ರಾಜ್ಯ ರಾಜಕೀಯದಲ್ಲೀಗ ಕ್ರಾಂತಿಯ ಕಹಳೆ ಮೊಳಗಿದೆ. ಅದರಲ್ಲೂ ಸಿಎಂ ದೆಹಲಿ ಭೇಟಿ ಬೆನ್ನಲ್ಲೇ ಈ ರಾಜಕೀಯ ಗರಿಗೆದರಿರುವುದು ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವ ಸತ್ಯವೀಗ ಬಯಲಾಗಿದೆ.
ಆಗಸ್ಟ್-ಸೆಪ್ಟಂಬರ್ ವೇಳೆಗೆ ದೊಡ್ಡ ಬದಲಾವಣೆ ಆಗಲಿದೆ ಎನ್ನುವ ಸುಳಿವು ನೀಡಿರುವ ಸಚಿವ ಕೆ.ಎನ್. ರಾಜಣ್ಣ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ಸಿದ್ದರಾಮಯ್ಯ ಮೊದಲ ಅವಧಿಯಲ್ಲಿ ಇದ್ದಂತೆ ಈಗಿಲ್ಲ. ಅವರೀಗ ಬದಲಾಗಿದ್ದಾರೆ ಎನ್ನುವ ಮೂಲಕ ಹೊಸ ಬಾಂಬ್ ಸಿಡಿಸಿದ್ದಾರೆ. ಇದಕ್ಕೆ ಮೂಲ ಕಾರಣವನ್ನೂ ವಿವರಿಸಿರುವ ರಾಜಣ್ಣ, ಈ ಹಿಂದೆ ಪಕ್ಷದಲ್ಲಿ ಒಂದೇ ಪವರ್ ಸೆಂಟರ್ ಇತ್ತು. ಆಗ ಎಲ್ಲ ನಿರ್ಧಾರಗಳು, ಕೆಲಸಗಳೂ ಒಬ್ಬರ ತೀರ್ಮಾನದಿಂದಲೇ ಆಗುತ್ತಿತ್ತು. ಆದರೀಗ ಪಕ್ಷದಲ್ಲಿ ಹಲವು ಪವರ್ ಸೆಂಟರ್ ಗಳು ಸೃಷ್ಟಿಯಾಗಿವೆ. ಮುಖ್ಯಮಂತ್ರಿ, ಪಕ್ಷದ ಅಧ್ಯಕ್ಷರು, ಹೈಕಮಾಂಡ್ ಹೀಗೆ ಮೂರಕ್ಕೂ ಹೆಚ್ಚು ಪವರ್ ಸೆಂಟರ್ ಗಳಿದ್ದಾಗ ನಿರ್ಧಾರಗಳು ಸಡಿಲವಾಗುತ್ತವೆ ಅಂತಾ ರಾಜಣ್ಣ ಅಭಿಪ್ರಾಯ ಪಟ್ಚಟಿದ್ದಾರೆ.
ಅಷ್ಟೇ ಅಲ್ಲಾ, ಆಗಸ್ಟ್ ಸೆಪ್ಟಂಬರ್ ನಲ್ಲಿ ಭಾರೀ ಬದಲಾವಣೆ ಆಗಲಿದೆ ಅಂತಾ ಭವಿಷ್ಯ ನುಡಿದಿರುವ ರಾಜಣ್ಣ, ರಾಜ್ಯ ರಾಜಕೀಯದ ದಿಕ್ಕೇ ಬದಲಾಗುತ್ತಾ ಅನ್ನೋ ಕುತೂಹಲ ಹುಟ್ಟಿಸಿದ್ದಾರೆ. ಹಾಗೆ ನೋಡಿದರೆ ಸಿದ್ದರಾಮಯ್ಯರ ಆಪ್ತ ಬಣದಲ್ಲೇ ಗುರುತಿಸಿಕೊಂಡಿರುವ ರಾಜಣ್ಣ ಹೇಳಿಕೆ ಹಿಂದಿನ ಮರ್ಮ ಇನ್ನಷ್ಟೇ ಬಯಲಾಗಬೇಕಿದೆ.