ಜೈಪುರ: ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ (ASI)ಯು ರಾಜಸ್ಥಾನದ ದೀಗ್ ಜಿಲ್ಲೆಯ ಬಹಾಜ್ ಗ್ರಾಮದಲ್ಲಿ ಒಂದು ಅದ್ಭುತ ಆವಿಷ್ಕಾರವನ್ನು ಮಾಡಿದೆ. ಸುಮಾರು 4,500 ವರ್ಷಗಳ ಹಿಂದಿನ ನಾಗರಿಕತೆಯ ಅವಶೇಷಗಳನ್ನು ಪುರಾತತ್ವ ಇಲಾಖೆ ಪತ್ತೆಹಚ್ಚಿದೆ. ವಿಶೇಷವೆಂದರೆ ಋಗ್ವೇದದಲ್ಲಿ ಉಲ್ಲೇಖಿಸಲಾದ ಪೌರಾಣಿಕ ಸರಸ್ವತಿ ನದಿಗೆ ಸಂಬಂಧಿಸಿದ್ದು ಎನ್ನಲಾದ 23 ಮೀಟರ್ ಆಳದ ಪುರಾತನ ನದಿಯ ಕಾಲುವೆ (ಪಾಲಿಯೋ-ಚಾನಲ್)ಯೊಂದನ್ನೂ ಇಲಾಖೆ ಪತ್ತೆಹಚ್ಚಿದೆ. ಈ ಐತಿಹಾಸಿಕ ಆವಿಷ್ಕಾರವು ಭಾರತದ ಪ್ರಾಚೀನ ಇತಿಹಾಸವನ್ನು ಮರುವ್ಯಾಖ್ಯಾನಿಸುವ ಸಾಧ್ಯತೆಯನ್ನು ಹೊಂದಿದ್ದು, ರಾಜಸ್ಥಾನ ಮಾತ್ರವಲ್ಲದೇ ಇಡೀ ಉತ್ತರ ಭಾರತದ ಇತಿಹಾಸವನ್ನು ತಿಳಿಯಲು ಹೊಸ ದಿಕ್ಕನ್ನು ತೋರಿಸಿದೆ.
2024ರ ಜನವರಿ 10ರಂದು ಆರಂಭವಾದ ಈ ಉತ್ಖನನವು ದೀಗ್ ಜಿಲ್ಲೆಯ ಬಹಾಜ್ ಗ್ರಾಮದಲ್ಲಿ, ಭರತ್ಪುರದಿಂದ ಸುಮಾರು 37 ಕಿಮೀ ದೂರದಲ್ಲಿ ಮತ್ತು ಗೋವರ್ಧನ್ ಬೆಟ್ಟದ ಸಮೀಪದ ಉತ್ತರ ಪ್ರದೇಶ-ರಾಜಸ್ಥಾನ ಗಡಿಯ ಬ್ರಜ್ ಪ್ರದೇಶದಲ್ಲಿ ನಡೆದಿದೆ. ಈ ಉತ್ಖನನವು ರಾಜಸ್ಥಾನದ ಇತಿಹಾಸದಲ್ಲೇ ಗರಿಷ್ಠ ಅಂದರೆ 23 ಮೀಟರ್ ಆಳದವರೆಗೆ ತಲುಪಿದೆ. ಈ ಕಾರ್ಯದ ಮುಖ್ಯಸ್ಥರಾದ ಪುರಾತತ್ವ ಇಲಾಖೆಯ ಜೈಪುರದ ಸೂಪರಿಂಟೆಂಡಿಂಗ್ ಆರ್ಕಿಯಾಲಜಿಸ್ಟ್ ವಿನಯ್ ಗುಪ್ತಾ ಅವರು, “ಈ ಪುರಾತನ ನದಿಯ ವ್ಯವಸ್ಥೆಯು ಆರಂಭಿಕ ಮಾನವ ನೆಲೆಗಳಿಗೆ ಪೋಷಣೆ ನೀಡಿತು ಮತ್ತು ಬಹಾಜ್ನ ನೆಲೆಯನ್ನು ಸರಸ್ವತಿ ಜಲಾನಯನ ಸಂಸ್ಕೃತಿಯೊಂದಿಗೆ ಸಂಪರ್ಕಿಸಿತು” ಎಂದು ತಿಳಿಸಿದ್ದಾರೆ.

