ಬೆಂಗಳೂರು: ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ ಎಂಬ ಮಾತಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಪರಿಭಾಷಿಕರ ಹಾವಳಿ ಹೆಚ್ಚಾಗುತ್ತಿದ್ದು, ಕನ್ನಡಿಗರ ಮೇಲೆ ದರ್ಪ ತೋರುತ್ತಿದ್ದಾರೆ. ಇದೀಗ ಕನ್ನಡಿಗರ ಸ್ವಾಭಿಮಾನ ಕೆಣಕಿದ್ದ ಕೋರಮಂಗಲದ ಹೊಟೇಲ್ ಗೆ ತಕ್ಕ ಶಾಸ್ತಿ ಮಾಡಲಾಗಿದೆ. ಕನ್ನಡಿಗರಿಗೆ ಅಪಮಾನ ಮಾಡಿದ್ದ ಜಿ.ಎಸ್ ಸೂಟ್ ಹೋಟೆಲ್ ಸೀಜ್ ಮಾಡಿ, ಮ್ಯಾನೇಜರ್ ಸರ್ಫಜ್ ಎಂಬಾತನನ್ನು ಪೊಲೀಸರು ಬಂಧಿಸಲಾಗಿದೆ.
ಕನ್ನಡಿಗರು ಹಾಗೂ ಕನ್ನಡಕ್ಕೆ ಅವಮಾನ ಮಾಡಿದ ಹಿನ್ನೆಲೆಯಲ್ಲಿ ಹೋಟೆಲ್ ಮಾಲೀಕ ಜಮ್ಸದ್ ಎಂಬಾತನ ಮೇಲೆ ಎಫ್ ಐಆರ್ ದಾಖಲಿಸಲಾಗಿದೆ. ಮಾಲೀಕ ಕೇರಳದಲ್ಲಿರುವ ಜಿಎಸ್ ಸೂಟ್ ಮಾಲೀಕ ಎನ್ನಲಾಗಿದೆ. ಎಲ್ಲಿಂದಲೋ ಬಂದು ಪದೆ-ಪದೇ ಕನ್ನಡಿಗರನ್ನು ಕೆರಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಕೋರಮಂಗಲದ ನೆಕ್ಸಸ್ ಮಾಲ್ ಸಮೀಪದಲ್ಲಿ ಜಿ.ಎಸ್.ಸೂಟ್ ಹೋಟೆಲ್ ಇದೆ. ಈ ಹೋಟೆಲ್ನ ಹೊರಭಾಗದ ಡಿಸ್ಪ್ಲೇ ಬೋರ್ಡ್ನಲ್ಲಿ ಅವಹೇಳನಕಾರಿ ಬರಹ ಪ್ರದರ್ಶಿಸಿದ್ದರು.
ಅದನ್ನ ಗಮನಿಸಿದ ಸ್ಥಳೀಯರು ವಿಡಿಯೋ ಮಾಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡಿದ್ದರು. ವಿಡಿಯೋ ನೋಡುತ್ತಿದ್ದಂತೆ ಕನ್ನಡಿಗರು ಕೆರಳಿ ಕೆಂಡಮಂಡಲವಾಗಿ ಆದಷ್ಟು ಬೇಗ ಇವರ ವಿರುದ್ದ ಸೂಕ್ತ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದ್ದರು. ಇದೀಗ ಹೋಟೆಲ್ ಸೀಜ್ ಮಾಡಿ, ಮಾಲೀಕನನ್ನು ಬಂಧಿಸಿ ತಕ್ಕ ಪಾಠ ಕಲಿಸಲಾಗಿದೆ.