ಬೆಂಗಳೂರು: 2024ರ ಟಿ20 ವಿಶ್ವಕಪ್ (T20 World Cup) ನ್ನು ಭಾರತ ತಂಡ ಗೆದ್ದು ಬೀಗಿದೆ. ಈ ತಂಡದ ತರಬೇತುದಾರ ರಾಹುಲ್ ದ್ರಾವಿಡ್ (Rahul Dravid) ಅವರಿಗೆ ಸದನದಲ್ಲಿ ಅಭಿನಂದನಾ ಗೌರವ ಸಲ್ಲಿಸಲು ಅಧಿವೇಶನದಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಬಿಜೆಪಿ (BJP) ಶಾಸಕ ಸುರೇಶ್ ಕುಮಾರ್, ಭಾರತ ಟಿ20 ವಿಶ್ವಕಪ್ ಗೆಲುವಿನ ಸಂದರ್ಭದಲ್ಲಿ ಭಾರತ ತಂಡದ (Team India) ಮುಖ್ಯಕೋಚ್ ಆಗಿದ್ದ ಕನ್ನಡಿಗ ರಾಹುಲ್ ದ್ರಾವಿಡ್ ಅವರನ್ನು ಸನ್ಮಾನಿಸುವಂತೆ ಮನವಿ ಮಾಡಿದರು. ಈ ಮನವಿಯನ್ನು ಸದನದ ಎಲ್ಲ ಸದಸ್ಯರು ಸ್ವಾಗತಿಸಿದರು. ನಂತರ ಈ ವಿಚಾರವಾಗಿ ಪ್ರತಿಕ್ರಿಯಿಸಿದ ಸ್ಪೀಕರ್ ಖಾದರ್ ಕರ್ನಾಟಕದ ಜನತೆ ಪರವಾಗಿ ದ್ರಾವಿಡ್ ಅವರಿಗೆ ಅಭಿನಂದನೆ ಸಲ್ಲಿಸಲಾಗುತ್ತದೆ ಎಂದು ಹೇಳಿದ್ದಾರೆ.

ಕಳೆದ ಜೂ.29 ರಂದು ನಡೆದಿದ್ದ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 7 ರನ್ ಗಳ ರೋಚಕ ಗೆಲುವು ಸಾಧಿಸಿ ಭಾರತ ಟಿ20 ವಿಶ್ವಕಪ್ ಗೆದ್ದುಕೊಂಡಿತ್ತು. ಈ ಮೂಲಕ ಭಾರತ 17 ವರ್ಷಗಳ ನಂತರ ಟಿ 20 ವಿಶ್ವಕಪ್ ಹಾಗೂ 13 ವರ್ಷಗಳ ನಂತರ ಐಸಿಸಿ ಟ್ರೋಫಿ ಗೆದ್ದ ಖುಷಿ ಅನುಭವಿಸಿದೆ.
ಫೈನಲ್ ಪಂದ್ಯದಲ್ಲಿ ಗೆಲುವಿಗೆ 177 ರನ್ ಗುರಿ ಪಡೆದ ದಕ್ಷಿಣ ಆಫ್ರಿಕಾ ತಂಡ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 169 ರನ್ ಗಳಿಸಿ ಸೋಲು ಅನುಭವಿಸಿತು.