ಸರಸ್ವತಿ ನದಿಯ ಸಂಪರ್ಕ
ಉತ್ಖನನದ ಸಮಯದಲ್ಲಿ ಕಂಡುಬಂದ 23 ಮೀಟರ್ ಆಳದ ಪಾಲಿಯೋ-ಚಾನಲ್ ಋಗ್ವೇದದಲ್ಲಿ ವರ್ಣಿಸಲಾದ ಸರಸ್ವತಿ ನದಿಯ ಭಾಗವಾಗಿರಬಹುದು ಎಂದು ಇತಿಹಾಸಕಾರರು ಮತ್ತು ಪುರಾತತ್ವಶಾಸ್ತ್ರಜ್ಞರು ಊಹಿಸುತ್ತಿದ್ದಾರೆ. ಈ ಆವಿಷ್ಕಾರವು ಈ ಪ್ರದೇಶದ ಭೌಗೋಳಿಕ ಮತ್ತು ಐತಿಹಾಸಿಕ ಮಹತ್ವವನ್ನು ಎತ್ತಿ ತೋರಿಸಿದೆ. ಸರಸ್ವತಿ ನದಿಯು ಹಲವು ಸಾವಿರ ವರ್ಷಗಳ ಹಿಂದೆ ತನ್ನ ಶಾಶ್ವತ ಘಟ್ಟದಲ್ಲಿತ್ತು ಎಂದು ಭಾವಿಸಲಾಗಿದ್ದು, ಋಗ್ವೇದದಲ್ಲಿ ಇದನ್ನು ಒಂದು ಭವ್ಯವಾದ, ಇನ್ನೂ ಹರಿಯುತ್ತಿರುವ ನದಿಯೆಂದು ವರ್ಣಿಸಲಾಗಿದೆ.
ಈ ಕಾಲುವೆಯ ಗುರುತಿನ ದೃಢೀಕರಣಕ್ಕಾಗಿ ಭಾರತೀಯ ರಿಮೋಟ್ ಸೆನ್ಸಿಂಗ್ ಉಪಗ್ರಹದ ದತ್ತಾಂಶವನ್ನು ಡಿಜಿಟಲ್ ಎಲಿವೇಶನ್ ಮಾಡೆಲ್ನೊಂದಿಗೆ ಬಳಸಲಾಗಿದೆ. ಈ ಉಪಗ್ರಹ ಚಿತ್ರಗಳು ಮಲ್ಟಿಸ್ಪೆಕ್ಟ್ರಲ್ ಮತ್ತು ಮಲ್ಟಿಟೆಂಪೊರಲ್ ಆಗಿದ್ದು, ಪಾಲಿಯೋ-ಚಾನಲ್ಗಳನ್ನು ಕಂಡುಹಿಡಿಯಲು ಸಹಾಯಕವಾಗಿವೆ. ಈ ಚಾನಲ್ಗಳನ್ನು ಐತಿಹಾಸಿಕ ನಕ್ಷೆಗಳು, ಪುರಾತತ್ವ ಸ್ಥಳಗಳು, ಜಲವಿಜ್ಞಾನ ಮತ್ತು ಕೊರೆಯುವಿಕೆ ಡೇಟಾದಿಂದ ದೃಢೀಕರಿಸಲಾಗಿದೆ. ಕಾಲಿಬಂಗನ್ (ರಾಜಸ್ಥಾನ), ಬನವಾಲಿ ಮತ್ತು ರಾಖಿಗರ್ಹಿ (ಹರಿಯಾಣ), ಧೋಲವಿರ ಮತ್ತು ಲೋಥಲ್ (ಗುಜರಾತ್) ನಂತಹ ಪ್ರಮುಖ ಹರಪ್ಪಾ ಸ್ಥಳಗಳು ಸರಸ್ವತಿ ನದಿಯ ದಡದಲ್ಲಿವೆ ಎಂದು ಗಮನಿಸಲಾಗಿದೆ.
ಕಂಡುಬಂದ ಅವಶೇಷಗಳು
ಉತ್ಖನನದ ವೇಳೆ ಕಂಡುಬಂದ ಆವಿಷ್ಕಾರಗಳು ಈ ನಾಗರಿಕತೆಯ ಜೀವನಶೈಲಿಯನ್ನು ಬೆಳಕಿಗೆ ತಂದಿವೆ:
ಓಕರ್ ಕಲರ್ಡ್ ಪಾಟರಿ: ಸುಮಾರು ಕ್ರಿಪೂ 3500-1000ಕ್ಕೆ ಸೇರಿದ ಈ ಮಡಿಕೆಗಳು ಈ ನಾಗರಿಕತೆಯ ಕರಕುಶಲತೆಯನ್ನು ತೋರಿಸುತ್ತವೆ.
ಶಿವ-ಪಾರ್ವತಿ ಮೂರ್ತಿಗಳು: ಟೆರಾಕೋಟಾದಿಂದ ಮಾಡಲಾದ ಶಿವ ಮತ್ತು ಪಾರ್ವತಿಯ ಮೂರ್ತಿಗಳು, ಶಕ್ತಿ ಆರಾಧನೆಗೆ ಸಂಬಂಧಿಸಿದ 15 ಯಜ್ಞ ಕುಂಡಗಳು ಮತ್ತು ವೋಟಿವ್ ಟ್ಯಾಂಕ್ಗಳು ಈ ನಾಗರಿಕತೆಯ ಆಧ್ಯಾತ್ಮಿಕ ಜೀವನವನ್ನು ಎತ್ತಿ ತೋರಿಸುತ್ತವೆ.
