ನವದೆಹಲಿ: ಪಾಕಿಸ್ತಾನದ ಉಗ್ರರ ವಿರುದ್ಧ ಭಾರತ ನಡೆಸಿದ ‘ಆಪರೇಷನ್ ಸಿಂದೂರ’ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದ ಕರ್ನಲ್ ಸೋಫಿಯಾ ಖುರೇಷಿ(Colonel Sofiya Qureshi) ಅವರನ್ನು “ಪಾಕ್ ಉಗ್ರರ ಸಹೋದರಿ” ಎಂದು ಕರೆದಿದ್ದ ಮಧ್ಯಪ್ರದೇಶದ ಸಚಿವ ಕುನ್ವರ್ ವಿಜಯ್ ಶಾ ಅವರಿಗೆ ಬಿಜೆಪಿ ಸಮನ್ಸ್ ನೀಡಿದೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಸಚಿವ ಕುನ್ವರ್ ವಿಜಯ್ ಶಾ ಅವರು, “ನಮ್ಮ ದೇಶದ ಪುತ್ರಿಯರ ಸಿಂಧೂರವನ್ನು ಅಳಿಸಿದ ಪಾಕಿಸ್ತಾನದ ಉಗ್ರರಿಗೆ ಪಾಠ ಕಲಿಸಲು ಪ್ರಧಾನಿ ಮೋದಿಯವರು ಅವರ ಸಹೋದರಿಯನ್ನೇ ಕಳುಹಿಸಿದ್ದರು” ಎಂದು ಹೇಳಿದ್ದರು.
ವಿವಾದಾತ್ಮಕ ಹೇಳಿಕೆ:
ಮೇ 12 ರಂದು ಇಂದೋರ್ ಸಮೀಪದ ರಾಮಕುಂಡ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ವಿಜಯ್ ಶಾ, ‘ಆಪರೇಷನ್ ಸಿಂದೂರ’ ಕಾರ್ಯಾಚರಣೆ ಬಗ್ಗೆ ಮಾತನಾಡುವಾಗ ಕರ್ನಲ್ ಸೋಫಿಯಾ ಖುರೇಶಿ ಅವರನ್ನು “ಭಯೋತ್ಪಾದಕರ ಸಹೋದರಿ” ಎಂದು ಸಂಬೋಧಿಸಿದ್ದರು. “ಪಹಲ್ಗಾಮ್ ದಾಳಿಯಲ್ಲಿ ನಮ್ಮ ಸಹೋದರಿಯರ ಸಿಂಧೂರವನ್ನು ಅಳಿಸಿದ ಭಯೋತ್ಪಾದಕರ ವಿರುದ್ಧ ಪ್ರತೀಕಾರವಾಗಿ, ಪ್ರಧಾನಿ ಮೋದಿ ಅವರು ಅವರ ಸಮುದಾಯದ ಸಹೋದರಿಯನ್ನು (ಸೋಫಿಯಾ ಖುರೇಶಿ) ಸೇನೆಯ ವಿಮಾನದಲ್ಲಿ ಕಳುಹಿಸಿ, ಭಯೋತ್ಪಾದಕರ ಮನೆಯಲ್ಲಿ ದಾಳಿ ಮಾಡಿಸಿದರು” ಎಂದು ಹೇಳಿದ್ದರು. ಈ ಹೇಳಿಕೆಯು ಸೋಫಿಯಾ ಖುರೇಶಿ ಅವರನ್ನು ಭಯೋತ್ಪಾದಕರೊಂದಿಗೆ ಜೋಡಿಸುವಂತಿತ್ತು.
