ಮಳೆ ನೀರಿಗೆ ಚರಂಡಿಯಲ್ಲಿ ವ್ಯಕ್ತಿ ಕೊಚ್ಚಿ ಹೋಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತನ ನಿವಾಸಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಭೇಟಿ ನೀಡಿದ್ದಾರೆ. ಹಳೇ ಹುಬ್ಬಳ್ಳಿಯ ಬೀರಬಂದ ಓಣಿ ನಿವಾಸಿ ಹುಸೇನ್ ಸಾಬ್ ಕಳಸ ಮನೆಗೆ ಸಂತೋಷ್ ಲಾಡ್ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಜೂನ್ 11 ರಂದು ಹುಬ್ಬಳ್ಳಿಯ ಬೆಳಗಲಿ ಕ್ರಾಸ್ ಬಳಿ ಹುಸೇನ್ ಬೈಕ್ ನಲ್ಲಿ ಮನೆಗೆ ಹೋಗುವಾಗ ಚರಂಡಿ ನೀರಲ್ಲಿ ಕೊಚ್ಚಿ ಹೋಗಿದ್ದರು. ನಿರಂತರ ಕಾರ್ಯಾಚರಣೆ ನಂತರ ಮುಳ್ಳಿನ ಪೊದೆಯಲ್ಲಿ ಹುಸೇನ್ ಮೃತದೇಹ ಪತ್ತೆಯಾಗಿತ್ತು.
ಹೀಗಾಗಿ ಹುಸೇನ್ ಮನೆಗೆ ಭೇಟಿ ನೀಡಿದ್ದ ಲಾಡ್ ಐದು ಲಕ್ಷ ರೂ. ಪರಿಹಾರದ ದಾಖಲೆ ಹಸ್ತಾಂತರ ಮಾಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಇದೇ ವೇಳೆ ಮಾತನಾಡಿದ ಅವರು, ಮಳೆ ನೀರಿನಲ್ಲಿ ಕೊಚ್ಚಿ ಹೋಗಿ ಆಕಸ್ಮಿಕವಾಗಿ ದುರ್ಘಟನೆ ಸಂಭವಿಸಿದೆ. ಈ ರೀತಿಯ ಘಟನೆಗಳು ಮರುಕಳಿಸಬಾರದು. ಚರಂಡಿ ಎಲ್ಲೆಲ್ಲಿ ತೆಗೆದಿದೆಯೋ, ಅದನ್ನು ಮುಚ್ಚಲು ಸೂಚಿಸಿದ್ದೇನೆ. ಮಳೆಗೆ ಜಿಲ್ಲೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. 120 ಮನೆಗಳು ಭಾಗಶಃ ಬಿದ್ದಿವೆ ಎಂದು ಹೇಳಿದರು.