ಬೆಂಗಳೂರು: ಹೈಕಮಾಂಡ್ ಅಂಗಳದಲ್ಲಿ ನಡೆದಿದ್ದ ಕಾಳಗದಲ್ಲಿ ರೆಬೆಲ್ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ನೋಟಿಸ್ ಕೊಡಿಸುವಲ್ಲಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಯಶಸ್ವಿಯಾಗಿದ್ದರು. ಈಗ ಯತ್ನಾಳ್ ಮತ್ತೆ ಸಮರ ಸಾರಿದಂತಿದೆ.
ಕೇಂದ್ರ ಶಿಸ್ತು ಸಮಿತಿ ನೀಡಿರುವ ನೋಟಿಸ್ ಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೋಟಿಸ್ ನೀಡಿದ್ದಾರೆ. ಕೇಂದ್ರ ಶಿಸ್ತು ಸಮಿತಿಗೆ ಯತ್ನಾಳ್ 9 ಪುಟಗಳ ಉತ್ತರ ನೀಡಿದ್ದಾರೆ. ಶಿಸ್ತು ಸಮಿತಿಯು ಫೆಬ್ರವರಿ 10 ರಂದು ಯತ್ನಾಳ್ ಗೆ ನೋಟಿಸ್ ನೀಡಿತ್ತು. 72 ಗಂಟೆಯೊಳಗೆ ಉತ್ತರಿಸಲು ಸೂಚನೆ ಕೂಡ ನೀಡಲಾಗಿತ್ತು.
ಶಿಸ್ತು ಸಮಿತಿಗೆ ನೀಡಿರುವ ಉತ್ತರದಲ್ಲೂ ಗರಂ ಆಗಿರುವ ಬಸನಗೌಡ ಪಾಟೀಲ್ ಯತ್ನಾಳ್, ಕೇಂದ್ರ ಶಿಸ್ತು ಸಮಿತಿ ನಡೆಯ ಬಗ್ಗೆಯೂ ಅಸಮಾಧಾನ ಹೊರ ಹಾಕಿದ್ದಾರೆ. ರಾಜ್ಯದಲ್ಲಿ ಇಷ್ಟೆಲ್ಲಾ ಸಮಸ್ಯೆ ಇದೆ. ಅನೇಕರು ಪಕ್ಷ ವಿರೋಧಿ ಚಟುವಟಿಕೆ ಮಾಡುತ್ತಿದ್ದಾರೆ. ಬೇರೆಯವರು ಕಣ್ಣಿಗೆ ಕಾಣುವಂತೆ ತಪ್ಪು ಮಾಡುತ್ತಿದ್ದಾರೆ. ರಾಜ್ಯಾಧ್ಯಕ್ಷ ಆಗಿ ಯಾರನ್ನೂ ಪ್ರಶ್ನೆ ಮಾಡದ ವಿಜಯೇಂದ್ರ, ನಾನು ಮಾತನಾಡಿದ್ದಕ್ಕೆ ನೋಟಿಸ್ ಕೊಡಿ ಅಂತಾ ನಿಮ್ಮ ಬಳಿ ಕೇಳಿಕೊಂಡಿದ್ದಾರೆ. ಅದಕ್ಕಾಗಿ ನನಗೆ, ನೀವು ನೋಟಿಸ್ ನೀಡಿರುವುದು ಸಮಂಜಸವಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಆಗುತ್ತಿರುವ ಪ್ರಸಕ್ತ ವಿದ್ಯಾಮಾನಕ್ಕೆ ನಾನೊಬ್ಬನೇ ಅಲ್ಲ. ಪಕ್ಷದ ಅನೇಕರು ತಿರುಗಿ ಬಿದ್ದಿದ್ದಾರೆ. ಯಡಿಯೂರಪ್ಪ ಅವರ ಪುತ್ರ ಅನ್ನೋ ಒಂದೇ ಕಾರಣಕ್ಕೆ ನೀವು ಅವರ ಮಾತನ್ನು ಕೇಳಿ ನೋಟೀಸ್ ಕೊಟ್ಟಿದ್ದೀರಿ. ರಾಜ್ಯದಲ್ಲಿ ಅವರ ವಿರುದ್ಧ ಇರುವ ಆರೋಪಗಳಿಗೆ ಯಾರೂ ಯಾಕೆ ಪ್ರಶ್ನೆ ಮಾಡುತ್ತಿಲ್ಲ. ಕಣ್ಣಿಗೆ ಕಾಣುವಂತೆ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಸೋಮಶೇಖರ್, ಹೆಬ್ಬಾರ್ ನಡೆದುಕೊಂಡಿದ್ದಾರೆ. ಅವರ ಮೇಲೆ ಕ್ರಮ ತೆಗೆದುಕೊಳ್ಳುವ ಯಾವುದೇ ನೈತಿಕ ಸ್ಥೈರ್ಯ ನಿಮ್ಮಲ್ಲಿ ಕಾಣುತ್ತಿಲ್ಲ. ಕಣ್ಣಿಗೆ ಕಾಣುವಂತೆ ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ್ದರೂ ಕ್ರಮ ಆಗಿಲ್ಲ. ಇನ್ನೂ ಅನೇಕ ಘಟನೆಗಳು ವಿಜಯೇಂದ್ರ ರಾಜ್ಯಾಧ್ಯಕ್ಷ ಆಗಿರುವಾಗಲೇ ನಡೆದಿವೆ.
ಹೀಗಿದ್ದರೂ ಅವರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ. ಆದರೆ, ನಾನು ಎಂದೂ ಪಕ್ಷದ ವಿರುದ್ಧವಾಗಿ ನಡೆದುಕೊಂಡಿಲ್ಲ. ಹಾಗಿದ್ದರೂ ನನಗೆ ನೋಟಿಸ್ ನೀಡಲಾಗಿದೆ. ನಾನು ಕೇಂದ್ರದ ಮಂತ್ರಿಯಾಗಿ ಕೆಲಸ ನಿಭಾಯಿಸಿದವನು. ಪಕ್ಷದ ಇತಿಮಿತಿಯೊಳಗೆ ನಾನು ಮಾತನಾಡಿದ್ದೇನೆ. ನಮ್ಮ ಬೇಡಿಕೆ ಏನು ಅನ್ನೋದನ್ನು ಈಗಾಗಲೇ ಹೈಕಮಾಂಡ್ ಗಮನಕ್ಕೆ ತಂದಿದ್ದೇವೆ. ರಾಜ್ಯಾಧ್ಯಕ್ಷರ ಬದಲಾವಣೆ ಮಾಡುವುದಷ್ಟೇ ನಮ್ಮ ಬೇಡಿಕೆ. ಶೇ. 75ರಷ್ಟು ನಾಯಕರು ವಿಜಯೇಂದ್ರ ವಿರುದ್ಧ ಇದ್ದಾರೆ. ಇದನ್ನು ನಿಮ್ಮ ಮುಂದೆ ಸ್ಪಷ್ಟ ಪಡಿಸುತ್ತಿದ್ದೇನೆ ಎಂದು 9 ಪುಟಗಳ ಪತ್ರದಲ್ಲಿ ಉತ್ತರಿಸಿದ್ದಾರೆ.