ವಜಾಗೆ ಕಾಂಗ್ರೆಸ್ ಆಗ್ರಹ:
ಈ ಹೇಳಿಕೆಗೆ ಕಾಂಗ್ರೆಸ್ ಪಕ್ಷದಿಂದ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಸಚಿವರನ್ನು ಕೂಡಲೇ ಹುದ್ದೆಯಿಂದ ವಜಾಗೊಳಿಸುವಂತೆ ಬಿಜೆಪಿಯನ್ನು ಆಗ್ರಹಿಸಿದೆ. ಕುನ್ವರ್ ವಿಜಯ್ ಶಾ ಅವರು ಸೇನಾ ಹಿನ್ನೆಲೆಯ ಕುಟುಂಬಕ್ಕೆ ಸೇರಿದವರಾಗಿದ್ದು, ಅವರಿಂದ ಈ ರೀತಿಯ ಹೇಳಿಕೆ ಬಂದಿರುವುದು ದುರದೃಷ್ಟಕರ ಎಂದು ಕಾಂಗ್ರೆಸ್ ಹೇಳಿದೆ. ಅಲ್ಲದೇ, ಅವರ ಹೇಳಿಕೆಯು ಮಹಿಳೆಯರಿಗೆ ಮತ್ತು ಸಶಸ್ತ್ರ ಪಡೆಗಳಿಗೆ ಮಾಡಿದ ಅವಮಾನ ಎಂದಿದೆ. ಸಚಿವರ ವಿವಾದಾತ್ಮಕ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸ್ವಪಕ್ಷೀಯರಿಗೆ ಮುಜುಗರ ತಂದಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಶಾ ಅವರ ಹೇಳಿಕೆಯನ್ನು “ಅವಮಾನಕರ, ನಾಚಿಕೆಗೇಡಿನ ಮತ್ತು ಕೀಳುಮಟ್ಟದ ಹೇಳಿಕೆ” ಎಂದು ಖಂಡಿಸಿದ್ದಾರೆ. “ಪಹಲ್ಗಾಮ್ ಭಯೋತ್ಪಾದಕರು ದೇಶವನ್ನು ವಿಭಜಿಸಲು ಬಯಸಿದ್ದರು, ಆದರೆ ‘ಆಪರೇಷನ್ ಸಿಂದೂರ’ ಸಮಯದಲ್ಲಿ ಇಡೀ ದೇಶ ಒಗ್ಗಟ್ಟಾಗಿ ಭಯೋತ್ಪಾದಕರಿಗೆ ತಕ್ಕ ಪ್ರತೀಕಾರ ನೀಡಿತು. ಆದರೆ ಬಿಜೆಪಿ ಸರ್ಕಾರದ ಸಚಿವರೊಬ್ಬರು ನಮ್ಮ ಧೀರ ಮಗಳು ಕರ್ನಲ್ ಸೋಫಿಯಾ ಖುರೇಶಿ ಅವರ ಬಗ್ಗೆ ಇಂತಹ ಕೀಳು ಹೇಳಿಕೆ ನೀಡಿದ್ದಾರೆ” ಎಂದು ಖರ್ಗೆ ಟ್ವೀಟ್ ಮಾಡಿದ್ದಾರೆ. ಬಿಜೆಪಿ ಮತ್ತು ಆರ್ಎಸ್ಎಸ್ ಮಹಿಳಾ ವಿರೋಧಿ ಮನೋಭಾವ ಹೊಂದಿರುವುದು ಇದರಿಂದ ಖಾತ್ರಿಯಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಜಿತು ಪಟ್ವಾರಿ ಅವರು ಶಾ ಅವರ ವೀಡಿಯೊವನ್ನು ಎಕ್ಸ್ನಲ್ಲಿ ಹಂಚಿಕೊಂಡು, ಬಿಜೆಪಿ ಈ “ಕೀಳು ಚಿಂತನೆ”ಯನ್ನು ಸಮರ್ಥಿಸುತ್ತದೆಯೇ ಎಂದು ಪ್ರಶ್ನಿಸಿದ್ದಾರೆ. “ಮೊದಲು ಪಹಲ್ಗಾಮ್ನಲ್ಲಿ ಹುತಾತ್ಮರಾದ ನೌಕಾಪಡೆ ಅಧಿಕಾರಿಯ ಪತ್ನಿಯನ್ನು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಲಾಯಿತು, ನಂತರ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅವರ ಮಗಳಿಗೆ ಕಿರುಕುಳ ನೀಡಲಾಯಿತು, ಈಗ ಬಿಜೆಪಿ ಸಚಿವರು ನಮ್ಮ ಧೀರ ಮಹಿಳೆ ಸೋಫಿಯಾ ಖುರೇಷಿ ಅವರ ಬಗ್ಗೆ ಅಸಭ್ಯ ಹೇಳಿಕೆ ನೀಡುತ್ತಿದ್ದಾರೆ” ಎಂದು ಖರ್ಗೆ ಹೇಳಿದ್ದಾರೆ.
ಕ್ಷಮೆಯಾಚಿಸಿದ ಸಚಿವ
ತಮ್ಮ ಹೇಳಿಕೆಗೆ ತೀವ್ರ ಟೀಕೆ ವ್ಯಕ್ತವಾದ ಬಳಿಕ, ವಿಜಯ್ ಶಾ ಪತ್ರಕರ್ತರೊಂದಿಗೆ ಮಾತನಾಡಿ ಕ್ಷಮೆಯಾಚಿಸಿದರು. “ನಾನು ದೇವರಲ್ಲ, ಮಾನವ. ಪಹಲ್ಗಾಮ್ ದಾಳಿಯ ಬಗ್ಗೆ ಮನಸ್ಸು ತುಂಬಾ ಕ್ಷುಬ್ಧವಾಗಿತ್ತು. ನನ್ನ ಕುಟುಂಬದಲ್ಲಿ ಅನೇಕರು ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ ಮತ್ತು ಕೆಲವರು ಹುತಾತ್ಮರಾಗಿದ್ದಾರೆ. ಕರ್ನಲ್ ಸೋಫಿಯಾ ಖುರೇಶಿ ಅವರು ಜಾತಿ ಮತ್ತು ಧರ್ಮದ ಮೇಲೆ ಎತ್ತರಕ್ಕೆ ಏರಿ ದೇಶಕ್ಕೆ ಕೀರ್ತಿ ತಂದಿದ್ದಾರೆ. ಅವರಿಗೆ ನನ್ನ ಸಹೋದರಿಗಿಂತ ಹೆಚ್ಚಿನ ಗೌರವವಿದೆ. ನನ್ನ ಮಾತುಗಳಿಂದ ಸಮಾಜ ಅಥವಾ ಧರ್ಮಕ್ಕೆ ನೋವಾಗಿದ್ದರೆ, ನಾನು ಹತ್ತು ಬಾರಿ ಕ್ಷಮೆಯಾಚಿಸುತ್ತೇನೆ” ಎಂದು ಅವರು ಹೇಳಿದರು.
