ನವದೆಹಲಿ: ತಂಟೆಗೆ ಬಂದ ಪಾಕಿಸ್ತಾನದ ಬೆಂಡೆತ್ತಿದ ಭಾರತ ಇದೀಗ ಚೀನಾದ ವಿರುದ್ಧ ಕೆಂಡಾಮಂಡಲವಾಗಿದೆ. ಅರುಣಾಚಲ ಪ್ರದೇಶದ(Arunachal renaming) ಕೆಲವು ಸ್ಥಳಗಳ ಹೆಸರನ್ನು ಬದಲಾಯಿಸುವ ಚೀನಾದ ಇತ್ತೀಚಿನ ಪ್ರಯತ್ನವನ್ನು ಭಾರತ ತೀವ್ರವಾಗಿ ಖಂಡಿಸಿದೆ. “ಅರುಣಾಚಲ ಪ್ರದೇಶವು ಭಾರತದ ಅವಿಭಾಜ್ಯ ಅಂಗವಾಗಿದೆ. ಚೀನಾದ ಈ ರೀತಿಯ ವ್ಯರ್ಥ ಮತ್ತು ಅಸಂಬದ್ಧ ಪ್ರಯತ್ನಗಳನ್ನು ನಾವು ಸಂಪೂರ್ಣವಾಗಿ ತಿರಸ್ಕರಿಸುತ್ತೇವೆ” ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಮಂಗಳವಾರ ತಿಳಿಸಿದೆ.
ಚೀನಾದ ನಾಗರಿಕ ವ್ಯವಹಾರ ಸಚಿವಾಲಯವು ಮೇ 11-12ರಂದು ಅರುಣಾಚಲ ಪ್ರದೇಶದ 27 ಸ್ಥಳಗಳಿಗೆ ಹೊಸ ಹೆಸರುಗಳನ್ನು ಘೋಷಿಸಿದೆ. ಇದು ಭಾರತದ ಈಶಾನ್ಯ ರಾಜ್ಯದ ಮೇಲೆ ತನ್ನ ಹಕ್ಕನ್ನು ಸ್ಥಾಪಿಸುವ ಚೀನಾದ ಮತ್ತೊಂದು ಪ್ರಯತ್ನವಾಗಿದೆ. ಈ ಕ್ರಮವನ್ನು ಭಾರತವು “ರಚನಾತ್ಮಕ ಹೆಸರಿಡುವಿಕೆ” (Creative Naming) ಎಂದು ಕರೆದು, ಇದರಿಂದ ಭಾರತದ ಸಾರ್ವಭೌಮತೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಸ್ಪಷ್ಟಪಡಿಸಿದೆ. “ನೀವು ಕ್ರಿಯೇಟಿವ್ ಆಗಿ ಹೆಸರಿಟ್ಟ ಕೂಡಲೇ ಅರುಣಾಚಲ ಪ್ರದೇಶವು ಭಾರತದ ಅವಿಭಾಜ್ಯ ಭಾಗ ಎಂಬ ಸತ್ಯವೇನೂ ಬದಲಾಗದು” ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ.
