಮು-ಕಾಶ್ಮೀರದ ಹೊರಗೆ ವ್ಯಾಸಂಗ ಮಾಡುತ್ತಿರುವ ಕಾಶ್ಮೀರಿ ವಿದ್ಯಾರ್ಥಿಗಳನ್ನು ರಕ್ಷಿಸುವಂತೆ ನಿರ್ದೇಶನ ನೀಡುವಂತೆ ಕೋರಿದ್ದಕ್ಕೂ ಅರ್ಜಿದಾರರ ವಿರುದ್ಧ ಕಿಡಿಕಾರಿದ ನ್ಯಾಯಪೀಠ, “ನೀವು ಏನನ್ನು ಕೇಳಿಕೊಳ್ಳುತ್ತಿದ್ದೀರಿ ಎಂದು ನಿಮಗೆ ಗೊತ್ತಿದೆಯೇ? ಮೊದಲು ನೀವು ಸುಪ್ರೀಂ ಕೋರ್ಟ್ ನಿವೃತ್ತ ಜಡ್ಜ್ ರಿಂದ ತನಿಖೆ ನಡೆಯಬೇಕೆಂದು ಕೇಳುತ್ತೀರಿ. ನಂತರ ಮಾರ್ಗಸೂಚಿಗೆ ಮನವಿ ಮಾಡುತ್ತೀರಿ, ಬಳಿಕ ಪರಿಹಾರಕ್ಕೆ, ತದನಂತದ ಪತ್ರಿಕಾ ಮಂಡಳಿಗೆ ನಿರ್ದೇಶನ ನೀಡುವಂತೆ ಹೇಳುತ್ತೀರಿ. ನಾವು ರಾತ್ರಿ-ಹಗಲಾಗುವುದರೊಳಗೆ ಇವೆಲ್ಲವನ್ನೂ ಓದಿಕೊಳ್ಳಬೇಕೇ? ಎಲ್ಲವನ್ನೂ ಬಿಟ್ಟು ಈಗ ಕಾಶ್ಮೀರಿ ವಿದ್ಯಾರ್ಥಿಗಳ ಬಗ್ಗೆ ಮಾತನಾಡುತ್ತಿದ್ದೀರಿ” ಎಂದು ಆಕ್ರೋಶ ವ್ಯಕ್ತಪಡಿಸಿ, ಕೊನೆಗೆ ಅರ್ಜಿಯನ್ನು ವಜಾ ಮಾಡಿತು.