ಶಿವಮೊಗ್ಗ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದ ಕೂಪದಲ್ಲಿ ಮುಳುಗಿದೆ ಎಂದು ಶಿವಮೊಗ್ಗದಲ್ಲಿ ಶಾಸಕ ಎಸ್.ಎನ್. ಚನ್ನಬಸಪ್ಪ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದಕ್ಕೆ ಸಾಕ್ಷಿಯನ್ನು ಕಾಂಗ್ರೆಸ್ ಮುಖಂಡರೇ ನೀಡಿದ್ದಾರೆ. ಬಡವರಿಗೆ ಮನೆ ಕೊಡಲು ಅನೇಕ ಯೋಜನೆಗಳು ಜಾರಿಗೆ ಬಂದಿವೆ. ಆ ವಸತಿ ಯೋಜನೆಗಳಲ್ಲಿನ ಭ್ರಷ್ಟಾಚಾರದ ಬಗ್ಗೆ ಬಿ.ಆರ್ ಪಾಟೀಲ್ ತಿಳಿಸಿದ್ದಾರೆ. ಇದ್ಯಾವುದಕ್ಕೂ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಸೊಪ್ಪು ಹಾಕುತ್ತಿಲ್ಲ. ಮೊದಲು ವಸತಿ ಸಚಿವರ ಬಗ್ಗೆ ಗಮನಿಸಿ ಕ್ರಮ ಕೈಗೊಳ್ಳಬೇಕು. ವಸತಿ ಸಚಿವರು ರಾಜೀನಾಮೆ ನೀಡಿ, ಹೊರಬಂದು ತನಿಖೆ ಎದುರಿಸಬೇಕು ಎಂದು ಆಗ್ರಹಿಸಿದ್ದಾರೆ.
ಅನೇಕ ಇಲಾಖೆಗಳಲ್ಲಿ ಈ ಭ್ರಷ್ಟಾಚಾರ ವ್ಯವಸ್ಥೆ ಜಾರಿಯಲ್ಲಿದೆ. ಗುತ್ತಿಗೆದಾರರು ಹೋದರೆ ಕಾಮಗಾರಿಗೆ ಅನುಮೋದನೆ ನೀಡುತ್ತೆ. ಶಾಸಕರು ಹೋದರೆ ಅನುಮೋದನೆ ನೀಡಲ್ಲ. ಸರ್ಕಾರವು ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ಮುಳುಗಿದೆ. ಕಾಂಗ್ರೆಸ್ ನ ತುಷ್ಟೀಕರಣದ ನೀತಿ ಇನ್ನೂ ನಿಂತಿಲ್ಲ. ದೇಶವನ್ನೇ ಒಡೆದು ಕೊಟ್ಟವರು ಕಾಂಗ್ರೆಸ್ ನವರು. ಅವತ್ತು ಸಹ ತುಷ್ಟೀಕರಣ ಇತ್ತು. ಇವತ್ತು ಸಹ ತುಷ್ಟೀಕರಣ ಮಾಡುತ್ತಿದೆ. ವಸತಿ ಯೋಜನೆಯಲ್ಲಿ ಶೇ. 15ಮೀಸಲಾತಿ ನೀಡಬೇಕು ಎನ್ನುವುದು ಬಹಳ ಘೋರ ಅಪರಾಧದ ಕೆಲಸ ಎಂದು ಗುಡುಗಿದ್ದಾರೆ.
ತುಷ್ಟೀಕರಣ ನೀತಿ, ಡೋಂಗಿ ಜ್ಯಾತ್ಯಾತೀತ ನೀತಿಯನ್ನು ಕಾಂಗ್ರೆಸ್ ಅನುಸರಿಸುತ್ತಿದೆ. ಡೋಂಗಿ ಜ್ಯಾತ್ಯಾತೀತ ನೀತಿಯನ್ನು ಕಾಂಗ್ರೆಸ್ ಕೈ ಬಿಡಬೇಕು. ಪ್ರತಿಯೊಬ್ಬ ಬಡವರಿಗೂ ಸೂರು ಕೊಡಬೇಕು. ಇದು ಸರ್ಕಾರದ ಕೆಲಸ. ಯಡಿಯೂರಪ್ನವರ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಮಾತಾಡಿದ್ದಾರೆ. ಯಡಿಯೂರಪ್ಪ ಜೈಲಿಗೆ ಹೋಗಿಲ್ವಾ? ಅಂತ ಶಿಕ್ಷಣ ಸಚಿವರು ಕೇಳಿದ್ದಾರೆ. ರೈತನಿಗೆ ಅನ್ಯಾಯ ಆದಾಗ ನ್ಯಾಯ ಕೊಡಿಸಲು ಜೈಲಿಗೆ ಹೋದವರು ಯಡಿಯೂರಪ್ಪ. ತುರ್ತು ಪರಿಸ್ಥಿತಿ ವೇಳೆ ಪ್ರಜಾಪ್ರಭುತ್ವದ ಕಗ್ಗೂಲೆಯಾದಾಗ ಹೋರಾಟ ಮಾಡಿ ಯಡಿಯೂರಪ್ಪ ಜೈಲಿಗೆ ಹೋಗಿದ್ದರು. ದೇಶಕ್ಕೆ ಅಪಮಾನ ಆದ ಸಂದರ್ಭದಲ್ಲಿ ಹೋರಾಟ ಮಾಡಿರುವವರು ಯಡಿಯೂರಪ್ಪ. ಯಡಿಯೂರಪ್ಪನವರ ಕುರಿತು ತೇಜೋವಧೆ ಮಾಡಬೇಡಿ. ಶಿಕ್ಷಣ ಸಚಿವರು ಹೀಗೆ ಮಾತನಾಡಬಾರದು. ಏಕೆಂದರೆ ಮಕ್ಕಳನ್ನು ನಿಮ್ಮನ್ನು ನೋಡುತ್ತಿದ್ದಾರೆ ಎಂದು ಕಿವಿ ಮಾತು ಹೇಳಿದ್ದಾರೆ.