ನವದೆಹಲಿ: ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಆಲ್ರೌಂಡರ್ ರವೀಂದ್ರ ಜಡೇಜಾ (Ravindra Jadeja) ಅವರು ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಬೇಕೆಂದು ಟೀಮ್ ಇಂಡಿಯಾ ಮಾಜಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್(Ravichandran Ashwin) ಸಲಹೆ ನೀಡಿದ್ದಾರೆ. ಜಡೇಜಾ ಏಳನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುವುದರಿಂದ ಯಾವುದೇ ಪ್ರಯೋಜನ ಇಲ್ಲ ಎಂದು ಅವರು ಹೇಳಿದ್ದಾರೆ.
ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಇತ್ತೀಚೆಗಷ್ಟೇ ಭಾರತ ತಂಡವನ್ನು ಪ್ರಕಟಿಸಲಾಗಿತ್ತು. ಇದೀಗ ತಂಡದ ಬಗ್ಗೆ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಮಾತನಾಡಿದ ರವಿಚಂದ್ರನ್ ಅಶ್ವಿನ್, ಸ್ಪಿನ್ನ ಆಲ್ರೌಂಡರ್ ಜಡೇಜಾ ಅವರ ಪ್ರತಿಭೆಯನ್ನು ಸಮರ್ಥವಾಗಿ ಬಳಸಿಕೊಳ್ಳಬೇಕಾಗಿದೆ. ಹಾಗಾಗಿ ಅವರನ್ನು ನಾಲ್ಕನೇ ಕ್ರಮಾಂಕದಲ್ಲಿ ಆಡಿಸಬೇಕೆಂದು ಎಂದು ಹೇಳಿದ್ದಾರೆ .
“ಏಕದಿನ ಕ್ರಿಕೆಟ್ನಲ್ಲಿ ರವೀಂದ್ರ ಜಡೇಜಾ ಅವರ ಪರಿಪೂರ್ಣ ಸಾಮರ್ಥ್ಯ ಇನ್ನೂ ಹೊರ ಬಂದಿಲ್ಲ ಎಂದು ನಾನು ಪ್ರಾಮಾಣಿಕವಾಗಿ ಹೇಳಲು ಬಯಸುತ್ತೇನೆ. ಅವರು ತುಂಬಾ ಕೆಳ ಕ್ರಮಾಂಕದಲ್ಲಿ ಆಡುತ್ತಿದ್ದಾರೆ. ಅವರು ಏಳನೇ ಕ್ರಮಾಂಕದ ಬ್ಯಾಟ್ಸ್ಮನ್ ಅಲ್ಲ. ಟೆಸ್ಟ್ ಕ್ರಿಕೆಟ್ನಲ್ಲಿ ಅವರನ್ನು ಐದನೇ ಕ್ರಮಾಂಕದಲ್ಲಿ ಆಡಿಸಲಾಗಿತ್ತು. ಕೆಲ ಪಂದ್ಯಗಳಲ್ಲಿ ಒತ್ತಡ ಸಮಯದಲ್ಲಿ ಅವರನ್ನು ಐದನೇ ಗರಿಷ್ಠ ಐದನೇ ಕ್ರಮಾಂಕದಲ್ಲಿ ಆಡಿಸಲಾಗಿತ್ತು. ಆದರೆ, ಅವರನ್ನು ಏಕೆ ನಾಲ್ಕನೇ ಕ್ರಮಾಂಕದಲ್ಲಿ ಆಡಿಸಬಾರದು?,” ಎಂದು ಆರ್ ಅಶ್ವಿನ್ ತಿಳಿಸಿದ್ದಾರೆ.
“ಅವರನ್ನು ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಅವಕಾಶ ನೀಡಬೇಕು ಹಾಗೂ ಅವರಿಗೆ ಹೆಚ್ಚಿನ ಪಂದ್ಯಗಳನ್ನು ನೀಡಬೇಕು. ಏಕೆಂದರೆ ನಿಮ್ಮಲ್ಲಿ ಆಲ್ರೌಂಡರ್ಗಳು, ಅಗ್ರ ಐವರು ಬೌಲರ್ಗಳು ಹಾಗೂ ಅಗ್ರ ಆರು ಮಂದಿ ಬೌಲರ್ಗಳ ಪೈಕಿ ಹಾರ್ದಿಕ್ ಪಾಂಡ್ಯ ಮತ್ತು ರವೀಂದ್ರ ಜಡೇಜಾ ಇದ್ದಾರೆ. ಈ ಇಬ್ಬರೂ ಆಟಗಾರರು 4 ರಿಂದ 7ನೇ ಕ್ರಮಾಂಕದವರೆಗೆ ಎಲ್ಲಿ ಬೇಕಾದರೂ ಆಡಬಹುದು,” ಎಂದು ಸ್ಪಿನ್ ದಿಗ್ಗಜ ಹೇಳಿದ್ದಾರೆ.
“ರವೀಂದ್ರ ಜಡೇಜಾ ಸಾಕಷ್ಟು ವರ್ಷಗಳಿಂದ ಆಡುತ್ತಿದ್ದಾರೆ. ದೊಡ್ಡ ಟೂರ್ನಿಗಳಲ್ಲಿಯೂ ಒತ್ತಡದ ಸನ್ನಿವೇಶಗಳಲ್ಲಿ ಆಡಲು ಅವರಿಗೆ ಅವಕಾಶ ಸಿಕ್ಕಿದೆ. ಐಪಿಎಲ್ ಟೂರ್ನಿಯ ಫೈನಲ್ ಪಂದ್ಯದ ಕೊನೆಯ ಎರಡು ಎಸೆತಗಳಲ್ಲಿ ಅವರು 10 ರನ್ ಗಳಿಸಿದ್ದಾರೆ. ಒತ್ತಡ ಸನ್ನಿವೇಶದಲ್ಲಿ ಬ್ಯಾಟ್ ಮಾಡುತ್ತೇನೆಂಬುದನ್ನು ಅವರು ನಿಯಮಿತವಾಗಿ ಸಾಬೀತುಪಡಿಸಿದ್ದಾರೆ. ಇಂಥಾ ಆಟಗಾರನನ್ನು 4 ಅಥವಾ 5ನೇ ಕ್ರಮಾಂಕದಲ್ಲಿ ಆಡಲು ಕಳುಹಿಸಿದರೆ ಏನಾಗಬಹುದು? ಇದು ದೊಡ್ಡ ಜೂಜು. ಎಷ್ಟು ಮಟ್ಟಿಗೆ ದೊಡ್ಡದು? ಅಥವಾ ಜೂಜು ಎಂದರೇನು? ಇದು ದೊಡ್ಡ ಸಂಗತಿ ಎಂದು ನಾನು ಯೋಚಿಸುವುದಿಲ್ಲ,” ಎಂದು ಅಶ್ವಿನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.