ಚೀನಾದಿಂದ ಪುನರಾವರ್ತಿತ ಪ್ರಯತ್ನ
ಚೀನಾವು ಈ ಹಿಂದೆಯೂ ಇಂತಹ ಕ್ರಮಗಳಿಗೆ ಕೈಹಾಕಿದೆ. 2017ರಲ್ಲಿ, ಚೀನಾದ ನಾಗರಿಕ ವ್ಯವಹಾರ ಸಚಿವಾಲಯವು ಅರುಣಾಚಲ ಪ್ರದೇಶದ ಆರು ಸ್ಥಳಗಳಿಗೆ ಹೊಸದಾಗಿ ನಾಮಕರಣ ಮಾಡಿ ಅದರ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಇದಾದ ನಂತರ, 2021ರಲ್ಲಿ 15 ಸ್ಥಳಗಳಿಗೆ ಮತ್ತು 2023ರಲ್ಲಿ 11 ಸ್ಥಳಗಳಿಗೆ ಹೆಸರು ಬದಲಾವಣೆಯ ಪಟ್ಟಿಯನ್ನು ಪ್ರಕಟಿಸಿತು. ಇತ್ತೀಚೆಗೆ ಹೊಸದಾಗಿ, 2024ರ ಏಪ್ರಿಲ್ನಲ್ಲಿ, ಚೀನಾವು 30 ಸ್ಥಳಗಳಿಗೆ ಹೊಸ ಹೆಸರುಗಳನ್ನು ಘೋಷಿಸಿತ್ತು. ಈ 30 ಸ್ಥಳಗಳಲ್ಲಿ 12 ಪರ್ವತಗಳು, 4 ನದಿಗಳು, 1 ಸರೋವರ, 11 ವಸತಿ ಪ್ರದೇಶಗಳು ಮತ್ತು ಒಂದು ಭೂ ಭಾಗವೂ ಒಳಗೊಂಡಿವೆ. ಈ ಹೆಸರುಗಳನ್ನು ಚೀನಾವು ಚೈನೀಸ್, ಟಿಬೆಟಿಯನ್ ಮತ್ತು ಪಿನ್ಯಿನ್ ಭಾಷೆಗಳಲ್ಲಿ ಪ್ರಕಟಿಸಿದ್ದು, ವಿವರವಾದ ಅಕ್ಷಾಂಶ-ರೇಖಾಂಶ ಮಾಹಿತಿ ಮತ್ತು ಉನ್ನತ ರೆಸಲ್ಯೂಶನ್ನ ನಕ್ಷೆಗಳನ್ನು ಸಹ ಒದಗಿಸಿತ್ತು.
ಚೀನಾವು ಅರುಣಾಚಲ ಪ್ರದೇಶವನ್ನು ತನ್ನ ‘ಜಾಂಗ್ನಾನ್’ ಅಥವಾ ‘ದಕ್ಷಿಣ ಟಿಬೆಟ್’ ಎಂದು ಕರೆಯುತ್ತದೆ. ಆದರೆ, ಭಾರತವು ಈ ಎಲ್ಲಾ ಕ್ರಮಗಳನ್ನು “ವ್ಯರ್ಥ” ಮತ್ತು “ಅಸಂಬದ್ಧ” ಎಂದು ಕರೆದು, ಇಂತಹ ಕೃತ್ಯಗಳಿಂದ ಭಾರತದ ಸಾರ್ವಭೌಮತೆಯಲ್ಲಿ ಯಾವುದೇ ಬದಲಾವಣೆಯಾಗದು ಎಂದು ಸ್ಪಷ್ಟವಾಗಿ ತಿಳಿಸಿದೆ.
ವಿದೇಶಾಂಗ ಸಚಿವ ಎಸ್. ಜೈಶಂಕರ್ ಹೇಳಿದ್ದೇನು?
ಈ ಹಿಂದೆಯೂ ಚೀನಾದ ಈ ರೀತಿಯ ನಡೆಗಳಿಗೆ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದರು. “ನಾನು ನಿಮ್ಮ ಮನೆಯ ಹೆಸರನ್ನು ಬದಲಾಯಿಸಿದರೆ, ಅದು ನನ್ನದಾಗುತ್ತದೆಯೇ? ಅರುಣಾಚಲ ಪ್ರದೇಶವು ಭಾರತದ ರಾಜ್ಯವಾಗಿತ್ತು, ಈಗಲೂ ಆಗಿದೆ ಮತ್ತು ಭವಿಷ್ಯದಲ್ಲೂ ಆಗಿರಲಿದೆ. ಹೆಸರು ಬದಲಾಯಿಸುವುದರಿಂದ ಯಾವುದೇ ಫಲಿತಾಂಶ ಸಿಗದು” ಎಂದು ಅವರು 2024ರಲ್ಲಿ ಹೇಳಿದ್ದರು.
