ಬೆಂಗಳೂರು : ಬಿಹಾರದ 14 ವರ್ಷದ ಕ್ರಿಕೆಟ್ ಪ್ರತಿಭೆ ವೈಭವ್ ಸೂರ್ಯವಂಶಿ, ಐಪಿಎಲ್ 2025ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಪರವಾಗಿ ಗುಜರಾತ್ ಟೈಟಾನ್ಸ್ ವಿರುದ್ಧ ಕೇವಲ 35 ಎಸೆತಗಳಲ್ಲಿ ಶತಕ ಬಾರಿಸಿ ಇತಿಹಾಸ ನಿರ್ಮಿಸಿದ್ದಾರೆ. ಈ ಅಸಾಧಾರಣ ಸಾಧನೆಗೆ ಮೆಚ್ಚಿದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ವೈಭವ್ಗೆ 10 ಲಕ್ಷ ರೂಪಾಯಿಗಳ ನಗದು ಬಹುಮಾನ ಘೋಷಿಸಿದ್ದಾರೆ.
ಈ ಶತಕ 11 ಸಿಕ್ಸರ್ ಹಾಗೂ ಮತ್ತು 7 ಬೌಂಡರಿಗಳು ಸೇರಿದ್ದವು. 38 ಎಸೆತಗಳಲ್ಲಿ 101 ರನ್ ಗಳಿಸಿದ ವೈಭವ್, ಟಿ20 ಕ್ರಿಕೆಟ್ ಇತಿಹಾಸದಲ್ಲಿ ಶತಕ ಬಾರಿಸಿದ ಅತೀ ಕಿರಿಯ ಆಟಗಾರ ಎಂಬ ದಾಖಲೆ ಬರೆದಿದ್ದಾರೆ. ಈ ಶತಕವು ಐಪಿಎಲ್ ಇತಿಹಾಸದ ಎರಡನೇ ವೇಗದ ಶತಕವಾಗಿದ್ದು, ಕ್ರಿಸ್ ಗೇಲ್ರ 30 ಎಸೆತಗಳ ಶತಕದ ನಂತರದ ಸ್ಥಾನವನ್ನು ಪಡೆದಿದೆ.
ನಿತೀಶ್ ಕುಮಾರ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ, “ಐಪಿಎಲ್ ಇತಿಹಾಸದಲ್ಲಿ ಅತೀ ಕಿರಿಯ ವಯಸ್ಸಿನಲ್ಲಿ (14 ವರ್ಷ) ಶತಕ ಬಾರಿಸಿದ ಬಿಹಾರದ ವೈಭವ್ ಸೂರ್ಯವಂಶಿಯವರಿಗೆ ಅಭಿನಂದನೆಗಳು ಮತ್ತು ಶುಭಾಶಯಗಳು. ತಮ್ಮ ಕಠಿಣ ಪರಿಶ್ರಮ ಮತ್ತು ಪ್ರತಿಭೆಯಿಂದ ಭಾರತೀಯ ಕ್ರಿಕೆಟ್ಗೆ ಹೊಸ ಆಶಾಕಿರಣ. ಎಲ್ಲರಿಗೂ ಅವರ ಬಗ್ಗೆ ಹೆಮ್ಮೆ ಇದೆ,” ಎಂದು ಬರೆದಿದ್ದಾರೆ.
ವೈಭವ್ ಕುಟುಂಬವನ್ನು ಭೇಟಿಯಾಗಿದ್ದ ನಿತೀಶ್
ವೈಭವ್ ಅವರ ಈ ಸಾಧನೆಯನ್ನು ಗುರುತಿಸಿ, ನಿತೀಶ್ ಕುಮಾರ್ ಅವರು 2024ರಲ್ಲಿ ವೈಭವ್ ಮತ್ತು ಅವರ ತಂದೆಯವರನ್ನು ಭೇಟಿಯಾಗಿದ್ದರು ಎಂದು ತಿಳಿಸಿದ್ದಾರೆ. ಆ ಸಂದರ್ಭದಲ್ಲಿ ಅವರು ವೈಭವ್ಗೆ ಉಜ್ವಲ ಭವಿಷ್ಯಕ್ಕೆ ಹಾರೈಸಿದ್ದರು. ಐಪಿಎಲ್ನಲ್ಲಿ ಅವರ ಅದ್ಭುತ ಪ್ರದರ್ಶನದ ನಂತರ, ನಿತೀಶ್ ಅವರು ಫೋನ್ ಮೂಲಕ ವೈಭವ್ಗೆ ಅಭಿನಂದನೆ ಸಲ್ಲಿಸಿದ್ದಾರೆ. “ವೈಭವ್ ಸೂರ್ಯವಂಶಿಯವರು ಭವಿಷ್ಯದಲ್ಲಿ ಭಾರತ ತಂಡಕ್ಕಾಗಿ ಹೊಸ ದಾಖಲೆಗಳನ್ನು ಸೃಷ್ಟಿಸಿ ದೇಶಕ್ಕೆ ಕೀರ್ತಿ ತರಲಿ,” ಎಂದು ಅವರು ಶುಭ ಹಾರೈಸಿದ್ದಾರೆ.
