ಆಪರೇಷನ್ ಸಿಂಧೂರ….ನಿಜಕ್ಕೂ ಪಾಕಿಸ್ತಾನದೊಳಗೆ ನುಗ್ಗಿ ಒಬ್ಬೊಬ್ಬರನ್ನೇ ಟಾರ್ಗೆಟ್ ಮಾಡಿ ಚೆಂಡಾಡಿದ ಪ್ರತಿ ಯೋಧನ ರಕ್ತ ಕುದಿಯುವಂತೆ ಮಾಡಿದ್ದು ಇದೊಂದು ಹೆಸರು. ತಮ್ಮ ಸಹೋದರರಿಯರ ಹಣೆಯ ಸಿಂಧೂರವನ್ನು ಅಳಿಸಿ ರಣಕೇಕೆ ಹಾಕಿದವರ ಸಂಹಾರ ಮಾಡಿ ವೀರವನಿತೆಯರ ಮುಡಿಗೆ ಭಾರತೀಯ ಸೇನೆ ರಕ್ತ ತಿಲಕವನ್ನು ಇಟ್ಟಿದೆ. ಮಾಂಗಲ್ಯ ಸೌಭಾಗ್ಯವನ್ನೇ ಕಸಿದವರ ರುಂಡ ಚೆಂಡಾಡಿದ ಭಾರತದ ಹೆಮ್ಮೆಯ ವೀರರು ತಮ್ಮ ಮನೆ ಮಗಳಿಗೆ ಪಾರ್ವತಿ ಸಿಂಧೂರ ನೀಡಿದ್ದಾರೆ.
ಮೋದಿ ಅಂತರಂಗವೇ ಈ ಆಪರೇಷನ್ ಸಿಂಧೂರ
ಪಹಲ್ಗಾಮ್ ನಲ್ಲಿ 26 ಅಮಾಯಕ ಪ್ರವಾಸಿಗರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ವಾರದ ಹಿಂದಷ್ಟೇ ಸಪ್ತಪದಿ ತುಳಿದಿದ್ದ ಹಿಮಾಂಶಿ ನರ್ವಾಲ್ ತಮ್ಮ ಪತಿ ನೌಕಾಪಡೆಯ ಲೆಫ್ಟಿನೆಂಟ್ ವಿನಯ್ ನರ್ವಾಲ್ ರನ್ನು ಕಳೆದುಕೊಂಡಿದ್ರು. ಇದೊಂದು ಘಟನೆ ನಿಜಕ್ಕೂ ಪ್ರಧಾನಿ ಮೋದಿಯ ರಕ್ತ ಕುದಿಯುವಂತೆ ಮಾಡಿತ್ತು. ಸೇನೆಯ ಮೂರು ವಿಭಾಗಗಳ ಮುಖ್ಯಸ್ಥರೊಟ್ಟಿಗೆ ಚರ್ಚಿಸಿದ್ದ ಪ್ರಧಾನಿ ಅಂದೇ ನಮ್ಮ ಹೆಣ್ಣುಮಕ್ಕಳ ಸಿಂಧೂರ ಅಳಿಸಿದವರ ಸಂಹಾರ ಆಗಲೇ ಬೇಕು ಎಂದಿದ್ದರು.
ಹಿಂದೂ ಸಂಪ್ರದಾಯದಂತೆ ಸುಮಂಗಲಿಯರ ಆತ್ಮಗೌರವ ಈ ಸಿಂಧೂರ. ಈ ಸಿಂಧೂರವನ್ನೇ ಕಸಿದವರ ಸರ್ವನಾಶ ಬಲಿದಾನ ನೀಡಿದ ವೀರಾಗ್ರಣಿಯರ ಹೆಸರಿನಲ್ಲೇ ಆಗಬೇಕು ಅನ್ನೋ ಕಂಕಣತೊಡಲಾಗಿತ್ತು. ಹೀಗಾಗಿಯೇ ಇದಕ್ಕೆ ಆಪರೇಷನ್ ಸಿಂಧೂರ ಎಂದು ನಾಮಕರಣ ಮಾಡೋಣ ಎಂದಿದ್ರು ಮೋದಿ. ಶಿವನ ಮಡದಿ ಪಾರ್ವತಿಯ ಸಂಕೇತವಾಗಿ ಎಲ್ಲ ಗೃಹಿಣಿಯರು ಸಿಂಧೂರ ಹಚ್ಚಿಕೊಳ್ಳೋ ಸಂಪ್ರದಾಯವಿದೆ. ಹೀಗಾಗಿ ತಾಂಡವ ಶಿವನ ಪತ್ನಿಯ ಗೌರವವನ್ನೇ ಕಸಿದವರ ಸಂಹಾರವಾಗಬೇಕಿದ್ರೆ ಅದಕ್ಕೆ ಸಿಂಧೂರವೇ ಸೂಕ್ತ ಅನ್ನೋ ನಿರ್ಧಾರಕ್ಕೆ ಬರಲಾಗಿತ್ತು.