ಲೋಹಶಾಸ್ತ್ರದ ಜ್ಞಾನ: ಕುಲುಮೆಗಳು ಮತ್ತು ಲೋಹದ ವಸ್ತುಗಳ ಆವಿಷ್ಕಾರವು ಈ ನಾಗರಿಕತೆಯ ಜನರು ಲೋಹಶಾಸ್ತ್ರದಲ್ಲಿ ಪರಿಣತಿಯನ್ನು ಹೊಂದಿದ್ದರು ಎಂದು ಸೂಚಿಸುತ್ತದೆ.
ಬ್ರಾಹ್ಮೀ ಲಿಪಿಯ ಮುದ್ರೆಗಳು: ನಾಲ್ಕು ಅಪಕ್ವ ಮುದ್ರೆಗಳು, ಈ ಪೈಕಿ ಎರಡು ಬ್ರಾಹ್ಮೀ ಲಿಪಿಯಲ್ಲಿ ಕೆತ್ತಲಾಗಿವೆ. ಈ ನಾಗರಿಕತೆಯ ಲಿಖಿತ ಸಂವಹನದ ಸಾಧ್ಯತೆಯನ್ನು ಇದು ತೋರಿಸುತ್ತವೆ.
ಮೈಕ್ರೊಲಿಥಿಕ್ ಉಪಕರಣಗಳು: ಸಣ್ಣ ಕಲ್ಲಿನ ಉಪಕರಣಗಳು ಪ್ರಿ-ಹೊಲೊಸೀನ್ ಯುಗಕ್ಕೆ ಸೇರಿವೆ ಎಂದು ಸೂಚಿಸುತ್ತವೆ.

ಈ ಆವಿಷ್ಕಾರದ ಮಹತ್ವ
ಈ ಆವಿಷ್ಕಾರವನ್ನು ಭಾರತದ ಇತಿಹಾಸದಲ್ಲಿ ಒಂದು ಹೊಸ ಅಧ್ಯಾಯ ಎಂದೇ ಹೇಳಬಹುದು. ಇದು ಮಹಾಭಾರತ ಕಾಲಕ್ಕೆ ಸಂಬಂಧಿಸಿದ ಅಂಶಗಳನ್ನು ಒಳಗೊಂಡಿದೆ ಎಂದು ಕೆಲವು ಇತಿಹಾಸಕಾರರು ಭಾವಿಸುತ್ತಾರೆ. ಸರಸ್ವತಿ ನದಿಯ ಕಾಲುವೆಯ ಆವಿಷ್ಕಾರವು ಈ ಪ್ರದೇಶದ ಜನರು ಸಂಕೀರ್ಣವಾದ ಜಲ ವ್ಯವಸ್ಥೆಯನ್ನು ಅವಲಂಬಿಸಿದ್ದರು ಎಂಬುದನ್ನು ತೋರಿಸುತ್ತದೆ. ಈ ನದಿಯು ಯಮುನಾ, ಸರಸ್ವತಿ ಅಥವಾ ಸಂಪೂರ್ಣವಾಗಿ ಬೇರೊಂದು ನದಿಯಾಗಿರಬಹುದು ಎಂದು ವಿನಯ್ ಗುಪ್ತಾ ಎಚ್ಚರಿಕೆಯಿಂದ ತಿಳಿಸಿದ್ದಾರೆ. ಆದರೆ ವೈಜ್ಞಾನಿಕ ಡೇಟಿಂಗ್ ಪೂರ್ಣಗೊಂಡ ನಂತರ ಇದರ ನಿಖರ ಯುಗವನ್ನು ತಿಳಿಯಬಹುದು ಎಂದೂ ಸ್ಪಷ್ಟಪಡಿಸಿದ್ದಾರೆ.
ಈ ಪ್ರದೇಶವು ಭೌಗೋಳಿಕವಾಗಿ ಸರಸ್ವತಿ ಜಲಾನಯನ ಸಂಸ್ಕೃತಿಯ ಮಧ್ಯದಲ್ಲಿ ಇದೆ. 150 ಕಿಮೀ ಪಶ್ಚಿಮದಲ್ಲಿ ಹರಪ್ಪನ್ ನಾಗರಿಕತೆಯ ಸ್ಥಳಗಳಾದ ಕಾಲಿಬಂಗನ್, ಬನವಾಲಿ ಮತ್ತು ರಾಖಿಗರ್ಹಿಗಳಿವೆ, ಮತ್ತು ಪೂರ್ವದಲ್ಲಿ ಗಂಗಾ-ಯಮುನಾ ದೋಅಬ್ ಆರಂಭವಾಗುತ್ತದೆ.
ಈಗ ಈ ಆವಿಷ್ಕಾರವು ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಟ್ವೀಟರ್ ನಲ್ಲಿ ಈ ಆವಿಷ್ಕಾರವನ್ನು “5500 ವರ್ಷಗಳ ಹಿಂದಿನ ನಾಗರಿಕತೆ” ಎಂದು ಕೆಲವರು ಉಲ್ಲೇಖಿಸಿದ್ದಾರೆ, ಆದರೆ ಪುರಾತತ್ವ ಇಲಾಖೆ ಇದನ್ನು 3,500-4,500 ವರ್ಷಗಳ ಹಿಂದಿನದು ಎಂದು ದೃಢಪಡಿಸಿದೆ.