ಕೋಲಾರ: ದೇಗುಲಕ್ಕೆ ಬಂದಿದ್ದ ಬಾಲಕ ಪುಷ್ಕರಣಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಕುರುಡುಮಲೆ ದೇಗುಲದ ಬಳಿ ಈ ಘಟನೆ ನಡೆದಿದೆ. ಕುರುಡುಮಲೆ ವಿನಾಯಕನ ದರ್ಶನ ಪಡೆದು ನಂತರ ಕಲ್ಯಾಣಿಯಲ್ಲಿ ಬಾಲಕ ಮುಳುಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಚಿತ್ರದುರ್ಗ ಜಿಲ್ಲೆಯ ಮುಳ್ಳಾಲಕೆರೆ ತಾಲಕಟ್ಟ ಗ್ರಾಮದ ಬಾಲಕ ಸಾವನ್ನಪ್ಪಿರುವ ದುರ್ದೈವಿ.
ಮಂಜುನಾಥ್ ಎಂಬುವವರ ಪುತ್ರ 9 ವರ್ಷದ ಕುಶಾಲ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಪಾಲಕರೊಂದಿಗೆ ಬಾಲಕ ದೇವಾಲಯಕ್ಕೆ ಬಂದಿದ್ದ. ವಿನಾಯಕನ ದರ್ಶನ ಪಡೆದು ಆಟವಾಡುವ ವೇಳೆ ಕಲ್ಯಾಣಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಈ ಕುರಿತು ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.