ನವದೆಹಲಿ: ಪಹಲ್ಗಾಮ್ ದಾಳಿಯಲ್ಲಿ(Pahalgam attack) 26 ಮಂದಿ ಅಮಾಯಕ ಪ್ರವಾಸಿಗರನ್ನು ಭಯೋತ್ಪಾದಕರು ಗುಂಡಿಟ್ಟು ಕೊಂದ ಬೆನ್ನಲ್ಲೇ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಕಳೆದ ಎರಡು ದಿನಗಳಿಂದ ದೇಶದ ಮೂಲೆ ಮೂಲೆಗಳಲ್ಲೂ ಪ್ರತಿಭಟನೆಗಳು ನಡೆಯುತ್ತಿವೆ.
ಇದೇ ವೇಳೆ, ಪಾಕಿಸ್ತಾನದ ವಿರುದ್ಧ ಕೇಂದ್ರ ಸರ್ಕಾರವೂ ಹಲವು ಕಠಿಣ ಪ್ರತೀಕಾರದ ಕ್ರಮಗಳನ್ನು ಘೋಷಿಸಿದೆ. ಈ ಘೋಷಣೆ ಹೊರಬೀಳುತ್ತಲೇ ಗುರುವಾರ ದೆಹಲಿಯಲ್ಲಿರುವ ಪಾಕಿಸ್ತಾನ ಹೈಕಮಿಷನ್ ಹೊರಗಿನ ಭದ್ರತಾ ಬ್ಯಾರಿಕೇಡ್ಗಳನ್ನು ಪೊಲೀಸರು ತೆಗೆದುಹಾಕಿದ್ದಾರೆ. ಬ್ಯಾರಿಕೇಡ್ಗಳು ತೆರವಾಗುತ್ತಿದ್ದಂತೆಯೇ ಅಲ್ಲಿಗೆ ಪ್ರತಿಭಟನಾಕಾರರು ಮುತ್ತಿಗೆ ಹಾಕಿದ್ದಾರೆ. “ಪಾಕಿಸ್ತಾನ್ ಮುರ್ದಾಬಾದ್” ಘೋಷಣೆಗಳನ್ನು ಕೂಗುತ್ತಾ ಅಲ್ಲಿಗೆ ಪ್ರತಿಭಟನಾಕಾರರು ಧಾವಿಸಿದ್ದು, ಪಾಕಿಸ್ತಾನ ರಾಯಭಾರ ಕಚೇರಿಯ ಹೊರಗೆ ಭಾರೀ ಪ್ರತಿಭಟನೆಗಳು ಭುಗಿಲೆದ್ದಿವೆ.
ಪಹಲ್ಗಾಮ್ ದಾಳಿಯ ನಂತರ ಭಾರತವು ಪಾಕಿಸ್ತಾನದೊಂದಿಗಿನ ರಾಜತಾಂತ್ರಿಕ ಸಂಬಂಧಗಳನ್ನು ಕೆಳದರ್ಜೆಗೆ ಇಳಿಸಿದ ಮಾರನೇ ದಿನವೇ ದೆಹಲಿ ಪೊಲೀಸರು ಪಾಕಿಸ್ತಾನ ಹೈಕಮಿಷನ್ ಹೊರಗಿನ ಬ್ಯಾರಿಕೇಡ್ ಗಳನ್ನು ತೆಗೆದುಹಾಕುವ ಮೂಲಕ ಇನ್ನು ಭಾರತಕ್ಕೂ ಪಾಕಿಸ್ತಾನಕ್ಕೂ ಸಂಬಂಧವಿಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ. ಬುಧವಾರ ನಡೆದ ಭದ್ರತೆ ಕುರಿತು ಸಂಪುಟ ಸಮಿತಿಯ (ಸಿಸಿಎಸ್) ಸಭೆಯಲ್ಲಿ ಮೇ1 ರಿಂದ ಪಾಕಿಸ್ತಾನ ಮತ್ತು ಭಾರತೀಯ ಹೈಕಮಿಷನ್ ಗಳ ಒಟ್ಟಾರೆ ಬಲವನ್ನು 55 ರಿಂದ 30 ಕ್ಕೆ ಇಳಿಸಲಾಗುವುದು ಎಂದು ಘೋಷಿಸಲಾಗಿತ್ತು.
ಅಟ್ಟಾರಿ-ವಾಘಾ ಗಡಿ ತಲುಪಿದ ಪಾಕ್ ನಾಗರಿಕರು
ಭಾರತ ಸರ್ಕಾರವು ವೀಸಾ ಸ್ಥಗಿತಗೊಳಿಸಿ ಪಾಕ್ ನಾಗರಿಕರಿಗೆ ತಮ್ಮ ದೇಶಗಳಿಗೆ ಮರಳಲು ಗಡುವು ವಿಧಿಸಿದ ಬೆನ್ನಲ್ಲೇ ತಮ್ಮ ದೇಶಕ್ಕೆ ಮರಳಲು ಗುರುವಾರ ಪಾಕಿಸ್ತಾನಿ ಪ್ರಜೆಗಳು ಅಟ್ಟಾರಿ-ವಾಘಾ ಗಡಿಯನ್ನು ತಲುಪಿದ್ದಾರೆ. ಬುಧವಾರ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಭಾರತವು ಸಾರ್ಕ್ ವೀಸಾ ವಿನಾಯಿತಿ ಯೋಜನೆಯನ್ನು (ಎಸ್ವಿಇಎಸ್) ಸ್ಥಗಿತಗೊಳಿಸಿತ್ತು. ಇದರ ಬೆನ್ನಲ್ಲೇ ಪಾಕಿಸ್ತಾನಿ ಪ್ರಜೆಗಳು ತಮ್ಮ ದೇಶಕ್ಕೆ ಮರಳಲು ಅಟ್ಟಾರಿ-ವಾಘಾ ಗಡಿಯನ್ನು ತಲುಪಿದ್ದಾರೆ.