ಮಹೇಂದ್ರ ಸಿಂಗ್ ಧೋನಿ (MS Dhoni) ನಾಯಕನಾಗಿ ಮತ್ತೆ ಎಂಟ್ರಿ ಕೊಟ್ಟರೂ ಚೆನ್ನೈಗೆ ಸೋಲು ಎದುರಾಗಿದೆ. ತಂಡದ ನಾಯಕತ್ವ ಬದಲಾದರೂ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಅದೃಷ್ಟವನ್ನು ಬದಲಾಯಿಸಲು ಸಾಧ್ಯವಾಗಲಿಲ್ಲ. ಸತತ ನಾಲ್ಕು ಪಂದ್ಯಗಳಲ್ಲಿ ಸೋತಿದ್ದ ಚೆನ್ನೈ ತಂಡ, ಈಗ ಐದನೇ ಪಂದ್ಯದಲ್ಲೂ ಸೋಲನ್ನು ಎದುರಿಸಿದೆ.
ಚೆನ್ನೈ ತಂಡ ಕೋಲ್ಕತಾ ನೈಟ್ ರೈಡರ್ಸ್ (KKR) ವಿರುದ್ಧ 8 ವಿಕೆಟ್ ಗಳ ಹೀನಾಯ ಸೋಲು ಅನುಭವಿಸಿದೆ. ಈ ಪಂದ್ಯದಲ್ಲಿ, ಚೆನ್ನೈ ತಂಡದ ಇಡೀ ಬ್ಯಾಟಿಂಗ್ ಸಂಪೂರ್ಣ ವೈಫಲ್ಯ ಕಂಡಿದೆ. ಪರಿಣಾಮ 103 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಕೆಕೆಆರ್ ಕೇವಲ 10 ಓವರ್ಗಳಲ್ಲಿ ಈ ಗುರಿ ಸಾಧಿಸಿ ಟೂರ್ನಿಯಲ್ಲಿ ಮೂರನೇ ಗೆಲುವು ದಾಖಲಿಸಿತು.
17 ವರ್ಷಗಳಲ್ಲಿ ತಂಡಕ್ಕಾಗಿ ಹಲವು ಬಾರಿ ಅಂತಹ ಮ್ಯಾಜಿಕ್ ತೋರಿಸಿದ್ದ ಧೋನಿಯ ಹೆಗಲಿಗೆ ನಾಯಕತ್ವದ ಜವಬ್ದಾರಿ ಹೊರಿಸಲಾಗಿತ್ತು. ಆದರೆ, ತಂಡಕ್ಕೆ 43 ವರ್ಷ ವಯಸ್ಸಿನ ಧೋನಿಯ ಬಳಿ ತಂಡದ ಪ್ರದರ್ಶನವನ್ನು ಬದಲಾಯಿಸುವ ಮ್ಯಾಜಿಕ್ ಉಳಿದಿಲ್ಲ ಎಂಬುವುದು ಮೊದಲ ಪಂದ್ಯದಲ್ಲೇ ಸಾಬೀತಾಯಿತು.
ಸಿಎಸ್ ಕೆ ಆಡಿದ ಮೊದಲ ಐದು ಪಂದ್ಯಗಳಲ್ಲಿ ಗುರಿ ಬೆನ್ನಟ್ಟುವ ಅವಕಾಶ ಪಡೆದಾಗಲೂ ಬ್ಯಾಟಿಂಗ್ ವಿಭಾಗ ವೈಫಲ್ಯ ಅನುಭವಿಸಿತ್ತು. ಕೆಕೆಆರ್ ವಿರುದ್ಧ ಮೊದಲು ಬ್ಯಾಟ್ ಮಾಡಿದ್ದ ಚೆನ್ನೈ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು ಕೇವಲ 103 ರನ್ ಗಳಿಸಿತು.
ಕೇವಲ 79 ರನ್ಗಳಿಗೆ ತಂಡದ 9 ವಿಕೆಟ್ಗಳು ಪತನಗೊಂಡಿದ್ದವು. ಆದರೆ ಕೊನೆಯಲ್ಲಿ ಶಿವಂ ದುಬೆ ಕೆಲವು ದೊಡ್ಡ ಹೊಡೆತಗಳನ್ನು ಹೊಡೆದು ತಂಡವನ್ನು 100 ರನ್ಗಳ ದಾಟಿಸಿದರು. ಕೋಲ್ಕತ್ತಾದ ಸ್ಪಿನ್ ತ್ರಯರು 9 ವಿಕೆಟ್ಗಳಲ್ಲಿ 6 ವಿಕೆಟ್ಗಳನ್ನು ಕಬಳಿಸಿದರು. ಸುನಿಲ್ ನರೈನ್ 3, ವರುಣ್ ಚಕ್ರವರ್ತಿ 2 ಮತ್ತು ಮೊಯೀನ್ ಅಲಿ 1 ವಿಕೆಟ್ ಪಡೆದು ಮಿಂಚಿದರು.
ಕೋಲ್ಕತ್ತಾ ತಂಡಕ್ಕೆ ಉತ್ತಮ ಆರಂಭ ಸಿಕ್ಕಿತು. ಕ್ವಿಂಟನ್ ಡಿ ಕಾಕ್ (23) ಮತ್ತು ಸುನಿಲ್ ನರೈನ್ ಅದ್ಭುತ ಆರಂಭ ನೀಡಿ ಕೇವಲ ನಾಲ್ಕು ಓವರ್ಗಳಲ್ಲಿ 46 ರನ್ ಸೇರಿಸಿದರು. ನಾಯಕ ಅಜಿಂಕ್ಯ ರಹಾನೆ (ಅಜೇಯ 20) ನರೈನ್ ಜೊತೆಗೆ ಉತ್ತಮ ಜೊತೆಯಾಟ ಕಟ್ಟಿದರು. ರಿಂಕು ಸಿಂಗ್ (15 ನಾಟೌಟ್) ಮತ್ತು ರಹಾನೆ ತಂಡವನ್ನು ಕೇವಲ 10.1 ಓವರ್ ಗಳಲ್ಲಿ ಗೆಲುವಿನ ದಡಕ್ಕೆ ತಂದು ನಿಲ್ಲಿಸಿದರು.