ಶಿರಸಿಯ ಮನವಿಕಾಸ ಸಂಸ್ಥೆ ಹಾಗೂ ಬೆಂಗಳೂರಿನ ನಬಾರ್ಡ್ ಸಂಯೋಗದಲ್ಲಿ ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿ ಮೀನು ಉತ್ಪಾದಕರ ಮತ್ತು ಕೋಸ್ಟಲ್ ಮಾರ್ಟ್ ಆರಂಭವಾಯಿತು.
ಉಪ್ಪಂದದ ಅಂಬಾಗಿಲಿನಲ್ಲಿ ಈ ಕಾರ್ಯಕ್ರಮ ನಡೆಯಿತು. ಮುಖಂಡ ಆನಂದ್ ಖಾರ್ವಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮನುವಿಕಾಸ ಸಂಸ್ಥೆಯು ರೈತ ಉತ್ಪಾದಕ ಸಂಸ್ಥೆಯನ್ನು ಪ್ರಾರಂಭಿಸಿದೆ. ಕೇವಲ ಮೀನುಗಾರ ಮಹಿಳೆಯರಿಂದ ಅಗತ್ಯ ವಸ್ತುಗಳನ್ನು ಸ್ಪರ್ಧಾತ್ಮಕ ದರದಲ್ಲಿ ಖರೀದಿಸಿ, ಮನೆಯಲ್ಲಿ ತಯಾರಿಸಿದ ಗೃಹ ಉತ್ಪನ್ನಗಳನ್ನು ಮಾರಾಟ ಮಾಡಲು ಈ ವೇದಿಕೆ ಕಲ್ಪಿಸಲಾಗಿದೆ. ಇದೊಂದು ವಿನೂತನ ಪ್ರಯತ್ನವಾಗಿದೆ. ಈ ಸಂಸ್ಥೆ ದೊಡ್ಡ ಮಟ್ಟದಲ್ಲಿ ಬೆಳೆಯಲಿ ಎಂದು ಹಾರೈಸಿದರು.
ಮನುವಿಕಾಸ ಸಂಸ್ಥೆಯ ನಿರ್ದೇಶಕ ಗಣಪತಿ ಭಟ್ ಮಾತನಾಡಿ, ಮನವಿಕಾಸ ಸಂಸ್ಥೆಯು ಉಡುಪಿ ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದೆ. ಸ್ವಸಹಾಯ ಸಂಘ ರಚಿಸುವ ಮೂಲಕ ತಮ್ಮ ಕೆಲಸ ಆರಂಭಿಸಿದೆ. ಈಗ ರೈತ ಉತ್ಪಾದಕ ಸಂಸ್ಥೆಯನ್ನು ಸಹ ಮಹಿಳೆಯರಿಗಾಗಿ ರಚಿಸಿಕೊಡಲಾಗಿದೆ ಎಂದು ಹೇಳಿದ್ದಾರೆ.
ಈ ಮಾರ್ಟ್ ನಲ್ಲಿ ರಿಯಾಯಿತಿ ದರದಲ್ಲಿ ತ್ವರಿತ ಸೇವೆ, ಉತ್ಕೃಷ್ಟ ಗುಣಮಟ್ಟದ, ವಸ್ತುಗಳೆಲ್ಲವೂ ಒಂದೇ ಸೂರಿನಡಿ ಸಿಗುತ್ತವೆ. 1 ಸಾವಿರಕ್ಕೂ ಅಧಿಕ ಸದಸ್ವರಿದ್ದಾರೆ. ಈ ಸಂಸ್ಥೆಯು 350ಕ್ಕೂ ಅಧಿಕ ಜನರ ಶೇರು ಹೊಂದಿದೆ. ನವರಾತ್ರಿಯ ಹಿನ್ನೆಲೆಯಲ್ಲಿ 3 ಸಾವಿರ ರೂ.ನಿಂದ 6 ಸಾವಿರ ರೂ. ವರೆಗೆ ಖರೀದಿ ಮಾಡುವವರಿಗೆ ಆಕರ್ಷಕ ಬಹುಮಾನ ನೀಡಲಾಗುತ್ತಿದೆ. 6 ಸಾವಿರ ರೂ.ನಿಂದ 10 ಸಾವಿರ ರೂ. ವರೆಗೆ ಖರೀದಿ ಮಾಡುವವರಿಗೆ ಅತ್ಯಾಕರ್ಷಕ ಬಹುಮಾನ, 10 ಸಾವಿರ ರೂ. ಮೇಲ್ಪಟ್ಟು ಖರೀದಿ ಮಾಡುವವರಿಗೆ ಅತ್ಯಮೂಲ್ಯ ಉಡುಗೊರೆಯೊಂದಿಗೆ ಗ್ರಾಹಕ ಪ್ರಮಾಣ ಪತ್ರ ನೀಡಿ ಗೌರವಿಸಲಾಗುತ್ತದೆ.
ಈ ಕಾರ್ಯಕ್ರಮದಲ್ಲಿ ಮದನ್ ಕುಮಾರ್ ಉಪ್ಪುಂದ, ಮೀನು ಉತ್ಪಾದಕರ ಸಂಸ್ಥೆಯ ಅಧ್ಯಕ್ಷರಾದ ನಾಗವೇಣಿ ಮೊಗೇರ, ಶ್ರೀರಾಮ ಖಾರ್ವಿ, ಪ್ರಶಾಂತ್ ಜೆ, ರಾಜೇಶ್, ಸುರೇಶ್ ಎಚ್. ಖಾರ್ವಿ, ರಾಜು ಕೊಲ್ಲೂರು, ಮುಕ್ತ ಉಪ್ಪುಂದ, ಭವ್ಯ ಉಪ್ಪುಂದ, ಚಂದ್ರವತಿ ಶಿರೂರು ಸೇರಿದಂತೆ ಹಲವರು ಇದ್ದರು.