ನವದೆಹಲಿ: ದೆಹಲಿಯ ಅಭಿವೃದ್ಧಿ ಬಿಜೆಪಿಯಿಂದ ಮಾತ್ರ ಸಾಧ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ದೆಹಲಿ ಮೆಟ್ರೋದ ನಾಲ್ಕನೇ ಹಂತ ಜನಕಪುರಿ ಮತ್ತು ಕೃಷ್ಣಾ ಪಾರ್ಕ್ ಮೆಟ್ರೋ ಮಾರ್ಗ ಉದ್ಘಾಟಿಸಿ ಮಾತನಾಡಿದ ಅವರು, ಬಿಜೆಪಿಗೆ ಅವಕಾಶ ನೀಡುವಂತೆ ದೆಹಲಿಯ ಜನರನ್ನು ಕೇಳಲು ಬಂದಿದ್ದೇನೆ. ಆಪ್ ದೆಹಲಿಯ ಅಭಿವೃದ್ಧಿ ಮಾಡದೆ 10 ವರ್ಷ ಕಾಲ ಕಳೆದಿದೆ ಎಂದು ಆರೋಪಿಸಿದ್ದಾರೆ.
ದೆಹಲಿಯ ಅಭಿವೃದ್ಧಿ ಸವಾಲುಗಳನ್ನು ಎದುರಿಸಲು ಆಪ್ ಸರ್ಕಾರಕ್ಕೆ ಅಗತ್ಯವಾದ ದೂರದೃಷ್ಟಿ ಕೊರತೆಯಿದೆ. ಆಪ್ಗೆ ಯಾವುದೇ ಜವಾಬ್ದಾರಿಯನ್ನು ನೀಡಿದರೆ ಅದು ದೆಹಲಿಯ ಜನರಿಗೆ ಶಿಕ್ಷೆ ನೀಡಿದಂತೆ. ನೀರಿನ ಕೊರತೆ, ಮಾಲಿನ್ಯ, ಪ್ರತಿ ವರ್ಷ ತುರ್ತು ಪರಿಸ್ಥಿತಿಯನ್ನಾಗಿ ಪರಿವರ್ತಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೆಹಲಿಯ ಅಭಿವೃದ್ಧಿಗಾಗಿ ಮತ್ತೊಂದು ಬಾರಿಗೆ ಬಿಜೆಪಿಗೆ ಅವಕಾಶ ನೀಡಿ. ನಾವು 2025ರಲ್ಲಿದ್ದೇವೆ. 21ನೇ ಶತಮಾನದ ಇಪ್ಪತ್ತೈದು ವರ್ಷಗಳು ಕಳೆದಿವೆ. ಈ ಸಮಯದಲ್ಲಿ, ಬಹುಶಃ ದೆಹಲಿಯಲ್ಲಿ ಎರಡರಿಂದ ಮೂರು ತಲೆಮಾರುಗಳ ಯುವಕರು ಬೆಳೆದಿದ್ದಾರೆ. ಮುಂಬರುವ 25 ವರ್ಷಗಳು ಭಾರತದ ಭವಿಷ್ಯಕ್ಕೆ ಮತ್ತು ದೆಹಲಿಯ ಭವಿಷ್ಯಕ್ಕೆ ಬಹಳ ಮುಖ್ಯವಾಗಿದೆ. ಹೀಗಾಗಿ ಬಿಜೆಪಿಗೆ ಅವಕಾಶ ನೀಡಿ ಎಂದು ಮನವಿ ಮಾಡಿದ್ದಾರೆ.