ವೈಭವ್ ಅವರ ಈ ಶತಕವು ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಗುಜರಾತ್ ಟೈಟಾನ್ಸ್ ವಿರುದ್ಧ 210 ರನ್ಗಳ ಗುರಿಯನ್ನು ಕೇವಲ 15.5 ಓವರ್ಗಳಲ್ಲಿ ಚೇಸ್ ಮಾಡಲು ಸಹಾಯ ಮಾಡಿತು. ಈ ಗೆಲುವು ತಂಡದ ಐದು ಪಂದ್ಯಗಳ ಸೋಲಿನ ಸರಣಿಯನ್ನು ಕೊನೆಗೊಳಿಸಿತು. ವೈಭವ್ ಅವರ ಬ್ಯಾಟಿಂಗ್ನಲ್ಲಿ 11 ಸಿಕ್ಸರ್ಗಳು ಮತ್ತು 7 ಬೌಂಡರಿಗಳು ಸೇರಿದ್ದವು, ಆ ಮೂಲಕವೇ 94 ರನ್ಗಳು ಬೌಂಡರಿಗಳಿಂದ ಬಂದವು.
ವೈಭವ್ ಅವರು ಕಳೆದ ವರ್ಷ ಐಪಿಎಲ್ ಹರಾಜಿನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಜತೆ 1.1 ಕೋಟಿ ರೂಪಾಯಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದರು. ಇದು ಐಪಿಎಲ್ ಇತಿಹಾಸದಲ್ಲಿ ಅತೀ ಕಿರಿಯ ಆಟಗಾರನಾಗಿ ಒಪ್ಪಂದ ಪಡೆದ ದಾಖಲೆಯಾಗಿದೆ.
ಸಮಸ್ತಿಪುರದ ಮೋತಿಪುರದಲ್ಲಿ ಜನಿಸಿದ ವೈಭವ್, ಐದು ವರ್ಷದ ವಯಸ್ಸಿನಿಂದಲೇ ಕ್ರಿಕೆಟ್ನಲ್ಲಿ ಆಸಕ್ತಿ ತೋರಿದ್ದರು. ಅವರ ತಂದೆ ಸಂಜೀವ್, ತಮ್ಮ ಮನೆಯಲ್ಲೇ ನೆಟ್ಗಳನ್ನು ಅಳವಡಿಸಿ ಅವರಿಗೆ ತರಬೇತಿ ನೀಡಿದರು. ನಂತರ, ವೈಭವ್ ಸಮಸ್ತಿಪುರದ ಕ್ರಿಕೆಟ್ ಅಕಾಡೆಮಿಯಲ್ಲಿ ತರಬೇತಿ ಪಡೆದರು.
ಈ ಸಾಧನೆಗೆ ಸಚಿವ ಚಿರಾಗ್ ಪಾಸ್ವಾನ್ ಕೂಡ ವೈಭವ್ಗೆ ಶುಭಾಶಯ ಕೋರಿದ್ದಾರೆ. “ಪಕ್ಷದ ಪರವಾಗಿ, ಅವರಿಗೆ ಶುಭವಾಗಲಿ. ಅವರು ಯುವ ಪ್ರತಿಭೆಯಾಗಿದ್ದು, ಇಂತಹ ಕಿರಿಯ ವಯಸ್ಸಿನಲ್ಲಿ ಭವ್ಯ ಆರಂಭ ಮಾಡಿದ್ದಾರೆ. ಅವರ ಭವಿಷ್ಯ ತುಂಬಾ ಉಜ್ವಲವಾಗಿದೆ,” ಎಂದು ಅವರು ಹೇಳಿದ್ದಾರೆ.