ಗಾಜಿಯಾಬಾದ್: ದೆಹಲಿ ಸಮೀಪದ ಗಾಜಿಯಾಬಾದ್ನ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರು ಪತ್ನಿಯನ್ನು ಗುಂಡಿಕ್ಕಿ ಕೊಂದು, ತಾವೂ ಆತ್ಮಹತ್ಯೆ(Self Harming) ಮಾಡಿಕೊಂಡ ಘಟನೆ ನಡೆದಿದೆ. ಅಚ್ಚರಿಯೆಂದರೆ, ಉದ್ಯಮಿ ಕುಲದೀಪ್ ತ್ಯಾಗಿ(46) ಅವರು ಆತ್ಮಹತ್ಯಾ ಪತ್ರವನ್ನೂ ಬರೆದಿದ್ದು, “ನನಗೆ ಕ್ಯಾನ್ಸರ್ ಇರುವುದು ದೃಢಪಟ್ಟಿದೆ. ಗುಣಮುಖನಾಗುತ್ತೇನೆ ಎನ್ನುವ ಧೈರ್ಯ ನನಗಿಲ್ಲ, ಚಿಕಿತ್ಸೆಗೆಂದು ಹಣವನ್ನು ವ್ಯರ್ಥ ಮಾಡುವುದು ನನಗೆ ಇಷ್ಟವಿಲ್ಲ. ನಾನು ಮತ್ತು ಪತ್ನಿ ಅನ್ಶು ತ್ಯಾಗಿ ಸದಾ ಜೊತೆಗೇ ಬಾಳಬೇಕೆಂದು ಬಯಸಿದ್ದೆವು. ಹೀಗಾಗಿ, ಆಕೆಯನ್ನೂ ಕೊಂದಿದ್ದೇನೆ” ಎಂದು ಬರೆದಿದ್ದಾರೆ. ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಕುಲದೀಪ್ ಅವರು ನಿವೃತ್ತ ಪೊಲೀಸ್ ಅಧಿಕಾರಿಯಾಗಿರುವ ತಮ್ಮ ತಂದೆಯನ್ನೂ ಅಗಲಿದ್ದಾರೆ.
ರಾಜ್ ನಗರದ ರಾಧಾ ಕುಂಜ್ ಸೊಸೈಟಿಯಲ್ಲಿರುವ ತಮ್ಮ ಮನೆಯಲ್ಲೇ ಕುಲದೀಪ್ ಅವರು ತಮ್ಮ ಲೈಸೆನ್ಸ್ ಹೊಂದಿರುವ ರಿವಾಲ್ವರ್ ನಿಂದ ಮೊದಲಿಗೆ ಗುಂಡಿಕ್ಕಿ ಪತ್ನಿಯನ್ನು ಕೊಂದಿದ್ದಾರೆ. ಬಳಿಕ ತಮಗೆ ತಾವೇ ಗುಂಡಿಕ್ಕಿಕೊಂದಿದ್ದಾರೆ. ಈ ಘಟನೆ ವೇಳೆ ಇಬ್ಬರು ಮಕ್ಕಳೂ ಮನೆಯಲ್ಲೇ ಇದ್ದರು. ಗುಂಡಿನ ಸದ್ದು ಕೇಳಿ ಅವರಿಬ್ಬರೂ ಕೋಣೆಯೊಳಕ್ಕೆ ಧಾವಿಸಿದಾಗ, ಅಮ್ಮನ ಮೃತದೇಹ ಹಾಸಿಗೆಯಲ್ಲಿ ಬಿದ್ದಿದ್ದರೆ, ಅಪ್ಪನ ಮೃತದೇಹ ನೆಲದಲ್ಲಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅಷ್ಟರಲ್ಲೇ ಇಬ್ಬರೂ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಕೊಠಡಿಯಲ್ಲಿ ಆತ್ಮಹತ್ಯಾ ಪತ್ರ ದೊರೆತಿದೆ. ಅದರಲ್ಲಿ, “ನಾನು ಕ್ಯಾನ್ಸರ್ ನಿಂದ ಬಳಲುತ್ತಿದ್ದೇನೆ. ಈ ವಿಚಾರ ನನ್ನ ಕುಟುಂಬಕ್ಕೆ ಗೊತ್ತಿಲ್ಲ. ನಾನು ಬದುಕುವುದು ಗ್ಯಾರಂಟಿ ಇಲ್ಲ. ಚಿಕಿತ್ಸೆಗಾಗಿ ಹಣ ವ್ಯರ್ಥ ಮಾಡುವುದು ನನಗೆ ಇಷ್ಟವಿಲ್ಲ. ನಾನು ಮತ್ತು ಪತ್ನಿ ಯಾವತ್ತೂ ಒಂದಾಗಿಯೇ ಬಾಳಬೇಕೆಂದು ನಿರ್ಧರಿಸಿದ್ದೆವು. ಹೀಗಾಗಿ ಅವಳನ್ನೂ ನನ್ನ ಜೊತೆಗೆ ಕರೆದೊಯ್ಯುತ್ತಿದ್ದೇನೆ. ಇದು ನನ್ನ ನಿರ್ಧಾರವಾಗಿದೆ. ನನ್ನ ಈ ಕೃತ್ಯಕ್ಕೆ ಯಾರೂ ಕಾರಣರಲ್ಲ. ವಿಶೇಷವಾಗಿ ನನ್ನ ಮಕ್ಕಳನ್ನೂ ಯಾರೂ ದೂಷಿಸಬೇಡಿ” ಎಂದು ಬರೆದಿದ್ದಾರೆ.
ಪೊಲೀಸರು ಅಲ್ಲಿದ್ದ ರಿವಾಲ್ವರ್ ಅನ್ನು ವಶಕ್ಕೆ ಪಡೆದಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದಾರೆ. ಘಟನೆ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಪೂನಂ ಮಿಶ್ರಾ ಹೇಳಿದ್ದಾರೆ.