ಧಾರವಾಡ : ಶಾಲಾ ಶೌಚಾಲಯವನ್ನು ಶುಚಿಯಾಗಿಟ್ಟು ಸದ್ಬಳಕೆ ಮಾಡಲು ಎಲ್ಲರೂ ಕಾಳಜಿವಹಿಸಬೇಕೆಂದು ರೋಟರಿ ಕ್ಲಬ್ ಧಾರವಾಡ ಹೆರಿಟೇಜ್ ಅಧ್ಯಕ್ಷ ಪುಂಡಲೀಕ ಜಗದಾಳೆ ಕರೆ ನೀಡಿದರು.
ಅವರು ನಗರದ ಡಾ.ವಾಯ್.ಎನ್.ಇರಕಲ್ಲ ಎಜ್ಯುಕೇಷನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್, ಶ್ರೀಯಾ ಕಾಲೇಜು, ಅಮೇರಿಕೆಯ ಕರ್ಮ ಫೌಂಡೇಷನ್ ಹಾಗೂ ರೋಟರಿ ಕ್ಲಬ್ ಮಿಯಾಮಿ ಏರ್ಪೋರ್ಟ ಜಂಟಿ ಆರ್ಥಿಕ ನೆರವಿನೊಂದಿಗೆ ತಾಲೂಕಿನ ಅಮ್ಮಿನಬಾವಿ ಗ್ರಾಮದ ಸುಶಿಲಾತಾಯಿ ಹಿರೇಮಠ ಕನ್ನಡ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ಶೌಚಾಲಯ ಕಟ್ಟಡ ಲೋಕಾರ್ಪಣೆಗೊಳಿಸಿ ಮಾತನಾಡುತ್ತಿದ್ದರು. ಡಾ.ವಾಯ್.ಎನ್.ಇರಕಲ್ಲ ಶಿಕ್ಷಣ ಟ್ರಸ್ಟ್ ವಿಶೇಷವಾಗಿ ಹಳ್ಳಿಗಾಡಿನ ಶಾಲಾಭಿವೃದ್ಧಿಗೆ ಹಲವಾರು ಸೇವಾ ಕೊಡುಗೆಗಳನ್ನು ನೀಡಿದೆ ಎಂದರು.
ಹಿರಿಯ ಸಾಮಾಜಿಕ ಕಾರ್ಯಕರ್ತೆ ವಿಜಯಲಕ್ಷ್ಮಿ ಗುಣಮುಖಿ ಮಾತನಾಡಿ, ಅಮೇರಿಕೆಯ ಮಿಯಾಮಿ ಏರ್ಪೋರ್ಟ ರೋಟರಿ ಕ್ಲಬ್ ಮಾಜಿ ಅಧ್ಯಕ್ಷೆ ದರ್ಶನಾ ಗುಣಮುಖಿ, ಕರ್ಮ ಫೌಂಡೇಷನ್ ಸದಸ್ಯ ಡಾ. ಸಮೀರ ಕುಲಕರ್ಣಿ, ಶ್ರೀಯಾ ಕಾಲೇಜು ನಿರ್ದೇಶಕ ಡಾ. ಸತೀಶ ಇರಕಲ್ಲ ಹಾಗೂ ಡಾ. ವಾಣಿ ಇರಕಲ್ಲ ಅವರ ಮುಕ್ತ ಸೇವಾ ಸಹಕಾರದಿಂದ ಈ ಶೌಚಾಲಯ ನಿರ್ಮಾಣ ಸಾಧ್ಯವಾಯಿತು ಎಂದರು.
ರೋಟರಿ ಕ್ಲಬ್ ಧಾರವಾಡ ಹೆರಿಟೇಜ್ ಕಾರ್ಯದರ್ಶಿ ಶಿವಾಜಿ ಸೂರ್ಯವಂಶಿ ಮಾತನಾಡಿ, ಪೋಲಿಯೋ ಮುಕ್ತ ಭಾರತ ನಿರ್ಮಾಣ ಕೈಂಕರ್ಯದಲ್ಲಿ ಇಡೀ ರಾಷ್ಟ್ರದ ಚಿಣ್ಣರಿಗೆ ಪೋಲಿಯೋ ನಿವಾರಣ ಹನಿಗಳ ಔಷಧಿಯನ್ನು ರೋಟರಿ ಕ್ಲಬ್ ಒದಗಿಸಿದ್ದು ಚಾರಿತ್ರಿಕ ದಾಖಲೆಯಾಗಿದೆ ಎಂದರು.
ಮಂಡಿಹಾಳ ಗ್ರಾ.ಪಂ. ಅಧ್ಯಕ್ಷ ವಿಶಾಲ ಕಾನೇವಾಲೆ, ಹಿರಿಯ ಲೇಖಕ ಗುರುಮೂರ್ತಿ ಯರಗಂಬಳಿಮಠ, ಟೆರಾಬಿಲ್ಡ್ ಇಂಡಿಯಾದ ಸಿವ್ಹಿಲ್ ಎಂಜನೀಯರ್ ಕಿರಣ ಮಲಜಿ, ಜೈನಸಮಾಜ ಟ್ರಸ್ಟ್ ಅಧ್ಯಕ್ಷ ಟಿ.ಎಂ. ದೇಸಾಯಿ, ಶಾಲಾ ಮುಖ್ಯಾಧ್ಯಾಪಕಿ ಮಹಾದೇವಿ ದೊಡ್ಡಮನಿ ಇದ್ದರು. ಎಂ.ಎನ್. ಆಲದಕಟ್ಟಿ ಸ್ವಾಗತಿಸಿದರು. ಎಂ. ಆಂಜನೇಯ ವಂದಿಸಿದರು.