ಪಕ್ಷದಿಂದ ಎಚ್ಚರಿಕೆ
ವಿವಾದದ ಬಳಿಕ, ಬಿಜೆಪಿಯ ಮಧ್ಯಪ್ರದೇಶ ಪ್ರಧಾನ ಕಾರ್ಯದರ್ಶಿ ಹಿತಾನಂದ ಶರ್ಮಾ ಅವರು ವಿಜಯ್ ಶಾ ಅವರನ್ನು ಭೋಪಾಲ್ನ ರಾಜ್ಯ ಕೇಂದ್ರ ಕಚೇರಿಗೆ ಕರೆಸಿಕೊಳ್ಳಲಾಗಿದೆ. ಶರ್ಮಾ ಅವರು ಸಚಿವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎಂದೂ ಮೂಲಗಳು ತಿಳಿಸಿವೆ. ಶಾ ಅವರು ಬಿಜೆಪಿ ರಾಜ್ಯಾಧ್ಯಕ್ಷ ವಿಷ್ಣು ದತ್ ಶರ್ಮಾ ಅವರನ್ನೂ ಭೇಟಿಯಾಗಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ಶಾ ಅವರ ಬಂಗಲೆಯ ಮುಂಭಾಗದ ನಾಮಫಲಕಕ್ಕೆ ಕಪ್ಪು ಬಣ್ಣ ಬಳಿದು, ರಾಜೀನಾಮೆಗೆ ಒತ್ತಾಯಿಸಿದ್ದಾರೆ.
ಯಾರಿವರು ಖುರೇಷಿ?
ಕರ್ನಲ್ ಸೋಫಿಯಾ ಖುರೇಷಿ ಅವರು ಸೇನಾ ಹಿನ್ನೆಲೆಯ ಕುಟುಂಬದಿಂದ ಬಂದವರಾಗಿದ್ದು, ಅವರ ತಾತ ಮತ್ತು ತಂದೆ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ. 2016ರಲ್ಲಿ ಪುಣೆಯಲ್ಲಿ ನಡೆದ ಬಹುರಾಷ್ಟ್ರೀಯ ಮಿಲಿಟರಿ ಕವಾಯತಿನಲ್ಲಿ ಭಾರತೀಯ ಸೇನಾ ತುಕಡಿಯನ್ನು ಮುನ್ನಡೆಸಿದ ಮೊದಲ ಮಹಿಳಾ ಅಧಿಕಾರಿ ಎಂಬ ಹೆಗ್ಗಳಿಕೆಯೂ ಕ.ಸೋಫಿಯಾ ಅವರಿಗಿದೆ. ಪ್ರಸ್ತುತ ಅವರು ಮಿಲಿಟರಿ ಸಂವಹನಗಳನ್ನು ನಿರ್ವಹಿಸುವ ಸಿಗ್ನಲ್ಸ್ ವಿಭಾಗದ ಅಧಿಕಾರಿಯಾಗಿದ್ದಾರೆ. 2020ರಲ್ಲಿ ಸೇನೆಯ ಉನ್ನತ ಹುದ್ದೆಗಳಲ್ಲಿ ಲಿಂಗ ಸಮಾನತೆಯ ಬಗ್ಗೆ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್, ಖುರೇಷಿ ಅವರ ಸಾಧನೆಯನ್ನು ಶ್ಲಾಘಿಸಿತ್ತು. 2006ರಲ್ಲಿ ಕಾಂಗೋದಲ್ಲಿ ನಡೆದ ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆಯಲ್ಲಿಯೂ ಖುರೇಷಿ ಭಾಗವಹಿಸಿದ್ದರು.
ಇತ್ತೀಚೆಗೆ ನಡೆದ ಆಪರೇಷನ್ ಸಿಂದೂರದ ಬಗ್ಗೆ ಹಾಗೂ ಭಾರತ-ಪಾಕಿಸ್ತಾನದ ನಡುವೆ ಸಂಘರ್ಷ ತೀವ್ರಗೊಂಡಿದ್ದ ಸಂದರ್ಭದಲ್ಲಿ ನಡೆದ ಸುದ್ದಿಗೋಷ್ಠಿಯ ವೇಳೆ ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ರಿ ಅವರಿಗೆ ಕರ್ನಲ್ ಸೋಫಿಯಾ ಖುರೇಷಿ ಹಾಗೂ ಮತ್ತೊಬ್ಬ ಮಹಿಳಾ ಅಧಿಕಾರಿ ವ್ಯೋಮಿಕಾ ಸಿಂಗ್ ಸಾಥ್ ಕೊಟ್ಟಿದ್ದರು.