ನವದೆಹಲಿ: ಇದು ಪರೀಕ್ಷಾ ಕಾಲ. ದೇಶದಲ್ಲಿ ಎಲ್ಲ ತರಗತಿಯ ವಿದ್ಯಾರ್ಥಿಗಳ ಪರೀಕ್ಷೆಗಳು ಸಮೀಪಿಸುತ್ತಿವೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಪರೀಕ್ಷಾ ಪೇ ಚರ್ಚಾ ಎಂಬ ಕಾರ್ಯಕ್ರಮ ಆರಂಭಿಸಿದ್ದಾರೆ. ಇಂದು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಟಿ ದೀಪಿಕಾ ಪಡುಕೋಣೆ ಖಿನ್ನತೆ ಬಗ್ಗೆ ಮಾತನಾಡಿದ್ದಾರೆ.
ನಟನೆಗೆ ಧುಮುಕಿದ ಆರಂಭಿಕ ದಿನಗಳಲ್ಲಿ ತಾನು ಯಾವ ಮಾನಸಿಕ ಖಿನ್ನತೆಗೆ ಒಳಗಾಗಿದ್ದೆ. ಅದರಿಂದ ಹೊರಗೆ ಬರಲಾರದೆ ಹೇಗೆ ಒದ್ದಾಡಿದ್ದೆ ಎಂಬುವುದರ ಕುರಿತು ಸಂವಾದದಲ್ಲಿ ಚರ್ಚಿಸಿದ್ದಾರೆ.
ಮಾನಸಿಕ ಆರೋಗ್ಯವೆನ್ನುವುದು ಎಲ್ಲರಿಗೂ ಬಹಳ ಮುಖ್ಯ. ಬಹುತೇಕ ಜನರು ಖಿನ್ನತೆಗೆ ಒಳಗಾಗಿದ್ದರೂ ಅದನ್ನು ಮುಕ್ತವಾಗಿ ಹೇಳಿಕೊಳ್ಳುವುದಿಲ್ಲ. ಆದರೆ, ನಾನು ಅದನ್ನು ಮುಕ್ತವಾಗಿ ಹೇಳಿದ್ದೆ. “ಮಾಡೆಲಿಂಗ್ ಮತ್ತು ನಟನೆಯಲ್ಲಿ ಯಶಸ್ಸನ್ನು ಸಾಧಿಸಿದ್ದರೂ ಆರೋಗ್ಯದಲ್ಲಿ ಏನೋ ವ್ಯತ್ಯಾಸವಾಗಿದೆ ಎಂಬುದು ಗೊತ್ತಾಗಿತ್ತು. ನಾನು ಶಾಲಾ ದಿನಗಳಿಂದಲೂ ಕ್ರೀಡೆ, ಮಾಡೆಲಿಂಗ್ ಮತ್ತು ನಟನೆಯಲ್ಲಿ ತೊಡಗಿಸಿಕೊಂಡಿದ್ದೆ. ಹೀಗಾಗಿ, ನನಗೆ ಸ್ಟೇಜ್ ಭಯವೇನೂ ಇರಲಿಲ್ಲ. 2014ರಲ್ಲಿ ನಾನು ಇದ್ದಕ್ಕಿದ್ದಂತೆ ಮೂರ್ಛೆ ಹೋಗುವವರೆಗೂ ನನಗೆ ನಾನು ಖಿನ್ನತೆಯಿಂದ ಬಳಲುತ್ತಿದ್ದೇನೆ ಎಂದು ಗೊತ್ತಾಗಲೇ ಇಲ್ಲ. ನನ್ನ ಮನಸಿನ ಮೇಲೆ ನಾನು ಸಾಕಷ್ಟು ಒತ್ತಡ ಹೇರುತ್ತಿದ್ದೆ ಎಂಬುವುದು ನನಗೆ ಆಗ ಅರ್ಥವಾಯಿತು ಎಂದಿದ್ದಾರೆ.
“ಒಮ್ಮೆ ನನ್ನ ತಾಯಿ ಮುಂಬೈನಲ್ಲಿ ನನ್ನನ್ನು ಭೇಟಿ ಮಾಡಲು ಬಂದಿದ್ದರು. ಅಲ್ಲಿಯವರೆಗೂ ಮುಂಬೈನಲ್ಲಿ ನಾನೊಬ್ಬಳೇ ಇರುತ್ತಿದ್ದೆ. ಅಮ್ಮ ಆಗಾಗ ಬಂದು ಹೋಗುತ್ತಿದ್ದರು. ಸ್ವಲ್ಪ ದಿನ ಇದ್ದು ಮುಂಬೈನಿಂದ ಬೆಂಗಳೂರಿಗೆ ವಾಪಾಸ್ ಹೊರಟಾಗ ನಾನು ಅಳಲಾರಂಭಿಸಿದ್ದೆ. ಅವರು ಏನಾಯಿತೆಂದು ಕೇಳಿದಾಗ ನನಗೆ ಏನು ಹೇಳಬೇಕೆಂದೇ ತೋಚಲಿಲ್ಲ. ನಾನು ಅಸಹಾಯಕಳಾಗಿದ್ದೇನೆ ಮತ್ತು ಹತಾಶಳಾಗಿದ್ದೇನೆ. ನನಗೆ ಬದುಕಲು ಇಷ್ಟವಿಲ್ಲ ಎಂದು ಹೇಳಿದ್ದೆ” ಎಂದು ಹೇಳಿದ್ದಾರೆ.
ಆಗ ನನ್ನ ತಾಯಿ ನನ್ನ ಮಾನಸಿಕ ಆರೋಗ್ಯದಲ್ಲಿ ಏರುಪೇರಾಗುತ್ತಿರುವುದನ್ನು ಗುರುತಿಸಿದರು. ತಕ್ಷಣ ಅವರು ಮನಶಾಸ್ತ್ರಜ್ಞರನ್ನು ಸಂಪರ್ಕಿಸಲು ಸೂಚಿಸಿದರು. ಆಮೇಲೆ ನಾನು ವೈದ್ಯರ ಸಹಾಯ ಪಡೆದು ಖಿನ್ನತೆಯಿಂದ ಹೊರಬಂದೆ ಎಂದಿದ್ದಾರೆ.
ಆತಂಕ, ಒತ್ತಡ ಮತ್ತು ಖಿನ್ನತೆ ಯಾರ ಮೇಲೂ ಪರಿಣಾಮ ಬೀರಬಹುದು. ಅದರ ಬಗ್ಗೆ ಮಾತನಾಡುವುದರಿಂದ ನಿಜವಾಗಿಯೂ ನಮ್ಮ ಮನಸಿನ ಮೇಲಿನ ಹೊರೆ ಕಡಿಮೆಯಾಗುತ್ತದೆ.” ಎಂದು ದೀಪಿಕಾ ಪಡುಕೋಣೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದ್ದಾರೆ.