ಬೆಂಗಳೂರು: ನಗರದ ಜೆಪಿ ನಗರದ ಸಿಂಧೂರ ಕಲ್ಯಾಣ ಮಂಟಪದ ಸುತ್ತಮುತ್ತಲಿನ ಪ್ರದೇಶದಲ್ಲಿ ಪ್ರವಾಹ ತಡೆಯಲು ಕೈಗೆತ್ತಿಕೊಂಡಿರುವ ಮಳೆ ನೀರುಗಾಲುವೆ ಕಾಮಗಾರಿಯನ್ನು ವರ್ಷಾಂತ್ಯಕ್ಕೆ ಪೂರ್ಣಗೊಳಿಸಲು ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ದಕ್ಷಿಣ ವಲಯ ವ್ಯಾಪ್ತಿಯಲ್ಲಿ ಇಂದು ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ ಮಾತನಾಡಿದ ಅವರು, ಜೆ.ಪಿ. ನಗರ ಸಿಂಧೂರ ಕಲ್ಯಾಣ ಮಂಟಪದಿಂದ ಕೆ-210 ಗೆ ಸಂಪರ್ಕ ಕಲ್ಪಿಸಲು 1.3 ಕಿ.ಮೀ ಉದ್ದದ ಮಳೆ ನೀರುಗಾಲುವೆ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದು, ಶೀಘ್ರ ಕಾಮಗಾರಿ ಪೂರ್ಣಗೊಳಿಸಿ ಈ ಪ್ರದೇಶದಲ್ಲಿ ಪ್ರವಾಹ ಆಗುವುದನ್ನು ತಪ್ಪಿಸಲು ಸೂಚಿಸಿದರು.
ಮಳೆ ನೀರುಗಾಲುವೆ ಕಾಮಗಾರಿ ನಡೆಯುತ್ತಿರುವ ಕಡೆ ಸುರಕ್ಷತೆಯ ದೃಷ್ಟಿಯಿಂದ ಚೇಂಬರ್ಸ್ ಗಳ ಬಳಿ ಬ್ಯಾರಿಕೇಡಿಂಗ್ ಅಳವಡಿಸಿ ಯಾವುದೇ ರೀತಿಯ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ಮಳೆ ನೀರುಗಾಲುವೆ ಕಾಮಗಾರಿ ನಡೆಯುತ್ತಿರುವ ಕಡೆ ಪಾದಚಾರಿ ಮಾರ್ಗವನ್ನು ಸರಿಯಾಗಿ ನಿರ್ವಹಣೆ ಮಾಡಲು ಸೂಚಿಸಲಾಯಿತು.
ಹೊರ ವರ್ತುಲ ರಸ್ತೆಯ ಸೈಡ್ ಡ್ರೈನ್ ಗಳಲ್ಲಿ ಹೂಳೆತ್ತಿ ಸ್ವಚ್ಛತೆ ಕಾಪಾಡಬೇಕು. ಚರಂಡಿಗಳಿಂದ ತೆಗೆದ ಹೂಳನ್ನು ಸ್ಥಳದಲ್ಲಿಯೇ ಬಿಡದೆ ಕೂಡಲೇ ವಿಲೇವಾರಿ ಮಾಡುವ ಕೆಲಸ ಮಾಡಬೇಕು. ಇದರಿಂದ ಮಳೆಯಾಗುವ ವೇಳೆ ರಸ್ತೆ ಮೇಲೆ ನೀರು ನಿಲ್ಲುವ ಸಂಭವ ಎದುರಾಗುವುದಿಲ್ಲ ಎಂದು ತಿಳಿಸಿದರು.
