ಜಾತಿ ಗಣತಿ ಎನ್ನುವ ಬಿಸಿತುಪ್ಪ ನಿಜಕ್ಕೂ ರಾಜ್ಯ ಕಾಂಗ್ರೆಸ್ ಪಾಲಿಗೆ ಖಡ್ಗದ ಮೇಲಿನ ನಡಿಗೆಯಂತಾಗಿದೆ. ಮೊದಲಿನಿಂದಲೂ ವಿರೋಧ ಎದುರಿಸುತ್ತಲೇ ಬಂದಿದ್ದ ಗಣತಿ ಗದಾಯುದ್ಧ ಈಗ ಅಂತಿಮ ಚರಣ ತಲುಪಿದೆ. ಹಿಂದುಳಿದ ಆಯೋಗವು ನಡೆಸಿದ್ದ ಗಣತಿಗೆ ಆರಂಭದಿಂದಲೇ ತೀವ್ರ ವಿರೋಧ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ವರದಿ ಈಗ ಸರ್ಕಾರದ ಕೈ ಸೇರಿದೆ. ಇದರ ನಡುವೆ ಕಾಂಗ್ರೆಸ್ ಪಾಳಯದಲ್ಲೇ ಆಂತರಿಕ ಕುರುಕ್ಷೇತ್ರ ಶುರುವಾಗಿದೆ.
ಲಿಂಗಾಯತರು-ಒಕ್ಕಲಿಗರ ನಡೆಯೇ ಇನ್ನೂ ನಿಗೂಢ!
ಹಾಗೆ ನೋಡಿದರೆ, ಖುದ್ದು ಕಾಂಗ್ರೆಸ್ ನಲ್ಲೇ ಈ ಜಾತಿ ಗಣತಿ ವಿಚಾರ ಬೆಂಕಿ ಹೊತ್ತಿಸಿದೆ. ವೀರಶೈವ ಲಿಂಗಾಯತರು ಮತ್ತು ಒಕ್ಕಲಿಗ ಸಮುದಾಯ ಈ ಗಣತಿ ಅವೈಜ್ಞಾನಿಕ ಅಂತಾ ವಾದಿಸುತ್ತಲೇ ಬಂದಿದೆ. ಅಷ್ಟೇ ಅಲ್ಲಾ ಮತ್ತೊಮ್ಮೆ ಗಣತಿಗೆ ಪಟ್ಟು ಹಿಡಿದಿವೆ. ಇದರ ನಡುವೆ, ಏಪ್ರಿಲ್ 17ರ ಗುರುವಾರ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ವಿಶೇಷ ಸಂಪುಟ ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ವರದಿಯ ಅಂಕಿ ಅಂಶಗಳ ಬಗ್ಗೆ ಸಮಗ್ರ ಚರ್ಚೆಗೆ ತೀರ್ಮಾನಿಸಲಾಗಿದೆ. ಆದ್ರೆ ಸಂಪುಟ ಸಭೆಯಲ್ಲಿ ಚರ್ಚೆಯೋ ಇಲ್ಲಾ ಪ್ರಬಲ ಸಮುದಾಯಗಳ ಮುಖಂಡರಿಂದ ಬಹಿಷ್ಕಾರವೋ ಅನ್ನೋದಿನ್ನೂ ಅಸ್ಪಷ್ಟವಾಗಿದೆ.
ಪ್ರತ್ಯೇಕ ಸಮಿತಿ ರಚಿಸಿದ ವೀರಶೈವರು
ರಾಜ್ಯದಲ್ಲಿ ವೀರಶೈವ ಲಿಂಗಾಯತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೆ, ಗಣತಿ ನಡೆಸಿದ ಕಾಂತರಾಜು ಆಯೋಗ ಸೂಕ್ತ ರೀತಿಯಲ್ಲಿ ಅಂಕಿ ಅಂಶ ಸಂಗ್ರಹಿಸಿಲ್ಲ. ಮನೆ ಮನೆಗೆ ತೆರಳಿ ಮಾಹಿತಿ ಕಲೆ ಹಾಕಿಲ್ಲ ಅನ್ನೋ ಆರೋಪ ವೀರಶೈವ ಮಹಾಸಭಾದ್ದು. ಅಷ್ಟೇ ಅಲ್ಲಾ ಇನ್ನೊಂದು ಹೆಜ್ಜೆ ಮುಂದಿಟ್ಟಿರುವ ಮಹಾಸಭಾ ಇದೀಗ ನಿವೃತ್ತ ಜಡ್ಜ್ ನೇತೃತ್ವದಲ್ಲಿ ಹೊಸದಾಗಿ ಸಮಿತಿಯನ್ನು ರಚಿಸಿ ವರದಿ ನೀಡಲು ಸೂಚಿಸಿದೆ.
ಇದು ನಿಜಕ್ಕೂ ರಾಜ್ಯ ಕಾಂಗ್ರೆಸ್ ಗೆ ದೊಡ್ಡ ಹಿನ್ನಡೆ ಎನ್ನಲಾಗ್ತಿದೆ. ಇತ್ತ ಒಕ್ಕಲಿಗರು ಕೂಡಾ ಗಣತಿ ವಿರುದ್ಧ ಕಣ್ಣು ಕೆಂಪಗಾಗಿಸಿದ್ದು, ಇಂದು ಖುದ್ದು ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಸಮುದಾಯದ ಶಾಸಕರ ಸಭೆ ಕರೆಯಲಾಗಿದೆ. ಇನ್ನೊಂಡೆದೆ ಒಕ್ಕಲಿಗರ ಸಂಘವೂ ಕಾರ್ಯಕಾರಿ ಸಮಿತಿ ಸಭೆ ಕರೆದು ಮುಂದಿನ ನಡೆ ಬಗ್ಗೆ ಚರ್ಚಿಸಲಿದೆ. ಇದರ ನಡುವೆ, ಸಂಪುಟ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಹಿರಂಗವಾಗೇ ಮತ್ತೊಮ್ಮೆ ಸರ್ವೆ ಆಗಬೇಕು ಅಂತಾ ಆಗ್ರಹಿಸಿದ್ದಾರೆ. ಆದರೆ, ವರದಿ ಬಿಡುಗಡೆ ನಿರ್ಧಾರ ರಾಹುಲ್ ಗಾಂಧಿಯದ್ದು ಅಂತಾ ಹೇಳೋ ಮೂಲಕ ಸಿಎಂ ಸೇಫ್ ಗೇಮ್ ಆಡಿದ್ದಾರೆ.
ದೆಹಲಿ ವರಿಷ್ಠರ ಹೆಸರಲ್ಲಿ ಸಿದ್ದರಾಮಯ್ಯ ಎದುರಾಳಿಗಳಿಗೆ ಚೆಕ್ ಮೇಟ್ ಇಟ್ಟಿದ್ದಾರೆ. ಆದ್ರೆ ಗುರುವಾರದೊಳಗಾಗಿ ಯಾವೆಲ್ಲಾ ಸಮುದಾಯಗಳ ಆಕ್ರೋಶ ಸ್ಫೋಟಿಸುತ್ತೆ ಅನ್ನೋದು ಈಗಿರೋ ಪ್ರಶ್ನೆ. ಅಷ್ಟೇ ಅಲ್ಲಾ ಖುದ್ದು ಹೈಕಮಾಂಡ್ ಕೂಡಾ ಈ ಬೀಸೋ ದೊಣ್ಣೆಯಿಂದ ಹೇಗೆ ಪಾರಾಗುತ್ತೆ ಅನ್ನೋದು ಕುತೂಹಲ ಕೆರಳಿಸಿದೆ.