ಗುಂಟೂರು: ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ವೈಎಸ್ಆರ್ ಕಾಂಗ್ರೆಸ್ ಪಕ್ಷದ (ವೈಎಸ್ಆರ್ಸಿಪಿ) ಅಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರ ಬೆಂಗಾವಲು ವಾಹನದಡಿ ಸಿಲುಕಿ 53 ವರ್ಷದ ಕಾರ್ಯಕರ್ತರೊಬ್ಬರು ಸಾವಿಗೀಡಾದ ಘಟನೆಯ ವಿಡಿಯೋ ಇತ್ತೀಚೆಗಷ್ಟೇ ಭಾರೀ ಸದ್ದು ಮಾಡಿತ್ತು. ಅದರ ಬೆನ್ನಲ್ಲೇ ಈ ಘಟನೆಗೆ ಸಂಬಂಧಿಸಿದಂತೆ ಜಗನ್ ರೆಡ್ಡಿ ಸೇರಿದಂತೆ ಹಲವರ ವಿರುದ್ಧ ಆಂಧ್ರಪ್ರದೇಶ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಜೂನ್ 18ರಂದು ಜಗನ್ ಮೋಹನ್ ರೆಡ್ಡಿ ತಾಡೇಪಳ್ಳಿಯಿಂದ ಸಾತೇನಪಳ್ಳಿಗೆ ತೆರಳುವ ವೇಳೆ ಈ ದುರ್ಘಟನೆ ಸಂಭವಿಸಿತ್ತು. ಜಗನ್ ಪ್ರವಾಸಕ್ಕೆ ಪೊಲೀಸರು ಅನುಮತಿ ನೀಡಿದ್ದರು. ಆದರೆ, ಬೆಂಗಾವಲು ಪಡೆಯಲ್ಲಿ ಕೇವಲ ಮೂರು ವಾಹನಗಳಿಗೆ ಮಾತ್ರ ಅನುಮತಿ ನೀಡಲಾಗಿತ್ತು. ಆದರೆ, ಜಗನ್ ಬೆಂಗಾವಲು ಪಡೆ ಎಟುಕೂರು ಬೈಪಾಸ್ನ ಬಳಿಯ ಅಂಜನೇಯ ಸ್ವಾಮಿ ಪ್ರತಿಮೆಯ ಸಮೀಪ ತಲುಪಿದಾಗ, ನೂಕುನುಗ್ಗಲಿನ ವೇಳೆ ಚೀಲಿ ಸಿಂಗಯ್ಯ(53) ಎಂಬವರು ರಸ್ತೆಗೆ ಬಿದ್ದು, ಜಗನ್ ಬೆಂಗಾವಲು ವಾಹನದ ಅಡಿ ಸಿಲುಕಿ ಅಪ್ಪಚ್ಚಿಯಾಗಿದ್ದರು. ಅಪಘಾತದಲ್ಲಿ ವ್ಯಕ್ತಿಯೊಬ್ಬ ಗಂಭೀರವಾಗಿ ಗಾಯಗೊಂಡಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು.
ಚೀಲಿ ಸಿಂಗಯ್ಯ ಅವರು ಪರಿಶಿಷ್ಟ ಜಾತಿ ಸಮುದಾಯದ ಮಾದಿಗ ಪಂಗಡಕ್ಕೆ ಸೇರಿದವರಾಗಿದ್ದರು. ಗಂಭೀರ ರಕ್ತಸ್ರಾವದಿಂದ ಬಳಲುತ್ತಿದ್ದ ಸಿಂಗಯ್ಯರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಅಷ್ಟರಲ್ಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದರು. ಘಟನೆಯ ಭೀಕರ ವಿಡಿಯೋ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳು, ಡ್ರೋನ್ ರೆಕಾರ್ಡಿಂಗ್ಗಳು ಮತ್ತು ಸಾಕ್ಷಿಗಳ ಹೇಳಿಕೆಗಳಂತಹ ವಿವಿಧ ಸಾಕ್ಷ್ಯಗಳನ್ನು ಸಂಗ್ರಹಿಸಿ ತನಿಖೆ ಆರಂಭಿಸಿದ್ದಾರೆ. ಆರಂಭಿಕ ತನಿಖೆಯ ಆಧಾರದ ಮೇಲೆ, ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 105 ಮತ್ತು ಸೆಕ್ಷನ್ 49 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಜಗನ್ ಮೋಹನ್ ರೆಡ್ಡಿ ಅವರಲ್ಲದೇ, ಕಾರು ಚಾಲಕ ರಮಣ ರೆಡ್ಡಿ, ಆಪ್ತ ಸಹಾಯಕ ಕೆ. ನಾಗೇಶ್ವರ ರೆಡ್ಡಿ, ಮಾಜಿ ಸಂಸದ ವೈ.ವಿ. ಸುಬ್ಬಾ ರೆಡ್ಡಿ, ಮಾಜಿ ಶಾಸಕ ಪೆರ್ನಿ ನಾನಿ (ವೆಂಕಟೇಶ್ವರ ರಾವ್) ಮತ್ತು ಮಾಜಿ ಸಚಿವ ವಿದಾದಲ ರಾಜಿನಿ ಅವರನ್ನೂ ಆರೋಪಿಗಳೆಂದು ಹೆಸರಿಸಲಾಗಿದೆ.
ವೈಎಸ್ಆರ್ಸಿಪಿ ಪಕ್ಷವು ಈ ಘಟನೆಯನ್ನು ರಾಜಕೀಯ ಷಡ್ಯಂತ್ರ ಎಂದು ಖಂಡಿಸಿದ್ದು, ವಿಡಿಯೋ ದೃಶ್ಯಾವಳಿಗಳನ್ನು ನಕಲಿ ಎಂದು ಕರೆದಿದೆ. ಪಕ್ಷದ ಮಾಜಿ ಸಚಿವ ಅಂಬಟಿ ರಾಂಬಾಬು, ಈ ಘಟನೆಯನ್ನು ತಪ್ಪಾಗಿ ಚಿತ್ರಿಸಲಾಗಿದೆ ಎಂದು ಆರೋಪಿಸಿದ್ದಾರೆ. ಆದರೆ, ರಾಜ್ಯ ಸಚಿವ ಗೊಟ್ಟಿಪಾಟಿ ರವಿ ಕುಮಾರ್, ಜಗನ್ ತಮ್ಮ ಪ್ರಚಾರಕ್ಕಾಗಿ ಜನರ ಜೀವವನ್ನು ಲೆಕ್ಕಿಸುತ್ತಿಲ್ಲ ಎಂದು ಟೀಕಿಸಿದ್ದಾರೆ.
ಪೊಲೀಸರು ತನಿಖೆ ತೀವ್ರಗೊಳಿಸಿದ್ದು, ಕಾನೂನಿನಂತೆ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.