ಬೆಂಗಳೂರು: ಸಿಲಿಕಾನ್ ಸಿಟಿಯ ಬಹುದೊಡ್ಡ ಸಮಸ್ಯೆಯಾಗಿರುವ ಟ್ರಾಫಿಕ್ ಹಾಗೂ ವಾಹನ ದಟ್ಟಣೆ ಹೆಚ್ಚಾಗಿರುವ ಸ್ಥಳಗಳನ್ನು ಡಿಸಿಎಂ ಡಿ.ಕೆ. ಶಿವಕುಮಾರ್ ಪರಿಶೀಲನೆ ನಡೆಸಿದ್ದಾರೆ.
ಬಿಬಿಎಂಪಿ ಆಯುಕ್ತರಾದ ತುಷಾರ್ ಗಿರಿನಾಥ್ ಬಿಎಂಆರ್ಸಿಎಲ್ ಎಂಡಿ ಮಹೇಶ್ ರಾವ್ ಸೇರಿದಂತೆ ಹಿರಿಯ ಅಧಿಕಾರಿಗಳೊಂದಿಗೆ ಅವರು ನಗರದಲ್ಲಿ ಸಂಚರಿಸಿದರು. ಈ ವೇಳೆ ಅಧಿಕಾರಿಗಳೊಂದಿಗೆ ಹೆಬ್ಬಾಳ, ಕುವೆಂಪು ಸರ್ಕಲ್, ಗೊರಗುಂಟೆ ಪಾಳ್ಯ, ಸುಮ್ಮನಹಳ್ಳಿ ಹಾಗೂ ನಾಯಂಡಹಳ್ಳಿ ಜಂಕ್ಷನ್ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಹೆಬ್ಬಾಳ ಟು ಜೆಪಿನಗರದ ಮಾರ್ಗದಲ್ಲಿ ಎಲ್ಲ ಕಡೆಗೂ ಡಬಲ್ ಡೆಕ್ಕರ್ ಫ್ಲೈಓವರ್ ಮಾಡಲು ಸೂಚಿಸಿದ್ದಾರೆ. ಇದಕ್ಕೆ ಹೆಚ್ಚುವರಿಯಾಗಿ 9,800 ಕೋಟಿ ರೂ. ಬೇಕಾಗಲಿದ್ದು, ಇದನ್ನ ಬಿಬಿಎಂಪಿ ಮತ್ತು ನಮ್ಮ ಮೆಟ್ರೋ ಒದಗಿಸುವಂತೆ ಹೇಳಿದ್ದಾರೆ.
ಹೆಬ್ಬಾಳ ಟು ಜೆಪಿನಗರ ಮಾರ್ಗದ ಮೆಟ್ರೋ ಕಾಮಗಾರಿಯ ಬ್ಲೂ ಪ್ರಿಂಟ್ನಲ್ಲಿ ಆಗಿರುವ ಕಾರ್ಯಯೋಜನೆಗಳ ಬಗ್ಗೆ ಸ್ಥಳದಲ್ಲೇ ಅಧಿಕಾರಿಗಳಿಂದ ಮಾಹಿತಿ ಪಡೆದರು. ಮುಂದಿನ 40 ವರ್ಷಗಳ ಬೆಂಗಳೂರನ್ನು ಗಮನದಲ್ಲಿಟ್ಟುಕೊಂಡು ಮೆಟ್ರೋ ಕಾಮಗಾರಿ ನಡೆಯುವ ಪ್ರತಿ ಸ್ಥಳದಲ್ಲೂ ಡಬಲ್ ಡೆಕ್ಕರ್ ಫ್ಲೈಓವರ್ ಮಾಡಲು ಅಧಿಕಾರಿಗಳಿಗೆ ಈ ಸಂದರ್ಭದಲ್ಲಿ ಸೂಚಿಸಿದರು