ಬೆಂಗಳೂರು: ಅಕ್ಷಯ ತೃತೀಯ ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಇದನ್ನು ಪ್ರತಿ ವರ್ಷ ವೈಶಾಖ ಮಾಸದ ಶುಕ್ಲ ಪಕ್ಷ ತೃತೀಯ ತಿಥಿಯಂದು ಆಚರಿಸಲಾಗುತ್ತದೆ. ಈ ವರ್ಷ ಅಕ್ಷಯ ತೃತೀಯ ಹಬ್ಬವನ್ನು ಏಪ್ರಿಲ್ 30ರಂದು ಆಚರಿಸಲಾಗುತ್ತದೆ. ಸಂಪತ್ತಿನ ಅಧಿದೇವತೆ ಲಕ್ಷ್ಮೀಯನ್ನು ಮೆಚ್ಚಿಸಲು ಈ ದಿನ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ಖರೀದಿಸುವುದು ವಾಡಿಕೆ. ಇದನ್ನು ಮಾಡುವುದರಿಂದ ಮನೆಗೆ ಸಂಪತ್ತು ಮತ್ತು ಸಮೃದ್ಧಿ ಬರುತ್ತದೆ ಎಂಬುದು ನಂಬಿಕೆಯಾಗಿದೆ.
ಈ ವರ್ಷವು ತೃತೀಯ ತಿಥಿಯು ಏಪ್ರಿಲ್ 29 ರ ಸಂಜೆ 5 ಗಂಟೆ 31 ನಿಮಿಷಕ್ಕೆ ಪ್ರಾರಂಭವಾಗಿ, ಏಪ್ರಿಲ್ 30ರ ಮಧ್ಯಾಹ್ನ 2 ಗಂಟೆ 12 ನಿಮಿಷದವರೆಗೆ ಇರುತ್ತದೆ. ಸೂರ್ಯೋದಯದ ತಿಥಿಯನ್ನು ಪರಿಗಣಿಸುವುದರಿಂದ, ಅಕ್ಷಯ ತೃತೀಯವನ್ನು ಏಪ್ರಿಲ್ 30ರಂದು ಆಚರಿಸಲಾಗುತ್ತದೆ. ಪೂಜೆ, ಚಿನ್ನ-ಬೆಳ್ಳಿಯ ಖರೀದಿ ಸೇರಿ ಹಲವು ನಿರ್ಧಾರಗಳಿಗೆ ಒಳ್ಳೆಯ ದಿನವಾಗಿದೆ ಎಂದು ಪಂಚಾಂಗ ತಿಳಿಸುತ್ತದೆ.
ಹಾಗೆ ನೋಡಿದರೆ, ಧಾರ್ಮಿಕ ನಂಬಿಕೆಗಳ ಪ್ರಕಾರ, ಅಕ್ಷಯ ತೃತೀಯವನ್ನು ಪ್ರತಿ ಕೆಲಸಕ್ಕೂ ಅತ್ಯಂತ ಮಂಗಳಕರ ಸಮಯ ಎಂದು ಪರಿಗಣಿಸಲಾಗುತ್ತದೆ. ಈ ದಿನದಂದು ಚಿನ್ನ, ಬೆಳ್ಳಿ ಮತ್ತು ಯಾವುದೇ ಹೊಸ ವಸ್ತುಗಳನ್ನು ಖರೀದಿಸುವ ವಿಶೇಷ ಪ್ರಾಮುಖ್ಯತೆ ಸಹ ಇದೆ. ಈ ದಿನದಂದು ಲಕ್ಷ್ಮೀ ದೇವಿಯನ್ನು ಪೂಜಿಸುವುದರಿಂದ, ಆಕೆಯ ಅನುಗ್ರಹದಿಂದ ಕುಟುಂಬದಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ ಎನ್ನುವ ನಂಬಿಕೆ ಇದೆ.
ಅಕ್ಷಯ ತೃತೀಯ ಧಾರ್ಮಿಕ ಮಹತ್ವವನ್ನು ಬಹಳ ವಿಶೇಷವೆಂದು ಪರಿಗಣಿಸಲಾಗಿದೆ. ಇದನ್ನು ಯುಗಾದಿ ತಿಭಿ ಎಂದೂ ಪರಿಗಣಿಸಲಾಗುತ್ತದೆ. ಭಗವಾನ್ ವಿಷ್ಣುವಿನ ಪರಶುರಾಮ ಅವತಾರ ಈ ದಿನವೇ ಆಗಿದೆ ಎಂದು ಎನ್ನಲಾಗುತ್ತದೆ. ಅಕ್ಷಯ ತೃತೀಯ ದಿನದಂದು ಕೃಷ್ಣಾ ಯುಧಿಷ್ಠಿರನಿಗೆ ಅಕ್ಷಯ ಪಾತ್ರೆ ನೀಡಿದ ಎನ್ನುವ ನಂಬಿಕೆ ಸಹ ಇದ್ದು, ಇದರಲ್ಲಿ ಆಹಾರವು ಎಂದಿಗೂ ಖಾಲಿಯಾಗಿಲ್ಲ ಎನ್ನುವ ಪೌರಾಣಿಕ ಕತೆ ಇದೆ. ಹಾಗಾಗಿ ಅಕ್ಷಯ ತೃತೀಯ ದಿನದಂದು ದಾನ ಮಾಡುವುದು ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ ಎಂದು ಹೇಳಲಾಗುತ್ತಿದೆ.