ಜೈವಿಕ ಅನಿಲ ಘಟಕ ಪರಿಶೀಲನೆ:
ಜಯನಗರ 3ನೇ ಬ್ಲಾಕ್ನಲ್ಲಿರುವ ಘನತ್ಯಾಜ್ಯ ಜೈವಿಕ ಅನಿಲ ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಲಾಯಿತು. ಸದರಿ ಘಟಕವು 5 ಟನ್ ಸಾಮರ್ಥ್ಯವಿದ್ದು, ಇದೇ ರೀತಿ ನಗರದ ಇತರೆ ಕಡೆಯೂ ಘಟಕಗಳನ್ನು ಸ್ಥಾಪಿಸುವ ಸಲುವಾಗಿ ಸೂಕ್ತ ಸ್ಥಳಗಳನ್ನು ಗುರುತಿಸಿದರೆ ಕೆ.ಆರ್. ಮಾರುಕಟ್ಟೆಯಂತಹ ಪ್ರದೇಶಗಳಲ್ಲಿ ತ್ಯಾಜ್ಯ ನಿರ್ವಹಣಾ ಸಮಸ್ಯೆಗಳನ್ನು ಪರಿಹರಿಸಬಹುದೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ತ್ಯಾಜ್ಯ ಸಂಗ್ರಹಣಾ ಕೇಂದ್ರ ಪರಿಶೀಲನೆ:
ಅತ್ತಿಗುಪ್ಪೆ ವಾರ್ಡ್ ವ್ಯಾಪ್ತಿಯಲ್ಲಿ ಘನತ್ಯಾಜ್ಯ ಸಂಗ್ರಹಣಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ, ರಸ್ತೆ ಬದಿ, ಖಾಲಿ ಜಾಗಗಳಲ್ಲಿ ಕಸ ಸುರಿಯುವ ಸ್ಥಳ (ಬ್ಲಾಕ್ ಸ್ಪಾಟ್) ಆಗದಂತೆ ನೋಡಿಕೊಳ್ಳಬೇಕು. ಬ್ಲಾಕ್ ಸ್ಪಾಟ್ ಗಳು ಕಂಡುಬಂದರೆ ಕೂಡಲೆ ಅದನ್ನು ತೆರವುಗೊಳಿಸಿ ಮತ್ತೆ ಅಲ್ಲಿ ಬ್ಲಾಕ್ ಸ್ಪಾಟ್ ಆಗದಂತೆ ನೋಡಿಕೊಳ್ಳಲು ಮಾರ್ಷಲ್ ಮೇಲ್ವಿಚಾರಕರಿಗೆ ಸೂಚನೆ ನೀಡಿದರು.
ವಿದ್ಯುತ್ ಚಿತಾಗಾರ ಪರಿಶೀಲನೆ:
ವಿಲ್ಸನ್ ಗಾರ್ಡನ್ ಬಳಿಯಿರುವ ವಿದ್ಯುತ್ ಚಿತಾಗಾರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವ ವೇಳೆ, ಚಿತಾಗಾರದ ಸುತ್ತಲೂ ಸ್ವಚ್ಛತೆಯನ್ನು ಕಾಪಾಡಲು ತಿಳಿಸಿದರು. 2 ಫರ್ನೆಸ್ ಗಳ ಪೈಕಿ 1 ಫರ್ನೆಸ್ ಕಾಮಗಾರಿ ಪ್ರಗತಿಯಲ್ಲಿದ್ದು, ಶೀಘ್ರ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಿದರು.
ಅಂತ್ಯಕ್ರಿಯೆ ಮಾಡಲು ಬರುವವರಿಗಾಗಿ ಸ್ಥಳದಲ್ಲಿ ಸರಿಯಾದ ಮೂಲಭೂತ ಸೌಕರ್ಯಗಳ ವ್ಯವಸ್ಥೆ ಮಾಡಬೇಕು. ಅಲ್ಲದೇ ಹೆಚ್ಚುವರಿಗಾಗಿ 2 ಫರ್ನೆಸ್ ನಿರ್ಮಾಣ ಮಾಡಲು ಪ್ರಸ್ತಾವನೆ ಸಲ್ಲಿಸಲು ತಿಳಿಸಿದರು. ಇದರ ಜೊತೆಗೆ ನಗರದಲ್ಲಿ ಸುಮ್ಮನಹಳ್ಳಿ ಬಳಿ ಮಾತ್ರ ಪ್ರಾಣಿಗಳ ಅಂತ್ಯಕ್ರಿತೆ ಮಾಡಲು ಚಿತಾಗಾರವಿದ್ದು, ಬೇರೆಡೆ ಸೂಕ್ತ ಜಾಗ ಹುಡಕಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ವೇಳೆ ವಲಯ ಆಯುಕ್ತರಾದ ದಿಗ್ವಿಜಯ್ ಬೋಡ್ಕೆ, ಮುಖ್ಯ ಅಭಿಯಂತರರಾದ ರಾಜೇಶ್, ಕಾರ್ಯಪಾಲಕ ಅಭಿಯಂತರರು ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.