ಸಮರಾಂಗಣಕ್ಕಿಳಿಯುವ ಮುನ್ನ ಪ್ರತಿಯೋಧನ ಹಣೆಗೆ ವೀರ ತಿಲಕ
ಯಾವ ಸಿಂಧೂರವನ್ನೇ ಪಾಪಿಗಳು ಬಲಿ ಪಡೆದಿದ್ರೋ ಅದೇ ಸಿಂಧೂರವನ್ನೇ ಅಸ್ತ್ರವಾಗಿಸಿತ್ತು ಭಾರತ. ಧರ್ಮ ಕೇಳಿ ಉಸಿರು ಕಿತ್ತ ನರರಾಕ್ಷಸರನ್ನು ಅದೇ ಹಿಂದೂ ಧರ್ಮದ ಪವಿತ್ರ ನಂಬಿಕೆ ಸಿಂಧೂರದ ಹೆಸರಲ್ಲಿ ಸಮಾಧಿ ಮಾಡೋ ಸಂಕಲ್ಪ ಮಾಡಿತ್ತು. ಅಂದು ಶಿವಾಜಿ ಸಾರಥ್ಯದ ಮರಾಠ ಸೇನಾನಿಗಳು ಮೊಘಲರ ಹುಟ್ಟಡಗಿಸಲು ಹೊರಟಾಗಲೂ ಪ್ರತಿ ಯೋಧನೂ ಹೆಮ್ಮೆಯಿಂದ ವೀರ ತಿಲಕ ಹಚ್ಚಿಕೊಂಡೇ ರಣಭೂಮಿಗಿಳಿದಿದ್ದ.
ಅದೇ ಮಾದರಿಯಲ್ಲೇ ಜಿಹಾದಿಗಳನ್ನು ಹೆಣವಾಗಿಸಲು ಹೊರಟಿದ್ದ ಭಾರತೀಯ ಸೇನೆ, ವಾಯು ಸೇನೆ, ನೌಕಾ ಪಡೆಯ ಪ್ರತಿಯೊಬ್ಬ ಯೋಧನೂ ಅಖಾಡಕ್ಕಿಳಿಯುವ ಮುನ್ನ ಹಣೆಗೆ ವೀರ ತಿಲಕವನ್ನು ಇಟ್ಟುಕೊಂಡಿದ್ರು. ಪಹಲ್ಗಾಮ್ ನಲ್ಲಿ ಬಲಿಯಾದ ಪ್ರತಿಯೊಬ್ಬರ ತ್ಯಾಗಕ್ಕೆ ನ್ಯಾಯ ಕೊಡಿಸುವ ಸಂಕಲ್ಪ ಮಾಡಿದ್ದ ಯೋಧರು ಸಿಂಧೂರ ಸಾಕ್ಷಿಯಾಗಿ ಶತ್ರು ಸಂಹಾರದ ಕಂಕಣತೊಟ್ಟು ಕಾರ್ಯ ಸಾಧುವಾಗಿಸಿದ್ದಾರೆ. ಈ ಮೂಲಕ ಹಿಂದೂಸ್ತಾನದ ಚರಿತ್ರೆಯಲ್ಲಿ ಭಾರತೀಯ ಸೇನೆಯ ಈ ಸಿಂಧೂರ ಪರ್ವ ಎಂದೆಂದಿಗೂ ಅಮರವಾಗಿ ಉಳಿಯಲಿದೆ.