ಚೀನಾ ವಿರುದ್ಧ ಭಾರತದ ಸ್ಥಿರ ನಿಲುವು
ಭಾರತವು ಚೀನಾದ ಇಂಥ ಕ್ರಮವನ್ನು ಸತತವಾಗಿ ಖಂಡಿಸುತ್ತಲೇ ಬಂದಿದೆ. ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು, “ಚೀನಾವು ಅರುಣಾಚಲ ಪ್ರದೇಶದಲ್ಲಿ ಸ್ಥಳಗಳಿಗೆ ಹೆಸರು ಬದಲಾಯಿಸುವ ತನ್ನ ಪ್ರಯತ್ನಗಳನ್ನು ಮುಂದುವರಿಸಿದೆ. ಆದರೆ, ಈ ರೀತಿಯ ನಡೆಯನ್ನು ನಾವು ಸಂಪೂರ್ಣವಾಗಿ ತಿರಸ್ಕರಿಸುತ್ತೇವೆ. ಅರುಣಾಚಲ ಪ್ರದೇಶವು ಭಾರತದ ಅವಿಭಾಜ್ಯ ಭಾಗವಾಗಿರುವ ಸತ್ಯವನ್ನು ಯಾವುದೇ ರಚನಾತ್ಮಕ ಹೆಸರಿಡುವಿಕೆ ಬದಲಾಯಿಸಲಾರದು” ಎಂದು ಒತ್ತಿ ಹೇಳಿದ್ದಾರೆ. ಅರುಣಾಚಲ ಪ್ರದೇಶದ ಜನರು ತೀವ್ರ ರಾಷ್ಟ್ರಭಕ್ತಿಯನ್ನು ಹೊಂದಿದ್ದಾರೆ ಎಂದು ಭಾರತ ಹೇಳಿದೆ. ಈ ರಾಜ್ಯವು ಭಾರತದ ಸಾಂಸ್ಕೃತಿಕ, ಐತಿಹಾಸಿಕ ಮತ್ತು ರಾಜಕೀಯವಾಗಿ ಅವಿಭಾಜ್ಯ ಭಾಗವಾಗಿದೆ. ಚೀನಾದ ಈ ಕ್ರಮವನ್ನು ಭಾರತವು ಕೇವಲ ರಾಜಕೀಯ ತಂತ್ರವಾಗಿ ಪರಿಗಣಿಸಿದೆ ಮತ್ತು ಇದರಿಂದ ಯಾವುದೇ ಕಾನೂನು ಅಥವಾ ಭೌಗೋಳಿಕ ಸತ್ಯ ಬದಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಭಾರತಕ್ಕೆ ಅಂತಾರಾಷ್ಟ್ರೀಯ ಬೆಂಬಲ
ಈ ವಿಷಯದಲ್ಲಿ ಭಾರತಕ್ಕೆ ಅಂತಾರಾಷ್ಟ್ರೀಯ ಬೆಂಬಲವೂ ದೊರೆತಿದೆ. ಉದಾಹರಣೆಗೆ, 2023ರಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನವು ಚೀನಾದ ಈ ಕ್ರಮವನ್ನು ಖಂಡಿಸಿತ್ತು. ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರೀನ್ ಜೀನ್-ಪಿಯರ್ ಅವರು, “ಅರುಣಾಚಲ ಪ್ರದೇಶವು ಭಾರತದ ಭಾಗವಾಗಿದೆ. ಚೀನಾದ ಈ ರೀತಿಯ ಏಕಪಕ್ಷೀಯ ಕ್ರಮಗಳನ್ನು ನಾವು ತೀವ್ರವಾಗಿ ವಿರೋಧಿಸುತ್ತೇವೆ” ಎಂದು ಹೇಳಿದ್ದರು.