ಸಾಲ ಕೊಡಿಸುವುದಾಗಿ ಹೇಳಿ ಬರೋಬ್ಬರಿ 2 ಸಾವಿರ ಜನರಿಗೆ ವಂಚಿಸಿರುವ ಘಟನೆಯೊಂದು ಬೆಳಕಿಗೆ ನಡೆದಿದೆ.
ಶ್ಯೂರಿಟಿ ಇಲ್ಲದೆ ಸಾಲ ನೀಡುತ್ತೇವೆಂದು ಬೆಂಗಳೂರಿನಲ್ಲಿ ಬರೋಬ್ಬರಿ 2 ಸಾವಿರ ಜನರಿಗೆ ಮೋಸ ಮಾಡಲಾಗಿದೆ. ನಗರದ ಮಾಯಾ ನಗರದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಜನರನ್ನು ನಂಬಿಸಿ, ಯಾವುದೇ ಶೂರಿಟಿ ಇಲ್ಲದೆ, 1 ಲಕ್ಷ ರೂ.ನಿಂದ 25 ಲಕ್ಷ ರೂ. ವರೆಗೆ ಸಾಲ ಕೊಡಿಸುವುದಾಗಿ ಹೇಳಿ ವಂಚಿಸಿದ್ದಾರೆ ಎನ್ನಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆನಂದ್, ರೇಷ್ಮಾ, ಅಂಜುಂ, ಆನಿಯಾ ಎಂಬುವವರ ವಿರುದ್ಧ ದೂರು ದಾಖಲಾಗಿದೆ. ಹೈಗ್ರೌಂಡ್ಸ್ ಪೊಲೀಸರು ರೇಷ್ಮಾ ಎಂಬುವವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಶ್ರೀಕಾರ ಕೋ-ಆಪರೇಟಿವ್ ಸೊಸೈಟಿ ಲೋನ್ ಹೆಸರಿನಲ್ಲಿ ಈ ಗ್ಯಾಂಗ್ ಜನರಿಗೆ ವಂಚಿಸುತ್ತಿತ್ತು ಎನ್ನಲಾಗಿದೆ. ಸಾರ್ವಜನಿಕರಿಂದ ಲೋನ್ ಕೊಡಿಸುವುದಕ್ಕಾಗಿ ಪ್ರೊಸೆಸಿಂಗ್ ಫೀಜ್ ಹಾಗೂ ಅಕೌಂಟ್ ಓಪನಿಂಗ್ ಫೀಜ್ ಎಂದು ಸಾವಿರ ರೂ. ಪಡೆದಿದ್ದಾರೆ. 15 ದಿನಗಳೊಳಗಾಗಿ ಲೋನ್ ಕೊಡಿಸಲಾಗುವುದು ಎಂದು ಹೇಳಿ, ಸಾಲಕ್ಕಾಗಿ ಅವರ ಮೊಬೈಲ್ ನಂಬರ್ ನ್ನೇ ಅಕೌಂಟ್ ನಂಬರ್ ಆಗಿ ನೀಡಲಾಗಿದೆ ಎನ್ನಲಾಗಿದೆ. ಈ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.