ಚಿತ್ರದುರ್ಗ: ಆಸ್ತಿಗಾಗಿ ಮಕ್ಕಳು ತಂದೆಯನ್ನೇ ಮನೆಯಿಂದ ಹೊರಗೆ ಹಾಕಿರುವ ಘಟನೆಯೊಂದು ಬೆಳಕಿಗೆ ಬಂದಿದೆ. ಅಲ್ಲದೇ, ಅಧಿಕಾರಿಗಳು ಆ ತಂದೆಯನ್ನು ಮನೆಗೆ ತಲುಪಿಸಿದ್ದಾರೆ.
ತಂದೆ ಮಕ್ಕಳ ನಡುವೆ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆ ನಡೆದಿದೆ. ಹೀಗಾಗಿ ಮಕ್ಕಳು ತಂದೆಯನ್ನು ಮನೆಯಿಂದ ಹೊರ ಹಾಕಿದ್ದಾರೆ. ಹೀಗಾಗಿ ಸಾರ್ವಜನಿಕರು ವಯಸ್ಸಾದ ತಂದೆಯನ್ನು ನಿರಾಶ್ರಿತರ ಕೇಂದ್ರಕ್ಕೆ ಸೇರಿಸಿದ್ದರು. ಅಧಿಕಾರಿಗಳು ಮಕ್ಕಳ ಮನೆ ಪತ್ತೆ ಹಚ್ಚಿ ವೃದ್ದ ವ್ಯಕ್ತಿಯನ್ನು ಮನೆಗೆ ಸೇರಿಸಿದ್ದಾರೆ.
ಚಿತ್ರದುರ್ಗದ ಚೋಳಗುಡ್ಡ ಬಡಾವಣೆಯಲ್ಲಿ ಈ ಘಟನೆ ನಡೆದಿದೆ. ಮಾಡನಾಯಕನಹಳ್ಳಿ ಮೂಲದ ಬಸಪ್ಪ (85) ಮಕ್ಕಳಿಂದ ನಿರ್ಲಕ್ಷ್ಯಕ್ಕೊಳಗಾದವರು. ಬಸಪ್ಪ ಅವರಿಗೆ ಇಬ್ಬರು ಗಂಡು, ಒರ್ವ ಹೆಣ್ಣು ಮಗಳಿದ್ದರೂ ತಂದೆಯನ್ನು ಹೊರ ಹಾಕಿ ಅಮಾನವೀಯತೆ ಮೆರೆದಿದ್ದಾರೆ. ಈ ಅಮಾನವೀಯತೆ ಕಂಡ ಜನರು ಜಿಲ್ಲಾಡಳಿತದ ಗಮನಕ್ಕೆ ತಂದಿದ್ದಾರೆ.
ಕೂಡಲೇ ವೃದ್ಧರ ಮನೆ ಪತ್ತೆ ಮಾಡಿ ಚಿತ್ರದುರ್ಗ ಎಸಿ ತಂಡ ಸೇರಿಸಿದೆ. ಈ ವೇಳೆ ಚಿತ್ರದುರ್ಗ ಎಸಿ ಮೆಹಬೂಬ್ ಜಿಲಾನ್, ಅಂಗವಿಕಲ ಕಲ್ಯಾಣ ಅಧಿಕಾರಿ ವೈಶಾಲಿ ಇದ್ದರು. ತಂದೆಯನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಮಕ್ಕಳಿಗೆ ತಾಕೀತು ಮಾಡಲಾಗಿದೆ. ವೃದ್ದ ಬಸಪ್ಪ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.