ಕುಂದಾಪುರ: ಬೆಂಗಳೂರಿನ ನೃತ್ಯ ಬಿಂಬ ಸಾಂಸ್ಕೃತಿಕ ಪ್ರತಿಷ್ಠಾನ ಬೆಂಗಳೂರು ಮತ್ತು ಕಲೆಗಳ ಉತ್ಸವದ ಆಶ್ರಯದಲ್ಲಿ ಕೊಲ್ಲೂರು ಮೂಕಾಂಬಿಕಾ ದೇವಾಲಯದ ಸ್ವರ್ಣಮುಖಿ ರಂಗ ಮಂದಿರದಲ್ಲಿ ಭರತನಾಟ್ಯ ದಿವ್ಯೋತ್ಸವ-ನೃತ್ಯಕಲೋತ್ಸವ ಕಾರ್ಯಕ್ರಮ ನಡೆಯಿತು.
ದೇಗುಲದ ಪವಿತ್ರ ವಾತಾವರಣದಲ್ಲಿ ವಿವಿಧ ಭಾಗಗಳಿಂದ ಬಂದ 20ಕ್ಕೂ ಹೆಚ್ಚು ಯುವ ಕಲಾವಿದರು ಭರತನಾಟ್ಯವನ್ನು ಭಕ್ತಿ, ಶಿಸ್ತು ಮತ್ತು ನೃತ್ಯಶೈಲಿಯೊಂದಿಗೆ ಪ್ರಸ್ತುತಪಡಿಸಿದರು. ದರ್ಶನಾರ್ಥಿಗಳು, ಪಾಲಕರು ಮತ್ತು ಕಲೆ ಪ್ರೇಮಿಗಳು ವೇದಿಕೆಯಲ್ಲಿ ಆಕರ್ಷಕ ಪ್ರದರ್ಶನಗಳಿಂದ ಮೋಹಿತರಾದರು. ರೇವತಿ ಶ್ರೀನಿವಾಸನ್ ನಿರೂಪಣೆ ನೆರವೇರಿಸಿದರು.
ನೃತ್ಯ ಬಿಂಬ ಪ್ರತಿಷ್ಠಾನ ಬೆಂಗಳೂರು ಸ್ಥಾಪಕಿ ಹೇಮ ಎನ್ ಅವರು ಕಾರ್ಯಕ್ರಮವನ್ನು ಆಯೋಸಿದ್ದರು..ಭರತನಾಟ್ಯ ಕಲೆಗಳ ಉತ್ಸವದ ಸಹ-ಸ್ಥಾಪಕಿ ಡಾ.ರಘಶ್ರೀ ಸಂಘಟಿಸಿದ್ದರು. ಕಲೆಗಳ ಉತ್ಸವದ ಸ್ಥಾಪಕ ನಾಗೇಂದ್ರ ಎಸ್.ಗೌಡ ಸಹಕಾರ ನೀಡಿದ್ದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಕಲಾವಿದರಿಗೆ ನೃತ್ಯ ಬಿಂಬ ಮತ್ತು ಕಲೆಗಳ ಉತ್ಸವದ ವತಿಯಿಂದ ಪ್ರಮಾಣಪತ್ರ ಮತ್ತು ಸ್ಮರಣಿಕೆ ನೀಡಿ ಗೌರವಿಸಲಾಯಿತು.
ದೇಗುಲದ ಆಡಳಿತ ಮಂಡಳಿ ಪ್ರೋತ್ಸಾಹ ನೀಡಿದ್ದರು. ಈ ವೇಳೆ ನೃತ್ಯ ಬಿಂಬ ಸಾಂಸ್ಕೃತಿಕ ಪ್ರತಿಷ್ಠಾನ ಬೆಂಗಳೂರು ಸಂಸ್ಥಾಪಕಿ ಹೇಮ ಮಾತನಾಡಿ, ಕೊಲ್ಲೂರು ಮೂಕಾಂಬಿಕಾ ದೇವಿ ಸನ್ನಿಧಿಯಲ್ಲಿ ನೃತ್ಯ ಕಲೋತ್ಸವ ಕಾರ್ಯಕ್ರಮ ನಡೆಸಿಕೊಟ್ಪಿರುವುದು ನಮಗೆ ಬಹಳಷ್ಟು ಖುಷಿ ಕೊಟ್ಟಿದೆ. ಪ್ರೋತ್ಸಾಹ ನೀಡಿದ ದೇಗುಲದ ಆಡಳಿತ ಮಂಡಳಿಗೆ ಧನ್ಯವಾದ ಎಂದರು.