ನವದೆಹಲಿ: ಏಳನೇ ತರಗತಿ ಪಠ್ಯಪುಸ್ತಕಗಳಿಂದ ಮೊಘಲರು ಹಾಗೂ ದೆಹಲಿ ಸುಲ್ತಾನರ ಅಧ್ಯಾಯಗಳನ್ನು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಸಮಿತಿ (ಎನ್ ಸಿ ಇ ಆರ್ ಟಿ) ತೆಗೆದುಹಾಕಿದೆ. ಹಾಗೆಯೇ, ಮಹಾ ಕುಂಭಮೇಳದ ಮಹತ್ವ, ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳನ್ನು ಪಠ್ಯದಲ್ಲಿ ಸೇರಿಸಲಾಗಿದೆ ಎಂದು ತಿಳಿದುಬಂದಿದೆ. ಹಾಗೆಯೇ, ಇದು ಈಗ ಭಾರಿ ಚರ್ಚೆಗೂ ಕಾರಣವಾಗಿದೆ.
ನೂತನ ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) ಹಾಗೂ ನ್ಯಾಷನಲ್ ಕರಿಕ್ಯುಲಂ ಫ್ರೇಮ್ ವರ್ಕ್ ಫಾರ್ ಸ್ಕೂಲ್ ಎಜುಕೇಷನ್ (ಎನ್ ಸಿ ಎಫ್ ಎಸ್ ಇ) ಅನ್ವಯ ಪಠ್ಯದಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಸಮಾಜ ವಿಜ್ಞಾನ ಪುಸ್ತಕವನ್ನು ಪರಿಷ್ಕರಣೆ ಮಾಡಲಾಗಿದ್ದು, ಕೆಲ ಅಧ್ಯಾಯಗಳನ್ನು ತೆಗೆದುಹಾಕಲಾಗಿದೆ ಎಂದು ತಿಳಿದುಬಂದಿದೆ.
ಪಠ್ಯ ಪುಸ್ತಕದಿಂದ ತುಘಲಕರು, ಖಿಲ್ಜಿಗಳು, ಲೋದಿಗಳು ಸೇರಿ ಮೊಘಲರ ಹಲವು ದೊರೆಗಳ ಮಾಹಿತಿಯನ್ನು ತೆಗೆದುಹಾಕಲಾಗಿದೆ. ಆ ಮೂಲಕ ಮೊಘಲರು ಹಾಗೂ ದೆಹಲಿ ಸುಲ್ತಾರ ಅಧ್ಯಾಯವನ್ನು ಸಂಪೂರ್ಣವಾಗಿ ತೆಗೆದುಹಾಕಿದಂತಾಗಿದೆ.
“ಹೌ ದಿ ಲ್ಯಾಂಡ್ ಬಿಕಮ್ಸ್ ಸ್ಯಾಕ್ರೆಡ್” ಎಂಬ ಹೊಸ ಅಧ್ಯಾಯವನ್ನು ಸೇರಿಸಲಾಗಿದೆ. ಇದರಲ್ಲಿ ಹಿಂದೂ, ಇಸ್ಲಾಂ, ಬೌದ್ಧ ಸೇರಿ ಹಲವು ಧರ್ಮಗಳ ಪವಿತ್ರ ಸ್ಥಳಗಳನ್ನು ಸೇರಿಸಲಾಗಿದೆ. 12 ಜ್ಯೋತಿರ್ಲಿಂಗಗಳು, ಚಾರ್ ಧಾಮ್ ಯಾತ್ರೆ, ಮಹಾ ಕುಂಭಮೇಳ ಸೇರಿ ಹಲವು ಯಾತ್ರಾಸ್ಥಳಗಳ ಕುರಿತು ಮಾಹಿತಿ ನೀಡಲಾಗಿದೆ. ಹಾಗೆಯೇ, ಜವಾಹರ ಲಾಲ್ ನೆಹರು ಅವರ ಕೋಟ್ ಒಂದನ್ನು ಕೂಡ ಪ್ರಸ್ತಾಪಿಸಲಾಗಿದೆ ಎಂದು ತಿಳಿದುಬಂದಿದೆ.