ಬೆಂಗಳೂರು: ರಾಜ್ಯ ಕಾಂಗ್ರೆಸ್ ನಲ್ಲಿ ಜಾತಿಗಣತಿಯ ಜ್ವಾಲೆ ಮುಂದುವರೆದಿದೆ. ಒಕ್ಕಲಿಗ, ಲಿಂಗಾಯತ ಮಾತ್ರವಲ್ಲ ಅಹಿಂದ ಟೀಮ್ ನಿಂದಲೂ ಈಗ ಗಣತಿ ವಿಚಾರದಲ್ಲಿ ಬೇಸರ ವ್ಯಕ್ತವಾಗುತ್ತಿದೆ. ಸಿಎಂ ಸಿದ್ದರಾಮಯ್ಯ ಅವರಿಗೆ ವಿಧಾನ ಪರಿಷತ್ ಸದಸ್ಯ ನಾಗರಾಜ್ ಯಾದವ್ ಪತ್ರ ಬರೆದಿದ್ದು, ಗೊಲ್ಲ, ಕಾಡುಗೊಲ್ಲ, ಯಾದವ ಸಮುದಾಯದ ವಿಚಾರವಾಗಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸರಿಯಾದ ತಿದ್ದುಪಡಿ ಮಾಡುವಂತೆ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿದ್ದಾರೆ. ಕಾಡುಗೊಲ್ಲ ಸಮುದಾಯದ ಜನಸಂಖ್ಯೆ 3,20,853 ತೋರಿಸಲಾಗಿದೆ. ಕಾಡುಗೊಲ್ಲರು ಚಿತ್ರದುರ್ಗ, ತುಮಕೂರು, ಬೆಂಗಳೂರು ಗ್ರಾಮಾಂತರ, ಹಾಸನ, ಮಂಡ್ಯ. ಚಿಕ್ಕಮಗಳೂರು ಭಾಗದಲ್ಲಿ ಹೆಚ್ಚಾಗಿ ವಾಸಿಸುತ್ತಿದ್ದಾರೆ. ವಾಸ್ತವದಲ್ಲಿ ಈ ಸಂಖ್ಯೆಯು 6 ಲಕ್ಷಕ್ಕಿಂತ ಹೆಚ್ಚಾಗಿದೆ.
ಮೀಸಲಾತಿ ಪ್ರಮಾಣವನ್ನು ಶೇ. 6 ರಿಂದ ಶೇ.8ಕ್ಕೆ ಏರಿಸಬೇಕು. ರಾಜ್ಯದಲ್ಲಿ ಪ್ರಸ್ತುತ ಜಾರಿಯಲ್ಲಿರುವ ಪ್ರವರ್ಗ-1 ಅಡಿ ಗೊಲ್ಲ ಸಮುದಾಯದ ಎಲ್ಲಾ ಜಾತಿ ಹಾಗೂ ಉಪಜಾತಿ ಸೇರಿದರೆ 22-24 ಲಕ್ಷ ಜನಸಂಖ್ಯೆ ಇದೆ. ಆದರೆ ಜಯಪ್ರಕಾಶ್ ಹೆಗ್ಡೆ ವರದಿಯಲ್ಲಿ 7,08,696 ಎಂದು ತೋರಿಸಲಾಗಿದೆ. ಇದು ಸತ್ಯಕ್ಕೆ ದೂರವಾದ ಸಂಗತಿ ಎಂದಿದ್ದಾರೆ.
ಸದ್ಯದ ವರದಿಯಲ್ಲಿ ಪ್ರವರ್ಗ 1B ನಲ್ಲಿ ಸಮಾರು 385 ಸೇರಿಸಲಾಗಿದೆ. ಇದರಲ್ಲಿ ಕೆಲ ಪ್ರಬಲ ಜಾತಿಗಳು ಸೇರಿವೆ. ಹೀಗಾಗಿ ಅತ್ಯಂತ ಹಿಂದುಳಿದ ಗೊಲ್ಲ ಸಮುದಾಯ ಸೌಲಭ್ಯ ಪಡೆದುಕೊಳ್ಳುವುದು ಕಷ್ಟವಾಗಲಿದೆ. ಈ ನಿಟ್ಟಿನಲ್ಲಿ ಗೊಲ್ಲ ಉಪಜಾತಿಗಳನ್ನು ಪ್ರವರ್ಗ 1A ಗೆ ವರ್ಗಾಯಿಸಿ ಎಂದು ಒತ್ತಾಯಿಸಿದ್ದಾರೆ.